ತಿರುವನಂತಪುರಂ: ತಿರುವನಂತಪುರಂನಲ್ಲಿ ರಾಜಕೀಯ ಇತಿಹಾಸ ನಿರ್ಮಾಣವಾಗುವ ಕ್ಷಣಕ್ಕೆ ವೇದಿಕೆ ಸಜ್ಜಾಗಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ (VD Satheesan) ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ 20 ಮಂದಿ ಸಂಪುಟ ಸಚಿವರು ಕೂಡಾ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ತಿರುವನಂತಪುರಂನಲ್ಲಿ ನಡೆಯುವ ಪ್ರತಿಷ್ಠಿತ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಲಿದ್ದಾರೆ.
ಐತಿಹಾಸಿಕ ಪ್ರಮಾಣ ವಚನ ಸಮಾರಂಭ
ಕಳೆದ 6 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಯುಡಿಎಫ್ ಮೈತ್ರಿಕೂಟದ ಪೂರ್ಣ ಸಂಪುಟ ಏಕಕಾಲದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದೆ. ಸಾಮಾನ್ಯವಾಗಿ ಮೊದಲು ಮುಖ್ಯಮಂತ್ರಿ ಮಾತ್ರ ಪ್ರಮಾಣ ವಚನ ಸ್ವೀಕರಿಸಿ, ನಂತರ ಹಂತ ಹಂತವಾಗಿ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ಯುಡಿಎಫ್ ನಾಯಕತ್ವವು ಸಂಪೂರ್ಣ ಸಚಿವ ಸಂಪುಟವನ್ನು ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸುವಂತೆ ವ್ಯವಸ್ಥೆ ಮಾಡಿದೆ.
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ನೂತನ ಮುಖ್ಯಮಂತ್ರಿ ಸತೀಶನ್ ಭಾನುವಾರ ಸಂಪೂರ್ಣ ಸಚಿವ ಸಂಪುಟವನ್ನು ಅನಾವರಣಗೊಳಿಸಿದ್ದರು. ಈ ಸಂಪುಟದಲ್ಲಿ 14 ಮಂದಿ ಹೊಸ ಮುಖಗಳಿಗೆ ಸಚಿವ ಸ್ಥಾನ ದೊರೆತಿದ್ದು, ಯುವ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಬ್ಬರು ಮಹಿಳಾ ಸಚಿವರು ಮತ್ತು ಪರಿಶಿಷ್ಟ ಜಾತಿ ಸಮುದಾಯದ ಇಬ್ಬರು ಸದಸ್ಯರು ಸ್ಥಾನ ಪಡೆದಿದ್ದಾರೆ.
ಸಂಪುಟ ಹಂಚಿಕೆಯ ಪ್ರಕಾರ, ಕಾಂಗ್ರೆಸ್ ಪಕ್ಷದಿಂದಲೇ 11 ಮಂದಿ ಶಾಸಕರು ಸಚಿವರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೇ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ಐವರು ಸದಸ್ಯರು, ಕೇರಳ ಕಾಂಗ್ರೆಸ್ (ಜೋಸೆಫ್), ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್ಎಸ್ಪಿ), ಕೇರಳ ಕಾಂಗ್ರೆಸ್ (ಜಾಕೋಬ್) ಹಾಗೂ ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಕ್ಷ (ಸಿಎಂಪಿ) ತಲಾ ಒಬ್ಬೊಬ್ಬರು ಸಚಿವ ಸ್ಥಾನ ಪಡೆದಿದ್ದಾರೆ.
ಸಚಿವರ ಪಟ್ಟಿಯಲ್ಲಿ ಹಲವು ಪ್ರಮುಖ ನಾಯಕರು ಸೇರಿದ್ದಾರೆ. ಕಾಂಗ್ರೆಸ್ನ ಹಿರಿಯ ಮುಖಂಡರು ಹಾಗೂ ಹೊಸ ತಲೆಮಾರಿನ ನಾಯಕರು ಸೇರಿಕೊಂಡಿದ್ದಾರೆ. ಸಚಿವರಾಗಿ ಆಯ್ಕೆಯಾದವರಲ್ಲಿ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ. ಮುರಳೀಧರನ್, ಎ.ಪಿ ಅನಿಲ್ ಕುಮಾರ್, ಪಿ.ಸಿ ವಿಷ್ಣುನಾಧ್ ಸೇರಿದಂತೆ ಹಲವು ಪ್ರಮುಖರು ಇದ್ದಾರೆ. ಮಹಿಳಾ ನಾಯಕತ್ವವನ್ನು ಬಲಪಡಿಸುವ ಭಾಗವಾಗಿ ಬಿಂಧು ಕೃಷ್ಣ ಹಾಗೂ ರೋಜಿ ಎಂ. ಜಾನ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ಮೈತ್ರಿಕೂಟದ ಇತರ ಪಕ್ಷಗಳಿಂದಲೂ ಪ್ರಮುಖ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಐಯುಎಂಎಲ್ ನಾಯಕ ಪಿ.ಕೆ ಕುನ್ಹಾಲಿಕುಟ್ಟಿ, ಕೆ.ಎಂ ಶಾಜಿ ಹಾಗೂ ಎನ್ ಶಂಸುದ್ದೀನ್ ಸೇರಿದಂತೆ ಹಲವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಷ್ಟ್ರೀಯ ರಾಜಕೀಯ ನಾಯಕರೂ ಆಗಮಿಸುತ್ತಿದ್ದಾರೆ. ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾರಂಭದಲ್ಲಿ ಭಾಗವಹಿಸಲು ತಿರುವನಂತಪುರಂಗೆ ಆಗಮಿಸಿದ್ದಾರೆ.
