ಮಹಾಶಿವರಾತ್ರಿಯಂದೇ ಮಹಾಕುಂಭ ಮೇಳಕ್ಕೆ ತೆರೆ: ಅಂತಿಮ ಅಮೃತ ಸ್ನಾನಕ್ಕೆ ಕೋಟ್ಯಂತರ ಭಕ್ತರ ಆಗಮನ, ಬಿಗಿ ಭದ್ರತೆ!

BeFunky collage (77)

ಉತ್ತರ ಪ್ರದೇಶದ ಪ್ರಯಾಗರಾಜ್ ನಡೆಯುತ್ತಿರುವ ಜಗತ್ತಿನಲ್ಲೇ ಅತಿದೊಡ್ಡ ಧಾರ್ಮಿಕ ಹಬ್ಬ  ಮಹಾ ಕುಂಭ ಮೇಳವು ಮಹಾ ಶಿವರಾತ್ರಿಯ ದಿನ (ಬುಧವಾರ) ಅಂತ್ಯಗೊಳ್ಳಿದೆ.

144 ವರ್ಷಗಳಿಗೊಮ್ಮೆ ಮಾತ್ರ ನಡೆಯುವ ಈ ಧಾರ್ಮಿಕ ಮಹಾಸಮಾರಂಭಕ್ಕೆ ದೇಶ-ವಿದೇಶದಿಂದ ಸುಮಾರು 64 ಕೋಟಿ ಭಕ್ತರು ಭಾಗವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಅಂತಿಮ ‘ಅಮೃತ ಸ್ನಾನ’ ಮಾಡಲು ಕೋಟ್ಯಂತರ ಜನರು ಹರಿದು ಬಂದಿದ್ದರು. ಮಂಗಳವಾರದಿಂದಲೇ ಸಂಗಮ ತೀರದಲ್ಲಿ ಭಕ್ತರ ಸಾಗರ ಹರಿಯುವ ದೃಶ್ಯಗಳು ಕಾಣಸಿಕ್ಕಿದವು.

 

ಶಿವರಾತ್ರಿಯ ಸಂದರ್ಭದಲ್ಲಿ ಭಕ್ತರ ಸುರಕ್ಷತೆಗಾಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತ್ರಿವೇಣಿ ಸಂಗಮ, ಅಯೋಧ್ಯೆ, ಮತ್ತು ಕಾಶಿ ವಿಶ್ವನಾಥ ದೇವಸ್ಥಾನದಂತಹ ಪ್ರಮುಖ ಸ್ಥಳಗಳಲ್ಲಿ CCTV ಕ್ಯಾಮೆರಾಗಳು, ಡ್ರೋನ್ ಮತ್ತು ವಿಶೇಷ ದಳಗಳನ್ನು ನಿಯೋಜಿಸಲಾಗಿತ್ತು. ಅಂತಿಮ ದಿನದ ‘ಅಮೃತ ಸ್ನಾನ’ಕ್ಕೆ ಮಾಡಿಕೊಳ್ಳಲಾದ ತಯಾರಿಗಳ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಪರಿಶೀಲನೆ ನಡೆಸಿದ್ದರು. ಆಯೋಜನೆಗಳನ್ನು ಸುಗಮ  ಎಂದು ಖಚಿತಪಡಿಸಿದ್ದರು.

ಶಿವರಾತ್ರಿಯಂದು ಕಾಶಿ ವಿಶ್ವನಾಥ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆಯಿಂದ, VIP ದರ್ಶನ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಸಾಮಾನ್ಯ ಭಕ್ತರಿಗೆ ಸುಗಮ ದರ್ಶನಕ್ಕೆ ಪ್ರಾಶಸ್ತ್ಯ ನೀಡಲಾಯಿತು.

ಜನವರಿ 13ರಂದು ಪ್ರಾರಂಭವಾದ ಈ ಮಹಾಕುಂಭ ಮೇಳದಲ್ಲಿ ನಾಗಾ ಸಾಧುಗಳ ಭವ್ಯ ಮೆರವಣಿಗೆಗಳು ಮತ್ತು ಮೂರು ಪ್ರಮುಖ ಅಮೃತ ಸ್ನಾನಗಳು ನಡೆದವು. ಯೋಗಿ ಆದಿತ್ಯನಾಥ್ ಇದನ್ನು “ಶತಮಾನದ ಅಪರೂಪದ ಘಟನೆ” ಎಂದು ಹೇಳಿದ್ದಾರೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಈ ವರ್ಷದ ಮೇಳವು ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗಿ ರೂಪುಗೊಂಡಿದೆ.

ಸಾವಿರಾರು ವರ್ಷಗಳ ಸಂಪ್ರದಾಯವನ್ನು ಮುಂದುವರಿಸಿದ ಮಹಾಕುಂಭಮೇಳವು ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಸಹಿಷ್ಣುತೆಯ ಪ್ರತೀಕವಾಗಿ ಉಳಿದಿದೆ.

Exit mobile version