ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಭಾರತ ತೈಲ ಖರೀದಿ ನಿಲ್ಲಿಸುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದ ರಷ್ಯಾ

Untitled design 2026 02 03T171501.432

ಮಾಸ್ಕೋ: ಭಾರತ ಮತ್ತು ಅಮೆರಿಕ ನಡುವಿನ ನೂತನ ವ್ಯಾಪಾರ ಒಪ್ಪಂದವು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ, ವೆನೆಜುವೆಲಾದಿಂದ ಹೆಚ್ಚಿನ ತೈಲ ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮಹತ್ವದ ಬೆಳವಣಿಗೆಗೆ ರಷ್ಯಾ ಈಗ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದು, ನಮಗೆ ದೆಹಲಿಯಿಂದ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಟ್ರಂಪ್ ಘೋಷಣೆ ಮತ್ತು ಸುಂಕದ ಆಮಿಷ

ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೊನಾಲ್ಡ್ ಟ್ರಂಪ್ ಭಾರತೀಯ ಉತ್ಪನ್ನಗಳ ಮೇಲೆ ಭಾರಿ ಸುಂಕ ವಿಧಿಸಿದ್ದರು. ಆದರೆ, ಇತ್ತೀಚಿನ ಮಾತುಕತೆಯ ನಂತರ ಭಾರತಕ್ಕೆ ದೊಡ್ಡ ಮಟ್ಟದ ರಿಯಾಯಿತಿ ಘೋಷಿಸಿದ್ದಾರೆ. ಭಾರತವು ರಷ್ಯಾದ ತೈಲವನ್ನು ತ್ಯಜಿಸಿ, ವೆನೆಜುವೆಲಾ ಮತ್ತು ಅಮೆರಿಕದ ಉತ್ಪನ್ನಗಳಿಗೆ ಆದ್ಯತೆ ನೀಡಲು ಒಪ್ಪಿಕೊಂಡಿದೆ. ಇದಕ್ಕೆ ಪ್ರತಿಯಾಗಿ, ಭಾರತದ ಮೇಲಿದ್ದ ಆಮದು ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.

ಈ ಹಿಂದೆ ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಅಮೆರಿಕ ಒಟ್ಟು ಶೇ. 50ರಷ್ಟು ಸುಂಕ ಹೇರಿತ್ತು. ಇದೀಗ ಅದನ್ನು ಶೇ. 18ಕ್ಕೆ ಇಳಿಸಿರುವುದು ಭಾರತೀಯ ರಫ್ತುದಾರರಿಗೆ ಸಹಾಯವಾಗಿದೆ.

ರಷ್ಯಾದ ಕುತೂಹಲಕಾರಿ ಪ್ರತಿಕ್ರಿಯೆ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್, ತೈಲ ಖರೀದಿ ನಿಲ್ಲಿಸುವ ಕುರಿತು ಭಾರತ ಸರ್ಕಾರದಿಂದ ನಮಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ಸಂದೇಶ ಬಂದಿಲ್ಲ. ನಾವು ಭಾರತದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗೌರವಿಸುತ್ತೇವೆ ಮತ್ತು ಅದನ್ನು ಮತ್ತಷ್ಟು ವೃದ್ಧಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಕೂಡ ಪ್ರತಿಕ್ರಿಯಿಸಿದ್ದು, ನಮ್ಮ ಇಂಧನಕ್ಕೆ ಜಗತ್ತಿನಾದ್ಯಂತ ಉತ್ತಮ ಬೇಡಿಕೆಯಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದಿದ್ದಾರೆ.

2022ರ ರಷ್ಯಾ-ಉಕ್ರೇನ್ ಯುದ್ಧದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡದ ನಡುವೆಯೂ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಟ್ರಂಪ್ ಅವರ ‘ಅಮೆರಿಕ ಫಸ್ಟ್’ ನೀತಿ ಮತ್ತು ಸುಂಕದ ಅಸ್ತ್ರದ ಮುಂದೆ ಭಾರತ ತನ್ನ ನಿಲುವನ್ನು ಬದಲಿಸಿದೆಯೇ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ಭಾರತ ರಷ್ಯಾದ ತೈಲವನ್ನು ಕೈಬಿಟ್ಟರೆ, ಅದು ದಶಕಗಳ ಕಾಲದ ರಷ್ಯಾ-ಭಾರತ ಸ್ನೇಹ ಸಂಬಂಧದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದು ಈಗಿನ ಕುತೂಹಲ.

ಸದ್ಯಕ್ಕೆ ಭಾರತ ಸರ್ಕಾರವು ಈ ಒಪ್ಪಂದದ ಅಧಿಕೃತ ವಿವರಗಳನ್ನು ಹೊರಹಾಕಿಲ್ಲ. ಅಮೆರಿಕದ ಸುಂಕ ಕಡಿತದ ಲಾಭ ಮತ್ತು ರಷ್ಯಾದ ಸ್ನೇಹದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಪ್ರಧಾನಿ ಮೋದಿಯವರ ಮುಂದಿರುವ ಸವಾಲಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಏನು ಪ್ರತಿಕ್ರಿಸಿಸುತ್ತಾರೆ ಎಂದು ಕಾದು ನೋಡಬೇಕಿದೆ.

Exit mobile version