ನವದೆಹಲಿ: ಭಾರತದ ಸಂಸತ್ತಿನ ಮೇಲಿನ ದಾಳಿ ಮತ್ತು ಪುಲ್ವಾಮಾ ಹತ್ಯಾಕಾಂಡದ ಮಾಸ್ಟರ್ ಮೈಂಡ್, ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಜರ್ನ ಅಂತ್ಯಕಾಲ ಹತ್ತಿರವಾಗಿದೆಯೇ ? ಜಾಗತಿಕ ಗುಪ್ತಚರ ವಲಯದಲ್ಲಿ ಈಗ ಇಂತಹದೊಂದು ದೊಡ್ಡ ಪ್ರಶ್ನೆ ಎದ್ದಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 21 ನಿಮಿಷಗಳ ಆಡಿಯೋ ಕ್ಲಿಪ್, ಈ ಜಾಗತಿಕ ಭಯೋತ್ಪಾದಕ ಮಾರಕ ಕಾಯಿಲೆಯಿಂದ ಬಳಲುತ್ತಿರುವುದನ್ನು ದೃಢಪಡಿಸುವಂತಿದೆ.
21 ನಿಮಿಷಗಳ ಆಡಿಯೋದಲ್ಲಿ ಏನಿದೆ..?
ರಂಜಾನ್ ಹಬ್ಬದ ಮುನ್ನಾದಿನದಂದು ಜೆಎಂ ಕೆಡರ್ಗಳಿಗಾಗಿ ಬಿಡುಗಡೆ ಮಾಡಲಾದ ಈ ಆಡಿಯೋದಲ್ಲಿ ಮಸೂದ್ ಅಜರ್ ತೀವ್ರವಾದ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ. ಸಾಮಾನ್ಯವಾಗಿ ತನ್ನನ್ನು ತಾನು ಪ್ರಬಲ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದ ಅಜರ್, ಈ ಬಾರಿ ತನ್ನ ಚೇತರಿಕೆಗಾಗಿ ಬೆಂಬಲಿಗರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಎಂದು ಕೋರಿದ್ದಾನೆ. ಭಯೋತ್ಪಾದಕ ಸಂಘಟನೆಯೊಂದರ ಮುಖ್ಯಸ್ಥ ಇಷ್ಟು ಬಹಿರಂಗವಾಗಿ ತನ್ನ ದೌರ್ಬಲ್ಯವನ್ನು ಪ್ರದರ್ಶಿಸುವುದು ಅಪರೂಪದ ಸಂಗತಿಯಾಗಿದೆ.
T*rror!st MASOOD AZHAR released an audio in which he can be heard CRYING (for a change)
Expected!!!
⚠️No voice modulations done ; threatening edited out with static sound.
We hv added video from inside his T*rr0r camp destroyed by Indian forces, just to rub salt into his… https://t.co/aMA0yicVHL pic.twitter.com/76FBNvD4zU
— Levina🇮🇳 (@LevinaNeythiri) May 12, 2025
ಗುಪ್ತಚರ ಮೂಲಗಳ ಪ್ರಕಾರ, ಮಸೂದ್ ಅಜರ್ ಸದ್ಯ ಪಾಕಿಸ್ತಾನದ ಯಾವುದೋ ಸುರಕ್ಷಿತ ತಾಣದಲ್ಲಿ ರಹಸ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ದೈಹಿಕ ಸ್ಥಿತಿ ವೇಗವಾಗಿ ಕ್ಷೀಣಿಸುತ್ತಿದ್ದರೂ, ಇಸ್ಲಾಮಾಬಾದ್ನ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ. ಹತ್ತು ವರ್ಷಗಳಿಂದ ವಿಶ್ವಸಂಸ್ಥೆಯು ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದರೂ, ಪಾಕಿಸ್ತಾನವು ಆತನ ಅಸ್ತಿತ್ವವನ್ನೇ ನಿರಾಕರಿಸುತ್ತಾ ಬಂದಿದೆ.
ಒಂದು ವೇಳೆ ಅಜರ್ ಮೃತಪಟ್ಟರೆ ಅಥವಾ ಸಂಘಟನೆಯನ್ನು ಮುನ್ನಡೆಸಲು ಅಸಮರ್ಥನಾದರೆ, ಜೈಶ್-ಎ-ಮೊಹಮ್ಮದ್ನ ಚುಕ್ಕಾಣಿ ಆತನ ಕಿರಿಯ ಸಹೋದರ ಅಬ್ದುಲ್ ರೌಫ್ ಅಸ್ಗರ್ ಕೈ ಸೇರುವುದು ಬಹುತೇಕ ಖಚಿತ. ಅಸ್ಗರ್ ಈಗಾಗಲೇ ಸಂಘಟನೆಯ ಕಾರ್ಯಾಚರಣೆಯ ಹಿಡಿತ ಹೊಂದಿದ್ದು, ಭಾರತದ ವಿರುದ್ಧದ ಹಲವಾರು ಹಿಂಸಾತ್ಮಕ ದಾಳಿಗಳಲ್ಲಿ ಭಾಗಿಯಾಗಿದ್ದಾನೆ. ಅಜರ್ ಕೇವಲ ಸೈದ್ಧಾಂತಿಕ ಮುಖವಾಗಿದ್ದರೆ, ಅಸ್ಗರ್ ಮತ್ತಷ್ಟು ಕ್ರೂರವಾಗಿ ಭಯೋತ್ಪಾದಕ ಕಾರ್ಯಸೂಚಿಯನ್ನು ಮುಂದುವರಿಸುವ ಅಪಾಯವಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಮಸೂದ್ ಅಜರ್ ಎಂಬ ಹೆಸರು ಭಾರತದ ಪಾಲಿಗೆ ಭೀತಿಯ ಸಂಕೇತ. 1994 ರಲ್ಲಿ ಭಾರತದಲ್ಲಿ ಬಂಧಿತನಾಗಿದ್ದ ಈತನನ್ನು, 1999 ರ ಇಂಡಿಯನ್ ಏರ್ಲೈನ್ಸ್ ವಿಮಾನ ಐಸಿ-814 ಅಪಹರಣದ ವೇಳೆ ಒತ್ತೆಯಾಳುಗಳ ಬದಲಿಗೆ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ನಂತರ ಜೈಶ್-ಎ-ಮೊಹಮ್ಮದ್ ಸ್ಥಾಪಿಸಿದ ಈತ, 2001 ರ ಸಂಸತ್ ಭವನದ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಹತ್ಯಾ ದಾಳಿಯನ್ನು ಸಂಯೋಜಿಸಿದ್ದ. ಈತನ ಕೃತ್ಯಗಳಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಮೇ 1, 2019 ರಂದು ವಿಶ್ವಸಂಸ್ಥೆಯು ಈತನನ್ನು ಕಪ್ಪುಪಟ್ಟಿಗೆ ಸೇರಿಸಿತು.
