AI ಉದ್ಯೋಗಗಳನ್ನು ಕಸಿದುಕೊಳ್ಳುವ ಭೀತಿ..? ಭಯಕ್ಕೆ ಸಿದ್ಧತೆಯೇ ಮದ್ದು ಎಂದ ಪ್ರಧಾನಿ ಮೋದಿ

Untitled design 2026 02 18T102736.071

ಹೊಸ ದೆಹಲಿ: ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಇದರ ಬೆನ್ನಲ್ಲೇ ವೃತ್ತಿಪರರಲ್ಲಿ ಉದ್ಯೋಗ ನಷ್ಟದ ಆತಂಕವೂ ಹೆಚ್ಚಾಗುತ್ತಿದೆ. ಈ ಕುರಿತು ಇತ್ತೀಚೆಗೆ ಸುದ್ಧಿಸಂಸ್ಥೆ ಎಎನ್‌ಐ (ANI)ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಐ ಬಗ್ಗೆ ಭಯಪಡುವ ಅಗತ್ಯವಿಲ್ಲ, ಬದಲಿಗೆ ಬದಲಾವಣೆಗೆ ಸಿದ್ಧರಾಗುವುದು ಅಗತ್ಯ ಎಂದು ಸಕಾರಾತ್ಮಕವಾಗಿ ಸಂದೇಶವನ್ನು ನೀಡಿದ್ದಾರೆ.

ಬದಲಾಗಲಿದೆ ಉದ್ಯೋಗದ ಸ್ವರೂಪ

ಪ್ರಧಾನಿ ತಿಳಿಸಿದಂತೆ, ಯಾವುದೇ ಹೊಸ ತಂತ್ರಜ್ಞಾನ ಬಂದಾಗ ಹಳೆಯ ಉದ್ಯೋಗಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ. ಬದಲಿಗೆ, ಅವುಗಳ ಕೆಲಸದ ವಿಧಾನ ಅಥವಾ ಸ್ವರೂಪ ಬದಲಾಗುತ್ತದೆ (Redefined). ತಂತ್ರಜ್ಞಾನವು ಕೆಲಸಗಳನ್ನು ಕಸಿದುಕೊಳ್ಳುವುದಿಲ್ಲ ಎಂಬುದು ಇತಿಹಾಸದ ಪುಟಗಳನ್ನು ತಿರುವಿದರೆ ತಿಳಿಯುತ್ತದೆ. ಕಂಪ್ಯೂಟರ್ ಬಂದಾಗಲೂ ಇಂತಹುದೇ ಭೀತಿ ಇತ್ತು, ಆದರೆ ಅದು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸಿತು. ಡಿಜಿಟಲ್ ರೂಪಾಂತರವು ಭಾರತದ ಆರ್ಥಿಕತೆಗೆ ಹೊಸ ತಾಂತ್ರಿಕ ಉದ್ಯೋಗಗಳನ್ನು ಸೇರಿಸಲಿದೆಯೇ ಹೊರತು ಕಸಿದುಕೊಳ್ಳುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಐ ಕ್ಷೇತ್ರದಲ್ಲಿ ಭಾರತದ ‘ತ್ರಿಶಕ್ತಿ’ ಆಶಯ

ಭಾರತವು ಕೇವಲ ತಂತ್ರಜ್ಞಾನದ ಗ್ರಾಹಕ ರಾಷ್ಟ್ರವಾಗದೆ, ತಂತ್ರಜ್ಞಾನದ ಉತ್ಪಾದಕ ರಾಷ್ಟ್ರವಾಗಬೇಕು ಎಂಬುದು ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆ. ಇದಕ್ಕಾಗಿ ಅವರು ಮೂರು ಪ್ರಮುಖ ಸ್ತಂಭಗಳನ್ನು ಗುರುತಿಸಿದ್ದಾರೆ:

  1. ಸಾರ್ವಭೌಮತ್ವ (Sovereignty): ಭಾರತದ ದತ್ತಾಂಶ ಮತ್ತು ತಂತ್ರಜ್ಞಾನ ಭಾರತದ ನಿಯಂತ್ರಣದಲ್ಲೇ ಇರಬೇಕು.

  2. ಅಂತರ್ಗತತೆ (Inclusivity): ಎಐ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು.

  3. ನಾವೀನ್ಯತೆ (Innovation): ಹೊಸ ಸಂಶೋಧನೆಗಳ ಮೂಲಕ ಜಗತ್ತಿಗೆ ಮಾದರಿಯಾಗಬೇಕು.

ಜಾಗತಿಕವಾಗಿ ಅಗ್ರ ಮೂರು ಎಐ ಸೂಪರ್ ಪವರ್ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಲಿದೆ. ನಮ್ಮ ಎಐ ಮಾದರಿಗಳು ಪ್ರಪಂಚದಾದ್ಯಂತ ಬಿಲಿಯನ್ ಜನರಿಗೆ ಅವರವರ ಸ್ಥಳೀಯ ಭಾಷೆಗಳಲ್ಲಿ ಸೇವೆ ನೀಡುವಂತಾಗಬೇಕು. ಭಾರತದ ಎಐ ಸ್ಟಾರ್ಟ್‌ಅಪ್‌ಗಳು ಮುಂದಿನ ದಿನಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಮೋದಿ ಭವಿಷ್ಯ ನುಡಿದಿದ್ದಾರೆ. ಜೊತೆಗೆ ಎಐ ತಂತ್ರಜ್ಞಾನವು ಭಾರತೀಯರ ಜೀವನೋಪಾಯಕ್ಕೆ ಭೀತಿಯಾಗದೆ, ಅವರ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

Exit mobile version