ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ನಾಲ್ವರಿಗೆ ಗಂಭೀರ ಗಾಯ

Untitled design 2026 02 14T135422.963

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಭೀಕರ ಅವಘಡ ಸಂಭವಿಸಿದ್ದು, ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಏಕಾಏಕಿ ಕುಸಿದು ಹಲವಾರು ವಾಹನಗಳ ಮೇಲೆ ಬಿದ್ದ ಘಟನೆ ಪಶ್ಚಿಮ ಮುಲುಂದ್ ಪ್ರದೇಶದಲ್ಲಿ ನಡೆದಿದೆ. ಎಲ್‌ಬಿಎಸ್ (LBS) ರಸ್ತೆಯ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಮೀಪ ಈ ಘಟನೆ ಸಂಭವಿಸಿದೆ.

ಮಧ್ಯಾಹ್ನ ವೇಳೆಯಲ್ಲಿ ವಾಹನ ಸಂಚಾರ ಜೋರಾಗಿದ್ದ ಸಮಯದಲ್ಲೇ ಈ ದುರ್ಘಟನೆ ನಡೆದಿದೆ. ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮೆಟ್ರೋ ಪಿಲ್ಲರ್‌ನ ಸ್ಲ್ಯಾಬ್ ಭಾಗ ಕುಸಿದು ರಸ್ತೆ ಮೇಲೆ ಚಲಿಸುತ್ತಿದ್ದ ಆಟೋ, ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದೆ. ಘಟನೆಯಿಂದ ವಾಹನಗಳು ಜಖಂಗೊಂಡಿದ್ದು, ಕನಿಷ್ಠ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಿಲ್ಲರ್ ಕುಸಿತದಿಂದ ರಸ್ತೆ ಮೇಲೆ ಇದ್ದವರು ಪ್ರಾಣಭೀತಿಯಿಂದ ಓಡಿಹೋಗಿದ್ದು, ಕೆಲವರು ವಾಹನಗಳೊಳಗೆ ಸಿಲುಕಿಕೊಂಡವರನ್ನು ರಕ್ಷಿಸಲು ತಕ್ಷಣ ಮುಂದಾಗಿದ್ದಾರೆ. ಆಟೋದಲ್ಲಿ ಸಿಲುಕಿಕೊಂಡಿದ್ದವರನ್ನು ಹೊರತೆಗೆದಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ..

ಘಟನೆ ಕುರಿತು ಮಾಹಿತಿ ಪಡೆದ ತಕ್ಷಣವೇ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ತಕ್ಷಣ ಆರಂಭಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ದೇವಾಲಯ ಕುಸಿತ: ಭಾರತೀಯ ಮೂಲದ ವ್ಯಕ್ತಿ ಸೇರಿ ನಾಲ್ವರು ಸಾವು

 

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಕ್ವಾಜುಲು–ನಟಾಲ್ (KwaZulu-Natal) ಪ್ರಾಂತ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಮಹಡಿಗಳ ಹಿಂದೂ ದೇವಾಲಯವೊಂದು ಕುಸಿದು ಬಿದ್ದಿದೆ. ಇದರ ಪರಿಣಾಮ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸೇರಿ ನಾಲ್ವರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಇಥೆಕ್ವಿನಿ ಮಹಾನಗರದ ಉತ್ತರ ಭಾಗದಲ್ಲಿರುವ ರೆಡ್‌ಕ್ಲಿಫ್ ಪ್ರದೇಶದ ಕಡಿದಾದ ಬೆಟ್ಟದ ಮೇಲೆ ನ್ಯೂ ಅಹೋಬಿಲಂ ಟೆಂಪಲ್ ಆಫ್ ಪ್ರೊಟೆಕ್ಷನ್ (New Ahobilam Temple of Protection) ಎಂಬ ಹಿಂದೂ ದೇವಾಲಯವಿದೆ. ಈ ದೇಗುಲದ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ವೇಳೆ, ಶನಿವಾರ ಬೆಳಿಗ್ಗೆ ದೇವಾಲಯದ ಒಂದು ಭಾಗ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಕಟ್ಟಡ ಕಾರ್ಮಿಕರು ಹಾಗೂ ಭಕ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಭಾರೀ ಗಾತ್ರದ ಕಂಕ್ರೀಟ್ ಮತ್ತು ಕಲ್ಲುಮಣ್ಣುಗಳಡಿ ಹಲವರು ಸಿಲುಕಿದ್ದಾರೆ ಎಂದು ಹೇಳಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಈ ದುರ್ಘಟನೆಯಲ್ಲಿ ಇಬ್ಬರು ಕಟ್ಟಡ ಕಾರ್ಮಿಕರು ಮತ್ತು ಓರ್ವ ಭಕ್ತ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ ರಕ್ಷಣಾ ತಂಡಗಳು ಶನಿವಾರ (ಡಿ.13) ಇನ್ನೊಬ್ಬರ ಮೃತದೇಹವನ್ನು ಅವಶೇಷಗಳ ಅಡಿಯಿಂದ ಹೊರತೆಗೆದ ಬಳಿಕ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಮೃತರಲ್ಲಿ 52 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸೇರಿದ್ದು, ಅವರನ್ನು ದೇವಾಲಯ ಟ್ರಸ್ಟ್‌ನ ಕಾರ್ಯನಿರ್ವಾಹಕ ಸದಸ್ಯ ಹಾಗೂ ನಿರ್ಮಾಣ ಯೋಜನೆಯ ವ್ಯವಸ್ಥಾಪಕ ವಿಕಿ ಜೈರಾಜ್ ಪಾಂಡೆ ಎಂದು ಗುರುತಿಸಲಾಗಿದೆ. ಪಾಂಡೆ ಅವರು ಕಳೆದ ಸುಮಾರು ಎರಡು ವರ್ಷಗಳಿಂದ ದೇವಾಲಯದ ಅಭಿವೃದ್ಧಿ ಹಾಗೂ ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ದೇವಾಲಯಕ್ಕೆ ಸಂಬಂಧಿಸಿದ ದತ್ತಿ ಸಂಸ್ಥೆಯಾದ ಫುಡ್ ಫಾರ್ ಲವ್ (Food for Love) ಸಂಸ್ಥೆಯ ನಿರ್ದೇಶಕ ಸನ್ವೀರ್ ಮಹಾರಾಜ್ ಅವರು ಪಾಂಡೆ ಅವರ ಸಾವನ್ನು ದೃಢಪಡಿಸಿದ್ದಾರೆ. ಪಾಂಡೆ ಅವರು ಧಾರ್ಮಿಕ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಯಾಗಿದ್ದರು ಎನ್ನಲಾಗಿದೆ.

ಘಟನೆಯ ಬಳಿಕ ತಕ್ಷಣವೇ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು. ಆದರೆ ಶನಿವಾರ ಮಧ್ಯಾಹ್ನದಿಂದ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವಶೇಷಗಳ ಅಡಿಯಲ್ಲಿ ಇನ್ನೂ ಎಷ್ಟು ಜನ ಸಿಲುಕಿದ್ದಾರೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 
Exit mobile version