ದೆಹಲಿ (ಜುಲೈ 5): ಇನ್ಸ್ಟಾಗ್ರಾಂ ವೇದಿಕೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗೆ ಸಂಬಂಧಿಸಿದ ಆಕ್ಷೇಪಾರ್ಹ ಜಾಹೀರಾತುಗಳು ಕಾಣಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ಕಠಿಣ ನೋಟಿಸ್ ಜಾರಿ ಮಾಡಿದೆ. ಮೂಲಗಳ ಪ್ರಕಾರ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳ ಶೋಷಣೆಯನ್ನು ಪ್ರೋತ್ಸಾಹಿಸುವ ಅಥವಾ ಅಂತಹ ವಿಷಯಗಳಿಗೆ ಪ್ರವೇಶ ಕಲ್ಪಿಸುವ ಎಲ್ಲಾ ಪಾವತಿ ಜಾಹೀರಾತುಗಳು ಮತ್ತು ಸಂಬಂಧಿತ ಕಂಟೆಂಟ್ಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸುವಂತೆ ಇನ್ಸ್ಟಾಗ್ರಾಂಗೆ ಕೇಂದ್ರವು ನಿರ್ದೇಶನ ನೀಡಿದೆ.
ಮೆಟಾಗೆ ಕೇಂದ್ರ ಸರ್ಕಾರ ನೋಟಿಸ್
ಆಕ್ಷೇಪಾರ್ಹ ಜಾಹೀರಾತು ಕಾಣಿಸಿಕೊಂಡಿರುವ ಆರೋಪದ ಹಿನ್ನೆಲೆ ನೋಟಿಸ್
ಮೆಟಾ ಸಂಸ್ಥೆಗೆ 7 ದಿನಗಳೊಳಗೆ ಲಿಖಿತ ಉತ್ತರ ನೀಡುವಂತೆ ಗಡುವು
ಆಕ್ಷೇಪಾರ್ಹ ಜಾಹೀರಾತುಗಳ ಬಗ್ಗೆ ಸವಿಸ್ತಾರ ವಿವರಣೆ ಕೇಳಿದ ಸರ್ಕಾರ
ಕೆಂದ್ರ ಸರ್ಕಾರ, ಇನ್ಸ್ಟಾಗ್ರಾಂನಲ್ಲಿ ಇಂತಹ ಆಕ್ಷೇಪಾರ್ಹ ವಿಷಯಗಳು ಹೇಗೆ ಪ್ರಕಟವಾಗಲು ಅವಕಾಶ ಸಿಕ್ಕಿತು, ಅವುಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಕಂಪನಿಯು ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದೆ, ಇಂತಹ ಘಟನೆ ಮರುಕಳಿಸದಂತೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಕುರಿತು ಸವಿಸ್ತಾರವಾದ ಸ್ಪಷ್ಟೀಕರಣವನ್ನು ಕೇಳಿದೆ. ಈ ಬಗ್ಗೆ ಮೆಟಾ ಸಂಸ್ಥೆ 7 ದಿನಗಳ ಒಳಗಾಗಿ ಲಿಖಿತ ಉತ್ತರ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಈ ಕ್ರಮವು ಅಂತರ್ಜಾಲದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಿಷಯಗಳ ಪ್ರಸಾರವನ್ನು ಸಂಪೂರ್ಣವಾಗಿ ಹತ್ತಿಕ್ಕುವ ಉದ್ದೇಶದ ಭಾಗವಾಗಿದೆ. ಡಿಜಿಟಲ್ ವೇದಿಕೆಗಳು ಕೇವಲ ಬಳಕೆದಾರರ ಕಂಟೆಂಟ್ಗಳಷ್ಟೇ ಅಲ್ಲ, ಪಾವತಿಸಿ ಪ್ರಕಟಿಸಲಾಗುವ ಜಾಹೀರಾತುಗಳ ಮೇಲೂ ಸಮರ್ಪಕ ನಿಗಾವಹಿಸಬೇಕು ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಈ ಮೂಲಕ ನೀಡಿದೆ. ಮಕ್ಕಳ ಸುರಕ್ಷತೆ ಮತ್ತು ಆನ್ಲೈನ್ ಭದ್ರತೆ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ಕೇಂದ್ರದ ನೋಟಿಸ್ನಲ್ಲಿ ಇಂತಹ ಕಾನೂನುಬಾಹಿರ ವಿಷಯಗಳು ವೇದಿಕೆಯಲ್ಲಿ ಹೇಗೆ ಕಾಣಿಸಿಕೊಂಡವು, ಅವುಗಳನ್ನು ತಡೆಯುವ ಪ್ರಸ್ತುತ ಫಿಲ್ಟರಿಂಗ್ ವ್ಯವಸ್ಥೆ ಎಷ್ಟು ಪರಿಣಾಮಕಾರಿ, ಹಾಗೂ ಜಾಹೀರಾತು ಪರಿಶೀಲನಾ ವ್ಯವಸ್ಥೆಯಲ್ಲಿ ಏನು ದೋಷ ಉಂಟಾಯಿತು ಎಂಬ ಪ್ರಶ್ನೆಗಳನ್ನೂ ಮೆಟಾಗೆ ಕೇಳಲಾಗಿದೆ. ಸರ್ಕಾರದ ಮುಂದಿನ ಕ್ರಮವು ಮೆಟಾ ನೀಡುವ ಉತ್ತರ ಹಾಗೂ ಕಂಪನಿ ಕೈಗೊಳ್ಳುವ ತಿದ್ದುಪಡಿ ಕ್ರಮಗಳ ಮೇಲೆ ಅವಲಂಬಿತವಾಗಿರಲಿದೆ.
ಒಟ್ಟಿನಲ್ಲಿ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಕಂಟೆಂಟ್ ಅಥವಾ ಜಾಹೀರಾತುಗಳಿಗೆ ಡಿಜಿಟಲ್ ವೇದಿಕೆಯಲ್ಲಿ ಅವಕಾಶ ಇರಬಾರದು ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಒತ್ತಿ ಹೇಳಿದೆ. ಆನ್ಲೈನ್ ಸುರಕ್ಷತೆಯ ವಿಷಯದಲ್ಲಿ ಟೆಕ್ ಕಂಪನಿಗಳು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬ ಒತ್ತಡವೂ ಈ ಕ್ರಮದ ಮೂಲಕ ಹೆಚ್ಚಾಗಿದೆ.
