ತಮಿಳುನಾಡು: ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ಸ್ವಂತ ಮಗು ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ 4 ವರ್ಷದ ಬಾಲಕಿಯನ್ನು ಹತ್ಯೆಗೈದಿರುವ ಘಟನೆ ತಮಿಳುನಾಡಿನ ಕೊಯಮ್ಮತ್ತೂರಿನಲ್ಲಿ ಭಾನುವಾರ ನಡೆದಿದೆ.
ಆರೋಪಿಯಾದ ತಮಿಳರಸಿ (30) ತನ್ನ ಮಗು ಅಪರ್ಣಶ್ರೀಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾಳೆ. ಈ ಘಟನೆಯಲ್ಲಿ ಮಹಿಳೆಯ ಪ್ರಿಯಕರನಾದ ವಸಂತ್ ಕೂಡ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ತಮಿಳರಸಿ ಮತ್ತು ರಘುಪತಿ ದಂಪತಿಗಳಾಗಿದ್ದು, ಕೆಲವು ತಿಂಗಳುಗಳ ಹಿಂದೆ ಕೌಟುಂಬಿಕ ಕಲಹದಿಂದಾಗಿ ಬೇರ್ಪಟ್ಟಿದ್ದರು. ಈ ಕಾರಣದಿಂದ ತಮಿಳರಸಿ ತನ್ನ 4 ವರ್ಷದ ಮಗಳು ಅಪರ್ಣಶ್ರೀ ಜೊತೆ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ತಮಿಳರಸಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಧರ್ಮಪುರಿ ಜಿಲ್ಲೆಯ ಬಿಲ್ಡರ್ ವಸಂತ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಬೆಳೆಸಿಕೊಂಡಿದ್ದಳು. ಈ ಸಂಬಂಧವನ್ನು ಮುಂದುವರಿಸಲು ಮಗು ಅಡ್ಡಿಯಾಗುತ್ತಿದೆ ಎಂದು ತಮಿಳರಸಿ ಭಾವಿಸಿದ್ದಳು. ಈ ಕಾರಣಕ್ಕಾಗಿ, ತನ್ನ ಸ್ವಂತ ಮಗುವನ್ನು ಕತ್ತು ಹಿಸುಕಿ ಕೊಂದಿರುವ ಆರೋಪ ತಮಿಳರಸಿಯ ಮೇಲಿದೆ.
ತನಿಖೆಯ ಸಂದರ್ಭದಲ್ಲಿ ತಮಿಳರಸಿ ಪೊಲೀಸರಿಗೆ ಕೊಟ್ಟ ಹೇಳಿಕೆಯು ಈ ಘಟನೆಯ ಇನ್ನಷ್ಟು ಮಾಹಿತಿಯನ್ನು ಬಯಲಿಗೆಳೆದಿದೆ. “ನನ್ನ ಪತಿ ರಘುಪತಿಯಿಂದ ಬೇರ್ಪಟ್ಟ ನಂತರ, ನಾನು ವಸಂತ್ ಜೊತೆ ಸಂಬಂಧವನ್ನು ಆರಂಭಿಸಿದೆ. ನಾನು ಅವನನ್ನು ಮದುವೆಯಾಗಲು ನಿರ್ಧರಿಸಿದ್ದೆ. ಆದರೆ, ಅವನು ಮಗುವಿನ ಜೊತೆಗೆ ನನ್ನನ್ನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ‘ನೀನು ಒಬ್ಬೊಂಟಿಯಾಗಿ ಬಂದರೆ ಮಾತ್ರ ನಿನ್ನನ್ನು ಮದುವೆಯಾಗುತ್ತೇನೆ’ ಎಂದು ವಸಂತ್ ಹೇಳಿದ್ದ. ಹೀಗಾಗಿ, ಮಗುವನ್ನು ಕೊಲ್ಲುವುದನ್ನು ಬಿಟ್ಟು ನನಗೆ ಬೇರೆ ದಾರಿಯಿರಲಿಲ್ಲ,” ಎಂದು ತಮಿಳರಸಿ ತಿಳಿಸಿದ್ದಾಳೆ.
ಈ ಘಟನೆಯಲ್ಲಿ ಭಾಗಿಯಾಗಿದ್ದ ವಸಂತನನ್ನು ಕೂಡ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ತಮಿಳರಸಿಯ ಹೇಳಿಕೆಯ ಆಧಾರದ ಮೇಲೆ ವಸಂತ್ನನ್ನು ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
