ತಂದೆ-ಮಗ ಲಾಕಾಪ್‌ ಡೆತ್‌ ಕೇಸ್‌: ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣ ದಂಡನೆ

Untitled design (66)

ಮಧುರೈ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಕಸ್ಟಡಿ ಸಾವಿನ ಪ್ರಕರಣದಲ್ಲಿ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಅಮಾನವೀಯವಾಗಿ ತಂದೆ ಮತ್ತು ಮಗನನ್ನು ಥಳಿಸಿ ಸಾವಿಗೆ ಕಾರಣರಾದ ಒಂಬತ್ತು ಪೊಲೀಸರಿಗೂ ಮರಣದಂಡನೆ ವಿಧಿಸಬೇಕೆಂದು ಮಧುರೈ ಜಿಲ್ಲಾ ನ್ಯಾಯಾಲಯ ಅದೇಶ ಹೊರಡಿಸಿದೆ.

ಘಟನೆಯ ಹಿನ್ನೆಲೆ

2020ರ ಜೂನ್ ತಿಂಗಳಲ್ಲಿ ಇಡೀ ದೇಶ ಕೋವಿಡ್ ಲಾಕ್‌ಡೌನ್‌ನಿಂದ ಕಂಗೆಟ್ಟಿತ್ತು. ಈ ವೇಳೆ ಸಾತನ್‌ಕುಳಂನಲ್ಲಿ ಮರದ ವ್ಯಾಪಾರಿಯಾಗಿದ್ದ ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ಅವರು ನಿಗದಿಗಿಂತ ಹೆಚ್ಚು ಸಮಯ ಅಂಗಡಿ ತೆರೆದಿದ್ದರು ಎಂಬ ಸಣ್ಣ ಕಾರಣಕ್ಕೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಆದರೆ, ಠಾಣೆಗೆ ಕರೆದೊಯ್ದ ನಂತರ ಪೊಲೀಸರು ಮಾನವೀಯತೆಯನ್ನೇ ಮರೆತು ವರ್ತಿಸಿದ್ದರು.

ರಾತ್ರಿ ಇಡೀ ಪೊಲೀಸ್ ಠಾಣೆಯಲ್ಲಿ ಜಯರಾಜ್ ಮತ್ತು ಬೆನಿಕ್ಸ್ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಲಾಠಿಗಳಿಂದ ಕ್ರೂರವಾಗಿ ಥಳಿಸಿ, ಅವರ ಗುಪ್ತಾಂಗಗಳಿಗೂ ಹಲ್ಲೆ ನಡೆಸಲಾಗಿತ್ತು ಎಂಬ ಆಘಾತಕಾರಿ ಅಂಶಗಳು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದ್ದವು. ಪೊಲೀಸರ ಈ ಪೈಶಾಚಿಕ ಕೃತ್ಯದಿಂದಾಗಿ ಜೂನ್ 22ರಂದು ತಂದೆ ಜಯರಾಜ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮರುದಿನವೇ ಮಗ ಬೆನಿಕ್ಸ್ ಕೂಡ ಪ್ರಾಣ ಬಿಟ್ಟಿದ್ದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಮಧುರೈ ಜಿಲ್ಲಾ ನ್ಯಾಯಾಲಯವು ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ (Rarest of the Rare case) ಎಂದು ಅಭಿಪ್ರಾಯಪಟ್ಟಿದೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಈ ಮಟ್ಟದ ಕ್ರೌರ್ಯ ಮೆರೆದಿರುವುದು ಸಹಿಸಲು ಅಸಾಧ್ಯ. ಭವಿಷ್ಯದಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಇಂತಹ ಕೃತ್ಯವೆಸಗಲು ಯೋಚಿಸಬಾರದು, ಅಂತಹ ಎಚ್ಚರಿಕೆಯನ್ನು ಈ ಶಿಕ್ಷೆ ನೀಡಬೇಕು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷೆಗೊಳಗಾದವರಲ್ಲಿ ಇನ್ಸ್‌ಪೆಕ್ಟರ್ ಶ್ರೀಧರ್, ಇಬ್ಬರು ಸಬ್-ಇನ್ಸ್‌ಪೆಕ್ಟರ್‌ಗಳು, ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು ನಾಲ್ವರು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಇನ್ಸ್‌ಪೆಕ್ಟರ್ ಶ್ರೀಧರ್ ಈ ಇಡೀ ಕೃತ್ಯದ ಮಾಸ್ಟರ್‌ಮೈಂಡ್ ಆಗಿದ್ದ ಕಾರಣ ಆತನಿಗೆ ಎರಡು ಬಾರಿ ಗಲ್ಲು ಶಿಕ್ಷೆ ಮತ್ತು 84 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಯಾರು ಹೆಚ್ಚು ಹೊಡೆದರು ಅಥವಾ ಯಾರು ಕಡಿಮೆ ಹಿಂಸೆ ನೀಡಿದರು ಎಂಬುದು ಇಲ್ಲಿ ಮುಖ್ಯವಲ್ಲ, ಎಲ್ಲರೂ ಈ ಹತ್ಯೆಯಲ್ಲಿ ಸಮಾನ ಭಾಗಿಗಳು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಈ ಘಟನೆಯ ನಂತರ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಪೊಲೀಸರ ದೌರ್ಜನ್ಯದ ವಿರುದ್ಧ ಇಡೀ ಭಾರತವೇ ಧ್ವನಿ ಎತ್ತಿತ್ತು. ಚಾರ್ಜ್‌ಶೀಟ್‌ನಲ್ಲಿ ಪೊಲೀಸರ ‘ಥರ್ಡ್ ಡಿಗ್ರಿ’ ಚಿತ್ರಹಿಂಸೆಯ ವಿವರಗಳನ್ನು ಓದಿದ ಯಾರಿಗಾದರೂ ಮೈ ಜುಂ ಎನ್ನುವಂತಿತ್ತು. ಇದೀಗ 6 ವರ್ಷಗಳ ನಂತರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.

Exit mobile version