ಭಾರತ-ಪಾಕ್‌ ಉದ್ವಿಗ್ನತೆ: ಬೆಂಗಳೂರು ಏರ್ಪೋರ್ಟ್‌ಗೆ ಬಂದ ಯೋಧನ ಪಾರ್ಥಿವ ಶರೀರ

Untitled design 2025 05 10t165047.016
ADVERTISEMENT
ADVERTISEMENT

ಬೆಂಗಳೂರು: ಭಾರತ-ಪಾಕಿಸ್ತಾನ ನಡುವಿನ ಗಡಿ ಸಂಘರ್ಷದಲ್ಲಿ ಕರ್ನಾಟಕ-ಆಂಧ್ರ ಗಡಿಯ ಗ್ರಾಮದ ಯೋಧ ಮುರಳಿ ನಾಯಕ್, ಪಾಕ್ ಸೇನೆಯ ಡ್ರೋನ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಜಮ್ಮುವಿನಲ್ಲಿ ದೇಶರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಈ ವೀರನ ಪಾರ್ಥಿವ ಶರೀರವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಇಲ್ಲಿಂದ ಆರ್ಮಿ ಆಂಬುಲೆನ್ಸ್ ಮೂಲಕ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಗೋರಂಟ್ಲಾಕ್ಕೆ ರವಾನಿಸಲಾಗಿದೆ.

ಮುರುಳಿ ನಾಯಕ್ ಅವರ ಮೃತದೇಹವನ್ನು ಮೊದಲು ಜಮ್ಮುವಿನಿಂದ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿಗೆ ರವಾನಿಸಲಾಯಿತು. ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ನಲ್ಲಿ ಶರೀರವನ್ನು ಇರಿಸಿ, ಭಾರತೀಯ ಸೇನೆಯಿಂದ ಅಂತಿಮ ಗೌರವ ಸಲ್ಲಿಕೆ ನಡೆಸಲಾಯಿತು. ಚಿಕ್ಕಬಳ್ಳಾಪುರ ಮಾರ್ಗವಾಗಿ ರಸ್ತೆಯ ಮೂಲಕ ಗೋರಂಟ್ಲಾಕ್ಕೆ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಆಂಧ್ರ ಪ್ರದೇಶ ಸರ್ಕಾರವು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಕಾನೂನು ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದೆ.

ಮುರುಳಿ ನಾಯಕ್, ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ವಿಧಾನಸಭಾ ಕ್ಷೇತ್ರದ ಗೋರಂಟ್ಲಾ ಮಂಡಲದವರು. ಇಲ್ಲಿಯೇ ಜನಿಸಿ, ಶಿಕ್ಷಣ ಪಡೆದು ಭಾರತೀಯ ಸೇನೆಗೆ ಸೇರಿದ್ದರು. ದೇಶಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಿದ ಈ ಯೋಧನಿಗೆ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಛ ಇಟ್ಟು ಗೌರವ ಸಲ್ಲಿಸಲಾಯಿತು. ಮುರಳಿಯವರ ತಂದೆಯವರು ಭಾರತೀಯ ಸೇನೆಯಿಂದ ಮಗನ ಮೃತದೇಹವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವ ಉದಯ್ ಸಾಮಂತ್, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ವೀರಯೋಧನಿಗೆ ನಮನ ಸಲ್ಲಿಸಿದರು. ಕರ್ನಾಟಕದ ಪರವಾಗಿ ದೇವನಹಳ್ಳಿ ತಹಸೀಲ್ದಾರ್ ಉಪಸ್ಥಿತರಿದ್ದು, ರಾಜ್ಯ ಸರ್ಕಾರದಿಂದ ಅಂತಿಮ ಗೌರವ ಸಲ್ಲಿಸಲಾಯಿತು. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಶರೀರವನ್ನು ಕರ್ನಾಟಕ-ಆಂಧ್ರ ಗಡಿಗೆ ರವಾನಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಯಿತು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಈ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. “ಮುರುಳಿ ನಾಯಕ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದು ದುಃಖಕರ. ಅವರ ಕುಟುಂಬಕ್ಕೆ ನನ್ನ ಸಂತಾಪ,” ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

Exit mobile version