‘ದೇವಾಲಯದಲ್ಲಿ ದೀಪ ಹಚ್ಚಲೇಬೇಕು’: ಮಧುರೈ ಬೆಟ್ಟದ ದೀಪ ವಿವಾದಕ್ಕೆ ತೆರೆ ಎಳೆದ ಹೈಕೋರ್ಟ್

Untitled design 2026 01 06T131752.504

ಚೆನ್ನೈ, ಜ.6: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಣ್‌ಕುಂದ್ರಂ ಬೆಟ್ಟದಲ್ಲಿ ಕಾರ್ತಿಗೈ ದೀಪ ಬೆಳಗಿಸುವುದಕ್ಕೆ ಸಂಬಂಧಿಸಿದ ವಿವಾದಕ್ಕೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ದೀಪ ಬೆಳಗಿಸಲು ಅನುಮತಿ ನೀಡಿದ ಹಿಂದಿನ ಆದೇಶವನ್ನು ಎತ್ತಿಹಿಡಿದಿದೆ. ಈ ಮೂಲಕ ಹಲವು ವರ್ಷಗಳಿಂದ ನಡೆಯುತ್ತಿದ್ದ ಧಾರ್ಮಿಕ ಹಾಗೂ ಆಡಳಿತಾತ್ಮಕ ಸಂಘರ್ಷಕ್ಕೆ ನ್ಯಾಯಾಲಯ ಅಂತಿಮ ತೆರೆ ಎಳೆದಿದೆ.

ತಿರುಪರಣ್‌ಕುಂದ್ರಂ ಮುರುಗನ್ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಮಧುರೈ ಜಿಲ್ಲಾಧಿಕಾರಿ ಹಾಗೂ ಮಧುರೈ ನಗರ ಪೊಲೀಸ್ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ಪರಿಶೀಲಿಸಿದ್ದು, ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರ ವಿಭಾಗೀಯ ಪೀಠ, ಕಾರ್ತಿಗೈ ದೀಪ ಆಚರಣೆ ಸಾರ್ವಜನಿಕ ಶಾಂತಿ ಅಥವಾ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ರಾಜ್ಯ ಸರ್ಕಾರದ ವಾದವನ್ನು ತಿರಸ್ಕರಿಸಿತ್ತು.

ನ್ಯಾಯಾಲಯ ತನ್ನ ತೀರ್ಪಿನಲ್ಲಿ, “ಕಾರ್ತಿಗೈ ದೀಪದಂತಹ ಶತಮಾನಗಳ ಪುರಾತನ ಧಾರ್ಮಿಕ ಆಚರಣೆಯನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗಿದೆ” ಎಂದು ಅಭಿಪ್ರಾಯಪಟ್ಟಿತ್ತು. ಈ ವಿಚಾರದಲ್ಲಿ ಜಿಲ್ಲಾಡಳಿತವು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಮಾತ್ರ ನೋಡುವ ಬದಲು, ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮಧ್ಯಸ್ಥಿಕೆಯ ಅವಕಾಶವಾಗಿ ಬಳಸಬೇಕಿತ್ತು ಎಂದು ಕೋರ್ಟ್ ಸೂಚಿಸಿದೆ.

ತಿರುಪರಣ್‌ಕುಂದ್ರಂ ಬೆಟ್ಟವು ಪುರಾತತ್ವ ತಾಣವಾಗಿರುವುದರಿಂದ, ಅಲ್ಲಿ ನಡೆಯುವ ಯಾವುದೇ ಚಟುವಟಿಕೆಯು ಕಾಯ್ದೆಗಳ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ದೀಪ ಬೆಳಗಿಸುವ ಆಚರಣೆಗೆ ಅನುಮತಿ ನೀಡಿದರೂ, ಸಮಾರಂಭಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗುವುದು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಯೊಂದಿಗೆ ಅಗತ್ಯ ಸಮಾಲೋಚನೆ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯಗಳನ್ನು ಕಾನೂನು ಚೌಕಟ್ಟಿನೊಳಗೆ ಗೌರವಿಸುವುದು ಆಡಳಿತದ ಕರ್ತವ್ಯ” ಎಂದು ನ್ಯಾಯಪೀಠ ಹೇಳಿದ್ದು, ಕೇವಲ ಅಶಾಂತಿಯ ಭೀತಿಯ ಆಧಾರದ ಮೇಲೆ ಸಂಪ್ರದಾಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ಮಹತ್ವದ ಸಂದೇಶ ನೀಡಿದೆ.

ಬಿಜೆಪಿ ಪ್ರತಿಕ್ರಿಯೆ

ಮಧುರೈ ಪೀಠದ ಈ ತೀರ್ಪನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ವಾಗತಿಸಿದ್ದು, ಇದನ್ನು ತಮಿಳುನಾಡಿನಲ್ಲಿ “ಹಿಂದೂ ನಂಬಿಕೆಗಳಿಗೆ ದೊರೆತ ದೊಡ್ಡ ಗೆಲುವು” ಎಂದು ಬಣ್ಣಿಸಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ, ಈ ವಿಚಾರದಲ್ಲಿ ಆಡಳಿತಾರೂಢ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ದೋಷಾರೋಪಣೆ ಗೊತ್ತುವಳಿ, ಸಂವಿಧಾನ ವಿರೋಧಿ ಹಾಗೂ ಹಿಂದೂ ವಿರೋಧಿ ಮನೋಭಾವನೆ ಹೊಂದಿರುವ ಗ್ಯಾಂಗ್ ಸೋತಿದೆ. ಈ ವಿವಾದವನ್ನು ಬೆಂಬಲಿಸಿದ್ದಕ್ಕಾಗಿ ಅವರು ಈಗ ಕ್ಷಮೆಯಾಚಿಸಬೇಕಲ್ಲವೇ?” ಎಂದು ಶೆಹಜಾದ್ ಪೂನವಾಲ್ಲಾ ಸಾಮಾಜಿಕ ಜಾಲತಾಣ X ನಲ್ಲಿ ಪ್ರಶ್ನಿಸಿದ್ದಾರೆ. ಈ ತೀರ್ಪು ಡಿಎಂಕೆಗೆ ದೊಡ್ಡ ಮುಜುಗರ ತಂದಿದೆ ಎಂದು ಬಿಜೆಪಿ ಆರೋಪಿಸಿದೆ.

Exit mobile version