ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾರೆ. ಡಿಸೆಂಬರ್ 25 ರಂದು ನಡೆದ ಈ ಜಂಟಿ ಕಾರ್ಯಾಚರಣೆ, ಒಡಿಶಾದಲ್ಲಿ ಸಕ್ರಿಯವಾಗಿದ್ದ ಮಾವೋವಾದಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪೊಲೀಸರು ನೀಡಿದ ಮಾಹಿತಿಯಂತೆ, ಬುಧವಾರ ಕಂಧಮಲ್ ಜಿಲ್ಲೆಯ ಬೆಲ್ಸರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗುಮ್ಮಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ, ಗುರುವಾರ ಚಕಪಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ನರಿಗಿಲ್ಲಾ ಅರಣ್ಯ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್ಕೌಂಟರ್ನಲ್ಲಿ ಇನ್ನೂ ಮೂವರು ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ವಿಶೇಷ ಗುಪ್ತಚರ ವಿಭಾಗ (SIW)ದಿಂದ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಈ ಕಾರ್ಯಾಚರಣೆಯನ್ನು ರೂಪಿಸಲಾಗಿತ್ತು. ಮಾವೋವಾದಿಗಳು ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದು, ದೊಡ್ಡ ದಾಳಿ ನಡೆಸುವ ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆ, ಒಟ್ಟು 23 ತಂಡಗಳನ್ನು ಒಳಗೊಂಡ ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿದವು. ಈ ತಂಡಗಳಲ್ಲಿ 20 ವಿಶೇಷ ಕಾರ್ಯಾಚರಣೆ ಗುಂಪು (SOG), ಎರಡು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ತಂಡಗಳು ಹಾಗೂ ಒಂದು ಗಡಿ ಭದ್ರತಾ ಪಡೆ (BSF) ತಂಡವೂ ಸೇರಿದ್ದವು.
ಕಂಧಮಲ್ ಜಿಲ್ಲೆಯ ಚಕಪಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶಗಳ ಜೊತೆಗೆ, ಗಂಜಾಂ ಜಿಲ್ಲೆಯ ರಂಭಾ ಅರಣ್ಯ ಪ್ರದೇಶಗಳಲ್ಲಿಯೂ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತು. ಡಿಸೆಂಬರ್ 25ರ ಬೆಳಿಗ್ಗೆಯಿಂದಲೇ ಹಲವು ಸ್ಥಳಗಳಲ್ಲಿ ಗುಂಡಿನ ಚಕಮಕಿಗಳು ನಡೆದಿದ್ದು, ಹಲವು ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಎನ್ಕೌಂಟರ್ ಬಳಿಕ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ, ಸಮವಸ್ತ್ರ ಧರಿಸಿದ್ದ ನಾಲ್ಕು ಮಾವೋವಾದಿಗಳ ಮೃತದೇಹಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಈ ಮೃತದೇಹಗಳಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ. ಸ್ಥಳದಿಂದ ಎರಡು INSAS ರೈಫಲ್ಗಳು ಹಾಗೂ ಒಂದು .303 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಹತವಾದ ಮಾವೋವಾದಿಗಳಲ್ಲಿ ಒಬ್ಬನನ್ನು ಗಣೇಶ್ ಉಯಿಕೆ ಎಂದು ಗುರುತಿಸಲಾಗಿದೆ. ಆತ ಕೇಂದ್ರ ಸಮಿತಿಯ ಸದಸ್ಯನಾಗಿದ್ದು, ಒಡಿಶಾದಲ್ಲಿ ಮಾವೋವಾದಿ ಚಟುವಟಿಕೆಗಳ ಪ್ರಮುಖ ನಾಯಕನಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
