ಕೋಲ್ಕತ್ತಾದಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ, ಮೆಟ್ರೋ ಸೇವೆ ಸ್ಥಗಿತ

Untitled design 2025 09 23t174828.813

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಸೋಮವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಈ ಭಾರೀ ಮಳೆಯಿಂದ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ರಸ್ತೆಗಳು, ಮನೆಗಳ ಒಳಗೆ ನೀರು ನುಗ್ಗಿದ್ದು, ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕೋಲ್ಕತ್ತಾ ಪೊಲೀಸರ ಪ್ರಕಾರ,  ಮಂಗಳವಾರ ಬೆಳಿಗ್ಗೆ 5:15ರ ಸುಮಾರಿಗೆ 60 ವರ್ಷದ ಜಿತೇಂದ್ರ ಸಿಂಗ್ ಎಂಬಾತ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದಿದ್ದಾರೆ.

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಮಂಗಳವಾರ ಬೆಳಿಗ್ಗೆಯಿಂದ ರಸ್ತೆಗಳು ಜಲಾವೃತವಾಗಿವೆ. ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಲಯದಿಂದ, ದಕ್ಷಿಣ ಬಂಗಾಳದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿತ್ತು. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ವರದಿಯ ಪ್ರಕಾರ, ಗರಿಯಾ ಕಾಂದಾಹಾರಿಯಲ್ಲಿ ಕೇವಲ ಕೆಲವೇ ಗಂಟೆಗಳಲ್ಲಿ 332 ಮಿ.ಮೀ. ಮಳೆ ದಾಖಲಾಗಿದೆ. ಜೋಧ್‌ಪುರ್ ಪಾರ್ಕ್‌ನಲ್ಲಿ 285 ಮಿ.ಮೀ., ಕಾಳಿಘಾಟ್‌ನಲ್ಲಿ 280 ಮಿ.ಮೀ., ಟಾಪ್ಸಿಯಾದಲ್ಲಿ 275 ಮಿ.ಮೀ., ಮತ್ತು ಬಾಲಿಗಂಜ್‌ನಲ್ಲಿ 264 ಮಿ.ಮೀ. ಮಳೆ ಸುರಿದಿದೆ. ಈ ಧಾರಾಕಾರ ಮಳೆಯಿಂದಾಗಿ ನಗರದ ಒಳಚರಂಡಿ ವ್ಯವಸ್ಥೆ ಕುಸಿದು, ರಸ್ತೆಗಳು ನದಿಗಳಂತಾಗಿವೆ.

ಮೆಟ್ರೋ ಸೇವೆ ಸ್ಥಗಿತ

ಭಾರೀ ಮಳೆಯಿಂದಾಗಿ ಕೋಲ್ಕತ್ತಾದ ಬ್ಲೂ ಲೈನ್ ಮೆಟ್ರೋ ಸೇವೆಯ ಮಹಾನಾಯಕ್ ಉತ್ತಮ್ ಕುಮಾರ್ ಮತ್ತು ರವೀಂದ್ರ ಸರೋವರ್ ನಿಲ್ದಾಣಗಳ ನಡುವಿನ ಭಾಗದಲ್ಲಿ ಜಲಾವೃತವಾದ ಕಾರಣ, ಸಾರ್ವಜನಿಕ ಸುರಕ್ಷತೆಗಾಗಿ ಈ ಭಾಗದ ಮೆಟ್ರೋ ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಮೆಟ್ರೋ ರೈಲ್ವೆ ಕೋಲ್ಕತ್ತಾದ ವಕ್ತಾರರ ಪ್ರಕಾರ, ಶಹೀದ್ ಖುದಿರಾಮ್ ಮತ್ತು ಮೈದಾನ್ ನಿಲ್ದಾಣಗಳ ನಡುವಿನ ಸೇವೆಯನ್ನು ಸಹ ನಿಲ್ಲಿಸಲಾಗಿದೆ. ಈ ಸ್ಥಗಿತದಿಂದಾಗಿ ಸಾವಿರಾರು ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ.

ಈ ಭಾರೀ ಮಳೆಯಿಂದ ಕೋಲ್ಕತ್ತಾದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಕೆಲವು ಕಡಿಮೆ ಎತ್ತರದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ತಮ್ಮ ಆಸ್ತಿಪಾಸ್ತಿಗಳನ್ನು ರಕ್ಷಿಸಲು ಪರದಾಡುವಂತಾಗಿದೆ.

Exit mobile version