ಮುಂಬೈ: ಸಾಲ ಮರುಪಾವತಿಯ ಹೆಸರಿನಲ್ಲಿ ಬ್ಯಾಂಕ್ ಏಜೆಂಟ್ಗಳು ಗ್ರಾಹಕರಿಗೆ ನೀಡುತ್ತಿದ್ದ ಮಾನಸಿಕ ಹಿಂಸೆ ಮತ್ತು ಬೆದರಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗ ಹೊಸ ನಿಯಮ ಘೊಷಿಸಿದೆ. ವಾಣಿಜ್ಯ ಬ್ಯಾಂಕುಗಳು ಹಾಗೂ ಹೌಸಿಂಗ್ ಫೈನಾನ್ಸ್ ಕಂಪನಿಗಳಿಗಾಗಿ ಆರ್ಬಿಐ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಇದು ಜುಲೈ 1 ರಿಂದ ಜಾರಿಗೆ ಬರಲಿದೆ.
ಹೊಸ ನಿಯಮಗಳ ಹೂರಣ: ಏಜೆಂಟ್ಗಳಿಗೆ ಲಗಾಮು
ಇನ್ಮುಂದೆ ಬ್ಯಾಂಕ್ ಏಜೆಂಟ್ಗಳು ತಮಗೆ ಇಷ್ಟ ಬಂದಂತೆ ಗ್ರಾಹಕರನ್ನು ನಡೆಸಿಕೊಳ್ಳುವಂತಿಲ್ಲ. ಆರ್ಬಿಐ ರೂಪಿಸಿರುವ ಹೊಸ ಮಾರ್ಗಸೂಚಿಗಳು ಸಾಲಗಾರರ ಘನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ:
-
ಕಾಲ್ ರೆಕಾರ್ಡಿಂಗ್ ಕಡ್ಡಾಯ: ಏಜೆಂಟ್ ಗ್ರಾಹಕರಿಗೆ ಮಾಡುವ ಪ್ರತಿಯೊಂದು ಸಂಭಾಷಣೆಯೂ ರೆಕಾರ್ಡ್ ಆಗಿರಬೇಕು. ಭವಿಷ್ಯದಲ್ಲಿ ವಿವಾದ ಉಂಟಾದಲ್ಲಿ ಇದು ಪ್ರಮುಖ ಸಾಕ್ಷ್ಯವಾಗಲಿದೆ.
-
ಸಮಯದ ಮಿತಿ: ಇನ್ಮುಂದೆ ರಾತ್ರಿ ವೇಳೆ ಫೋನ್ ಮಾಡಿ ಕಾಟ ಕೊಡುವಂತಿಲ್ಲ. ಸಂಜೆ 7 ಗಂಟೆಯ ನಂತರ ಗ್ರಾಹಕರಿಗೆ ಕರೆ ಮಾಡುವುದನ್ನು ನಿಷೇಧಿಸಲಾಗಿದೆ.
-
ಸಂದರ್ಭದ ಗೌರವ: ಗ್ರಾಹಕರ ಮನೆಯಲ್ಲಿ ಸಾವು ಸಂಭವಿಸಿದಾಗ, ಮದುವೆ ಸಂಭ್ರಮವಿದ್ದಾಗ ಅಥವಾ ಹಬ್ಬಗಳ ದಿನಗಳಲ್ಲಿ ವಸೂಲಾತಿಗಾಗಿ ಮನೆಗೆ ಹೋಗುವುದು ಅಥವಾ ಫೋನ್ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
-
ತರಬೇತಿ ಮತ್ತು ಹಿನ್ನೆಲೆ ತಪಾಸಣೆ: ರಿಕವರಿ ಏಜೆಂಟ್ಗಳು IBF ನಿಂದ ಕಡ್ಡಾಯ ವೃತ್ತಿಪರ ತರಬೇತಿ ಪಡೆಯಬೇಕು. ಅಲ್ಲದೆ, ಅವರ ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಿದ ನಂತರವೇ ಬ್ಯಾಂಕುಗಳು ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು.
ಬ್ಯಾಂಕುಗಳೇ ನೇರ ಹೊಣೆ !
ಏಜೆಂಟ್ಗಳು ಮಾಡುವ ಪ್ರತಿಯೊಂದು ತಪ್ಪಿಗೂ ಈಗ ಸಂಬಂಧಪಟ್ಟ ಬ್ಯಾಂಕುಗಳೇ ಜವಾಬ್ದಾರಿಯಾಗುತ್ತವೆ. ಅಸಭ್ಯ ವರ್ತನೆ ಅಥವಾ ತಪ್ಪು ಮಾಹಿತಿ ನೀಡಿ ಸ್ಕೀಮ್ಗಳನ್ನು ಮಾರಾಟ ಮಾಡಿದ್ದರೆ, ಗ್ರಾಹಕರಿಗೆ ಪೂರ್ಣ ಹಣವನ್ನು ಮರುಪಾವತಿಸುವಂತೆ ಆರ್ಬಿಐ ಆದೇಶಿಸಿದೆ. ಬಿಹಾರದಲ್ಲಿ ಸಾಲ ವಸೂಲಾತಿ ವೇಳೆ ನಡೆದ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರ್ಬಿಐ, ಗ್ರಾಹಕರ ಖಾಸಗಿ ಮಾಹಿತಿಯ ಸುರಕ್ಷತೆಗೂ ಒತ್ತು ನೀಡಿದೆ.
ದೂರು ನೀಡುವುದು ಹೇಗೆ?
ಒಂದು ವೇಳೆ ನೀವು ಏಜೆಂಟ್ಗಳಿಂದ ಕಿರುಕುಳ ಅನುಭವಿಸುತ್ತಿದ್ದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿ:
-
ಹಂತ 1: ಮೊದಲು ಸಂಬಂಧಪಟ್ಟ ಬ್ಯಾಂಕಿನ ಕುಂದುಕೊರತೆ ನಿವಾರಣಾ ವಿಭಾಗಕ್ಕೆ ಲಿಖಿತ ದೂರು ನೀಡಿ.
-
ಹಂತ 2: ಬ್ಯಾಂಕ್ 30 ದಿನಗಳಲ್ಲಿ ಸ್ಪಂದಿಸದಿದ್ದರೆ, ಆರ್ಬಿಐ ಒಂಬುಡ್ಸ್ಮನ್ಗೆ (RBI Ombudsman) ದೂರು ಸಲ್ಲಿಸಿ.
-
ದೂರು ಸಲ್ಲಿಸುವ ಮಾರ್ಗ: ಆನ್ಲೈನ್ ಪೋರ್ಟಲ್ https://cms.rbi.org.in ಮೂಲಕ ಅಥವಾ ಇಮೇಲ್ crpc@rbi.org.in ಮೂಲಕ ದೂರು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 14448 ಸಹಾಯವಾಣಿಗೆ ಕರೆ ಮಾಡಬಹುದು.
