“ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಅರಳಿದ ಕಮಲ”: ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿ ಸಂತಸ

Untitled design 2026 05 04T211146.526

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ಎನ್‌ಡಿಎ ಮೈತ್ರಿಕೂಟವು ಸಾಧನೆ ಮಾಡಿರುವ ಹಿನ್ನೆಲೆ, ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಈ ಜಯವನ್ನು ದೇಶದ ಪ್ರಜಾಪ್ರಭುತ್ವದ ವಿಜಯ ಎಂದು ಬಣ್ಣಿಸಿದರು.

ತಮ್ಮ ಭಾಷಣದಲ್ಲಿ ಮೋದಿ ಅವರು 2013ರ ನೆನಪುಗಳನ್ನು ಹಂಚಿಕೊಂಡರು. ಬಿಜೆಪಿ ತನ್ನನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ನಂತರ ಕಾಶಿಗೆ ನಾಮಪತ್ರ ಸಲ್ಲಿಸಲು ತೆರಳಿದ ಸಂದರ್ಭವನ್ನು ಸ್ಮರಿಸಿದ ಅವರು, “ನಾನು ನನ್ನದೇ ಆದ ಇಚ್ಛೆಯಿಂದ ಅಲ್ಲ, ಗಂಗಾ ಮಾತೆಯ ಕರೆಯಿಂದ ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದ್ದೆ ಎಂದು ವಿವರಿಸಿದರು. ಈಗ ಗಂಗೆಯ ಜೊತೆಗೆ ಬ್ರಹ್ಮಪುತ್ರ ಹಾಗೂ ಕಾಮಾಕ್ಯ ದೇವಿಯ ಆಶೀರ್ವಾದವೂ ಬಿಜೆಪಿ ಮೇಲೆ ಇದೆ ಎಂದು ಅವರು ಹೇಳಿದರು.

ಅಸ್ಸಾಂನಲ್ಲಿ ಬಿಜೆಪಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವುದನ್ನು ಉಲ್ಲೇಖಿಸಿದ ಮೋದಿ, “ಜನರು ನಮ್ಮ ಮೇಲೆ ಮೂರನೇ ಬಾರಿ ನಂಬಿಕೆ ಇಟ್ಟಿದ್ದಾರೆ. ಇದು ಹ್ಯಾಟ್ರಿಕ್ ಜಯವಾಗಿದ್ದು, ಅಭಿವೃದ್ಧಿ ಮತ್ತು ವಿಶ್ವಾಸದ ರಾಜಕೀಯಕ್ಕೆ ದೊರೆತ ಮಾನ್ಯತೆ” ಎಂದು ಹೇಳಿದರು.

ಪಶ್ಚಿಮ ಬಂಗಾಳದ ಗೆಲುವು ಕುರಿತು ಮಾತನಾಡಿದ ಮೋದಿ, “ಕಳೆದ ವರ್ಷ ಬಿಹಾರ ಚುನಾವಣೆಯ ಫಲಿತಾಂಶದ ಬಳಿಕ ಗಂಗೆಯು ಬಿಹಾರದಿಂದ ಗಂಗಾಸಾಗರವರೆಗೆ ಹರಿಯುತ್ತದೆ ಎಂದು ಹೇಳಿದ್ದೆ. ಈಗ ಬಂಗಾಳದಲ್ಲಿ ಬಿಜೆಪಿ ಗೆಲುವಿನೊಂದಿಗೆ, ಗಂಗೋತ್ರಿಯಿಂದ ಗಂಗಾಸಾಗರವರೆಗೆ ಕಮಲ ಅರಳಿದೆ” ಎಂದು ಅಭಿಮಾನದಿಂದ ಹೇಳಿದರು. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಆಡಳಿತದಲ್ಲಿರುವುದು ಈ ಮಾತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ ಚುನಾವಣಾ ಆಯೋಗ, ಭದ್ರತಾ ಪಡೆಗಳು ಮತ್ತು ಮತದಾನದಲ್ಲಿ ಭಾಗವಹಿಸಿದ ನಾಗರಿಕರನ್ನು ಮೋದಿ ಶ್ಲಾಘಿಸಿದರು. “ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ನಿಮ್ಮ ಕೊಡುಗೆ ಅನನ್ಯ. ಇತಿಹಾಸ ಇದನ್ನು ನೆನಪಿಸಿಕೊಳ್ಳುತ್ತದೆ” ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ದಾಖಲೆ ಮಟ್ಟದ ಸುಮಾರು 93% ಮತದಾನ ನಡೆದಿರುವುದನ್ನು ಉಲ್ಲೇಖಿಸಿದ ಮೋದಿ, “ಇದು ವಿಶ್ವದ ಗಮನ ಸೆಳೆದ ಘಟನೆಯಾಗಿದೆ. ಭಾರತದ ಪ್ರಜಾಪ್ರಭುತ್ವದ ಶಕ್ತಿ ಮತ್ತು ಜನರ ಪಾಲ್ಗೊಳ್ಳುವಿಕೆಯ ಸಂಕೇತ” ಎಂದು ಹೇಳಿದರು.

ಇದೇ ವೇಳೆ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶಗಳನ್ನೂ ಅವರು ಉಲ್ಲೇಖಿಸಿದರು. ಮಹಾರಾಷ್ಟ್ರ, ಗುಜರಾತ್, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿರುವುದನ್ನು ಅವರು ಸಂತಸದಿಂದ ಸ್ವಾಗತಿಸಿದರು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಗೆಲುವು ವಿಶೇಷವಾಗಿದ್ದು, ಜನರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದ್ದು, ಕಾರ್ಯಕರ್ತರಿಗೆ ನೀಡಿದ ಮಾರ್ಗದರ್ಶನ ಈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಮೋದಿ ಹೇಳಿದರು. ದೇಶದ ವಿವಿಧ ಭಾಗಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದ ಅವರು, “ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವೇ ಈ ಜಯದ ಮೂಲ. ದೊಡ್ಡವರಾಗಲಿ ಸಣ್ಣವರಾಗಲಿ ಎಲ್ಲರೂ ಕಮಲ ಅರಳಿಸಿದ್ದಾರೆ” ಎಂದು ಶ್ಲಾಘಿಸಿದರು.

ತಮಿಳುನಾಡು ಮತ್ತು ಕೇರಳದ ಜನರಿಗೆ ಗೌರವ ಸೂಚಿಸಿದ ಮೋದಿ, “ಇಂದು ವಿಶೇಷ ದಿನ. ಇದು ಭಾರತದ ಉಜ್ವಲ ಭವಿಷ್ಯದ ಸೂಚನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡಿ, ಕಾರ್ಯಕ್ಷಮತೆಯ ರಾಜಕೀಯದಲ್ಲಿ ನಂಬಿಕೆ ಇಡಿ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಸಂಕಲ್ಪವನ್ನು ಬಲಪಡಿಸಿ” ಎಂದು ಕರೆ ನೀಡಿದರು.

ಈ ಗೆಲುವನ್ನು ಐತಿಹಾಸಿಕ ದಿನವೆಂದು ಬಣ್ಣಿಸಿದ ಮೋದಿ, “ವರ್ಷಗಳ ಪರಿಶ್ರಮ ಇಂದು ಫಲ ನೀಡಿದೆ. ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರ ಮುಖಗಳಲ್ಲಿ ಕಾಣುವ ಸಂತೋಷವೇ ನಮ್ಮ ಸಾಧನೆಯ ಪ್ರತಿಬಿಂಬ” ಎಂದು ಹೇಳಿದರು.

Exit mobile version