ಪಾಕಿಸ್ತಾನದ ಎದೆಗೆ ಹೊಡೆದಿದ್ದೇವೆ, ಇಂದಿಗೂ ಅವರಿಗೆ ನಿದ್ರಿಸಲು ಆಗ್ತಿಲ್ಲ: ಪ್ರಧಾನಿ ಮೋದಿ

Untitled design 2025 07 29t190431.111

ನವದೆಹಲಿ: ಭಾರತವು ಆಪರೇಷನ್ ಸಿಂದೂರ ಮೂಲಕ ಭಯೋತ್ಪಾದನೆಯ ಕೇಂದ್ರವಾದ ಪಾಕಿಸ್ತಾನದ ಎದೆಗೆ ನಿಖರವಾಗಿ ಹೊಡೆದಿದೆ. ಈ ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಪಾಕಿಸ್ತಾನದ ಉಗ್ರರಿಗೆ ಇಂದಿಗೂ ನಿದ್ದೆಗೆಡುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಗುಡುಗಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಈ ಕಾರ್ಯಾಚರಣೆಯು ದೇಶದ ಶಕ್ತಿಯನ್ನು ಜಗತ್ತಿಗೆ ತೋರಿಸಿತ್ತು.

ಪಹಲ್ಗಾಮ್ ದಾಳಿಯ ನಂತರ, ಭಾರತವು ತನ್ನ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿತ್ತು. ಯಾವಾಗ, ಎಲ್ಲಿ, ಹೇಗೆ ದಾಳಿ ಮಾಡಬೇಕು ಎಂಬುದನ್ನು ಸೇನೆಯೇ ನಿರ್ಧರಿಸಿತ್ತು. ಇದರ ಪರಿಣಾಮವಾಗಿ, ಆಪರೇಷನ್ ಸಿಂಧೂರನಡಿಯಲ್ಲಿ ಭಯೋತ್ಪಾದಕರನ್ನು ಶಿಕ್ಷಿಸಲಾಯಿತು. “ನಾವು ಭಯೋತ್ಪಾದಕರನ್ನು ಶಿಕ್ಷಿಸಿದೆವು, ಆ ಶಿಕ್ಷೆ ಎಷ್ಟಿತ್ತೆಂದರೆ, ಭಯೋತ್ಪಾದನೆಯ ಗುರುಗಳಾದ ಪಾಕಿಸ್ತಾನಕ್ಕೆ ಇಂದಿಗೂ ನಿದ್ದೆಗೆಡುವಂತೆ ಮಾಡಿದೆ,” ಎಂದು ಮೋದಿ ಹೇಳಿದರು. ಈ ಕಾರ್ಯಾಚರಣೆಯಿಂದ ಪಾಕಿಸ್ತಾನದ ಕೆಲವು ವಾಯುನೆಲೆಗಳು ಮತ್ತು ಸ್ವತ್ತುಗಳು ಇನ್ನೂ “ಐಸಿಯು”ನಲ್ಲಿವೆ ಎಂದು ಅವರು ವ್ಯಂಗ್ಯವಾಡಿದರು.

ಈ ದಾಳಿಯ ವಿಶೇಷತೆ ಏನೆಂದರೆ, ಭಾರತವು ಕೇವಲ 22 ನಿಮಿಷಗಳಲ್ಲಿ ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡಿತ್ತು. “ಏಪ್ರಿಲ್ 22 ರ ದಾಳಿಗೆ 22 ನಿಮಿಷಗಳಲ್ಲಿ ನಾವು ಪ್ರತೀಕಾರ ತೀರಿಸಿಕೊಂಡೆವು. ಇದು ಭಾರತದ ಶಕ್ತಿಯನ್ನು ತೋರಿಸುತ್ತದೆ,” ಎಂದು ಮೋದಿ ಹೇಳಿದರು. ಈ ಕಾರ್ಯಾಚರಣೆಯು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಸಂಪೂರ್ಣವಾಗಿ ನಾಶಪಡಿಸಿತ್ತು. ಭಾರತವು ಈ ಮೂಲಕ ಪಾಕಿಸ್ತಾನದ ಪರಮಾಣು ಬ್ಲ್ಯಾಕ್‌ಮೇಲಿಂಗ್‌ಗೆ ತಲೆಬಾಗುವುದಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿತ್ತು. “ಪರಮಾಣು ಬೆದರಿಕೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂಬುದನ್ನು ಆಪರೇಷನ್ ಸಿಂಧೂರ ಸಾಬೀತುಪಡಿಸಿದೆ,” ಎಂದು ಪ್ರಧಾನಿ ಹೇಳಿದರು.

ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ಜಗತ್ತಿಗೆ ತಿಳಿದಿದೆ. ಆದರೆ, ಭಾರತದ ಈ ದಾಳಿಯಿಂದ ಉಗ್ರರ ನೆಲೆಗಳು ನಾಶವಾದವು. “ಪಾಕಿಸ್ತಾನದ ಪ್ರತಿಯೊಂದು ಮೂಲೆಯಲ್ಲಿಯೂ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಲಾಯಿತು. ಇದು ಭಾರತದ ತಂತ್ರಗಾರಿಕೆಯ ಗೆಲುವು,” ಎಂದು ಮೋದಿ ತಿಳಿಸಿದರು. ಮೋದಿ ತಮ್ಮ ಭಾಷಣದಲ್ಲಿ, “ನಾನು ಭಾರತದ ಪರವಾಗಿದ್ದೇನೆ. ಆಪರೇಷನ್ ಸಿಂಧೂರದ ಪರವಾಗಿದ್ದೇನೆ. ಭಾರತದ ವಿರೋಧಿಗಳಿಗೆ ಸತ್ಯದ ಕನ್ನಡಿಯನ್ನು ತೋರಿಸಲು ಇಲ್ಲಿದ್ದೇನೆ,” ಎಂದು ಘೋಷಿಸಿದರು.

ಆಪರೇಷನ್ ಸಿಂಧೂರದ ಯಶಸ್ಸು ಭಾರತದ ಸೇನೆಯ ಶೌರ್ಯ ಮತ್ತು ಸರ್ಕಾರದ ದೃಢನಿರ್ಧಾರವನ್ನು ಎತ್ತಿಹಿಡಿಯಿತು. ಇದು ಭಾರತದ ರಕ್ಷಣಾ ತಂತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಕಾರ್ಯಾಚರಣೆಯಿಂದ ಭಾರತವು ತನ್ನ ಗಡಿಗಳನ್ನು ರಕ್ಷಿಸುವ ಜೊತೆಗೆ, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಜಾರಿಗೊಳಿಸಿದೆ. “ಭಾರತವು ಎಂದಿಗೂ ತಲೆಬಾಗುವುದಿಲ್ಲ, ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ,” ಎಂದು ಮೋದಿ ಸ್ಪಷ್ಟವಾಗಿ ಹೇಳಿದರು.

Exit mobile version