ನವದೆಹಲಿ: ಪರಿಸರ ಸಂರಕ್ಷಣೆಗೆ ಸರ್ಕಾರ ಅಥವಾ ದೊಡ್ಡ ಸಂಸ್ಥೆಗಳ ನೆರವಿಗಾಗಿ ಕಾಯದೆ, ಸ್ವಂತ ಪರಿಶ್ರಮದಿಂದ ಕಲುಷಿತಗೊಂಡಿದ್ದ ನದಿಯೊಂದನ್ನು ಸ್ವಚ್ಛಗೊಳಿಸಿದ 20 ವರ್ಷದ ಭಾರತೀಯ ಯುವಕನೊಬ್ಬ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಯುವಕನ ಪರಿಸರ ಕಾಳಜಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆದರ್ಲೆಂಡ್ಸ್ ಮೂಲದ ಜಾಗತಿಕ ಪರಿಸರ ಸಂಸ್ಥೆಯೊಂದರ ಸಿಇಒ ಅವರಿಂದಲೇ ಉದ್ಯೋಗದ ಆಹ್ವಾನ ದೊರೆತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ‘ಬಿಟ್ಟು ತಬಾಹಿ’ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಸುರೇಂದ್ರ ಸಿಂಗ್ ಚೌಧರಿ ಎಂಬ ಯುವಕ, ಕಲುಷಿತಗೊಂಡಿದ್ದ ಅಜನಾರ್ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ನದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕೊಳಕು ಹಾಗೂ ಇತರ ಕಸವನ್ನು ತಿಂಗಳುಗಳ ಕಾಲ ನಿರಂತರವಾಗಿ ತೆರವುಗೊಳಿಸುವ ಮೂಲಕ ನದಿಯ ಚಿತ್ರಣವನ್ನೇ ಬದಲಿಸಿದ್ದಾರೆ.
‘ಬಿಫೋರ್-ಆಫ್ಟರ್’ ವಿಡಿಯೋ ವೈರಲ್
ಸುರೇಂದ್ರ ಸಿಂಗ್ ಅವರು ನದಿ ಸ್ವಚ್ಛತಾ ಕಾರ್ಯ ಆರಂಭಿಸುವ ಮೊದಲು ನದಿ ಹೇಗಿತ್ತು ಹಾಗೂ ಸ್ವಚ್ಛತಾ ಕಾರ್ಯದ ಬಳಿಕ ಅದರ ಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ತೋರಿಸುವ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕಸದ ರಾಶಿಯಿಂದ ತುಂಬಿದ್ದ ನದಿ ಸ್ವಚ್ಛವಾಗಿ ಕಾಣುವಂತಾದ ಬದಲಾವಣೆ ನೆಟ್ಟಿಗರ ಗಮನ ಸೆಳೆಯಿತು.
‘ಬಿಫೋರ್ ಅಂಡ್ ಆಫ್ಟರ್’ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕನ ಪರಿಸರ ಕಾಳಜಿಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಯಾವುದೇ ದೊಡ್ಡ ತಂಡ ಅಥವಾ ಸರ್ಕಾರದ ನೆರವಿಲ್ಲದೆ ಒಬ್ಬನೇ ವ್ಯಕ್ತಿ ಕೈಗೊಂಡಿದ್ದ ಈ ಪ್ರಯತ್ನ ಹಲವರನ್ನು ಪ್ರೇರೇಪಿಸಿತು.
‘ದಿ ಓಷನ್ ಕ್ಲೀನಪ್’ ಸಂಸ್ಥಾಪಕರ ಗಮನ
ಸುರೇಂದ್ರ ಸಿಂಗ್ ಅವರ ಈ ಕಾರ್ಯದ ವಿಡಿಯೋ ಜಾಗತಿಕ ಮಟ್ಟದಲ್ಲಿ ಸಮುದ್ರ ಹಾಗೂ ನದಿಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗೆ ಕೆಲಸ ಮಾಡುತ್ತಿರುವ ನೆದರ್ಲೆಂಡ್ಸ್ ಮೂಲದ ‘ದಿ ಓಷನ್ ಕ್ಲೀನಪ್’ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಬೋಯಾನ್ ಸ್ಲ್ಯಾಟ್ ಅವರ ಗಮನ ಸೆಳೆದಿದೆ.
ಸುರೇಂದ್ರ ಅವರ ಪರಿಸರ ಸೇವೆಯನ್ನು ವಿವರಿಸುವ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ಬೋಯಾನ್ ಸ್ಲ್ಯಾಟ್, “Come work for us” ಎಂದು ಹೇಳಿದ್ದಾರೆ. ಅಂದರೆ, ತಮ್ಮ ಸಂಸ್ಥೆಯೊಂದಿಗೆ ಕೆಲಸ ಮಾಡುವಂತೆ ಯುವಕನಿಗೆ ನೇರ ಆಹ್ವಾನ ನೀಡಿದ್ದಾರೆ.
ನೆಟ್ಟಿಗರಿಂದ ಪರ-ವಿರೋಧದ ಚರ್ಚೆ
ಬೋಯಾನ್ ಸ್ಲ್ಯಾಟ್ ಅವರ ಆಹ್ವಾನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸುರೇಂದ್ರ ಅವರು ಈ ಅವಕಾಶವನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
“ಇಂತಹ ನಿಸ್ವಾರ್ಥ ಪರಿಸರ ಸೇವೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಇದು ಜೀವನದಲ್ಲಿ ಸಿಗಬಹುದಾದ ಅಪರೂಪದ ಅವಕಾಶವಾಗಿದ್ದು, ಅದನ್ನು ಬಳಸಿಕೊಳ್ಳಬೇಕು” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವರು ಭಾರತದಲ್ಲಿನ ಪರಿಸರ ಸಮಸ್ಯೆಗಳತ್ತ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದ್ದಾರೆ. ಮತ್ತೊಂದೆಡೆ, ವಿದೇಶಿ ಸಂಸ್ಥೆಯಿಂದ ಬಂದಿರುವ ಉದ್ಯೋಗದ ಆಹ್ವಾನದ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
