ಮದುವೆ ಮನೆಯಲ್ಲಿ ಘೋರ ದುರಂತ: ವ್ಯಕ್ತಿಯ ಉಸಿರು ನಿಲ್ಲಿಸಿದ ರಸಗುಲ್ಲ.!

Untitled design 2026 03 16T154519.875

ರಾಂಚಿ, ಮಾ.16: ರಸಗುಲ್ಲ ತಿನ್ನುವ ವೇಳೆ ಅದು ಗಂಟಲಲ್ಲಿ ಸಿಲುಕಿ 41 ವರ್ಷದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು 41 ವರ್ಷದ ಲಲಿತ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಶುಕ್ರವಾರ (ಮಾರ್ಚ್ 13) ರಾತ್ರಿ ತಮ್ಮ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. ಗ್ರಾಮದಲ್ಲೇ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಲಲಿತ್ ಸಿಂಗ್ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಗ್ರಾಮಸ್ಥರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದರು.

ಮದುವೆಯ ವಿವಿಧ ಆಚರಣೆಗಳಲ್ಲಿ ಭಾಗವಹಿಸಿದ ಬಳಿಕ ಅತಿಥಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಲಲಿತ್ ಸಿಂಗ್ ಸಹ ಇತರರಂತೆ ಊಟವನ್ನು ಸವಿದ ಬಳಿಕ ರಸಗುಲ್ಲವನ್ನು ತಿನ್ನಲು ಮುಂದಾಗಿದ್ದಾನೆ. ಲಲಿತ್ ಸಿಂಗ್ ರಸಗುಲ್ಲವನ್ನು ತಿನ್ನುತ್ತಿದ್ದಾಗ ಅದು ಅಕಸ್ಮಾತ್ ಅವರ ಗಂಟಲಲ್ಲಿ ಸಿಲುಕಿಕೊಂಡಿದೆ. ಕೆಲವು ಕ್ಷಣಗಳಲ್ಲೇ ಅವರ ಮುಖ ಬಿಳಿಯಾಗತೊಡಗಿತು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು.

ಕುಟುಂಬದವರು ಹಾಗೂ ಅಲ್ಲಿದ್ದವರು ತಕ್ಷಣವೇ ಲಲಿತ್ ಸಿಂಗ್‌ಗೆ ಸಹಾಯ ಮಾಡಲು ಮುಂದಾದರು. ಅವರ ಗಂಟಲಲ್ಲಿ ಸಿಲುಕಿದ್ದ ರಸಗುಲ್ಲವನ್ನು ಹೊರತೆಗೆಯಲು ಪ್ರಯತ್ನಿಸಿದರು. ನಂತರ ನೀರು ಕುಡಿಸಲು ಪ್ರಯತ್ನಿಸಿದರು. ಕೆಲವರು ಬೆನ್ನಿಗೆ ತಟ್ಟುವ ಮೂಲಕ ಆಹಾರ ಹೊರಬರುವಂತೆ ಮಾಡಲು ಯತ್ನಿಸಿದರು. ಆದರೆ ಯಾವುದೂ ಸಾದ್ಯವಾಗಲಿಲ್ಲ.

ಆದರೆ ಸ್ವಲ್ಪ ಸಮಯದಲ್ಲೇ ಲಲಿತ್ ಸಿಂಗ್ ಅವರಿಗೆ ಉಸಿರಾಟ ಸಮಸ್ಯೆ ಹೆಚ್ಚಾಯಿತು. ನಂತರ ಕುಟುಂಬದವರು ತಡಮಾಡದೆ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ತಕ್ಷಣವೇ ಅವರನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲಿ ವೈದ್ಯರು ಲಲಿತ್ ಸಿಂಗ್ ಅವರನ್ನು ತಕ್ಷಣ ಪರೀಕ್ಷಿಸಿದರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರ ಸ್ಥಿತಿ  ಗಂಭೀರವಾಗಿತ್ತು. ವೈದ್ಯರು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಲಲಿತ್ ಸಿಂಗ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ರಸಗುಲ್ಲ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರಿನ ಮಾರ್ಗ ಸಂಪೂರ್ಣವಾಗಿ ತಡೆಹಿಡಿದಿತ್ತು.. ಆಮ್ಲಜನಕ ಕೊರತೆಯಿಂದಾಗಿ ಅವರು ಅಕಸ್ಮಾತ್ ಸಾವಿಗೀಡಾದರು ಎಂದು ವೈದ್ಯರು ತಿಳಿಸಿದ್ದಾರೆ. ಶನಿವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಲಲಿತ್ ಸಿಂಗ್ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

Exit mobile version