AI ಶೃಂಗಸಭೆ: 24 ಗಂಟೆಗಳಲ್ಲಿ 2.5 ಲಕ್ಷ ಎಐ ಪ್ರತಿಜ್ಞೆಗಳೊಂದಿಗೆ ಗಿನ್ನೆಸ್ ದಾಖಲೆ ಬರೆದ ಭಾರತ

Untitled design 2026 02 19T080117.702

ಕೃತಕ ಬುದ್ಧಿಮತ್ತೆ (AI) ಇಂದು ಹೆಚ್ಚು ಬಳಕೆಯಲ್ಲಿರುವ ಸಾಧವಾಗಿದೆ. ಈ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಮತ್ತು ನೈತಿಕವಾಗಿ ಬಳಸುವ ನಿಟ್ಟಿನಲ್ಲಿ ಭಾರತವು ವಿಶ್ವಕ್ಕೇ ಮಾದರಿಯಾಗುವಂತಹ ಸಾಧನೆ ಮಾಡಿದೆ. ನವದೆಹಲಿಯಲ್ಲಿ ನಡೆದ ‘ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026’ ರಲ್ಲಿ ಕೇವಲ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು AI ಜವಾಬ್ದಾರಿ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಭಾರತವು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಈ ಮಹತ್ವದ ಘೋಷಣೆಯನ್ನು ಮಾಡಿದರು. ಫೆಬ್ರವರಿ 16 ಮತ್ತು 17ರ ನಡುವೆ ನಡೆದ ಈ ವಿಶೇಷ ಅಭಿಯಾನದಲ್ಲಿ ಒಟ್ಟು 2,50,946 ಮಾನ್ಯ ಪ್ರತಿಜ್ಞೆಗಳು ಸಲ್ಲಿಕೆಯಾಗಿವೆ. ʼ24 ಗಂಟೆಗಳಲ್ಲಿ AI ಜವಾಬ್ದಾರಿ ಅಭಿಯಾನಕ್ಕಾಗಿ ಸ್ವೀಕರಿಸಿದ ಹೆಚ್ಚಿನ ಪ್ರತಿಜ್ಞೆಗಳುʼ ಎಂಬ ವಿಭಾಗದಲ್ಲಿ , ಗಿನ್ನೆಸ್ ವಿಶ್ವ ದಾಖಲೆಗಳ ತೀರ್ಪುಗಾರರು ಈ ಸಾಧನೆಯನ್ನು ಅಧಿಕೃತವಾಗಿ ಪರಿಶೀಲಿಸಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಏನಿದು AI ಜವಾಬ್ದಾರಿ ಪ್ರತಿಜ್ಞೆ?

ಇಂಟೆಲ್ ಇಂಡಿಯಾ ಸಹಯೋಗದೊಂದಿಗೆ ‘ಇಂಡಿಯಾ AI ಮಿಷನ್’ ಅಡಿಯಲ್ಲಿ ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ aipledge.indiaai.gov.in ಎಂಬ ವಿಶೇಷ ಪೋರ್ಟಲ್ ಸೃಷ್ಟಿಸಲಾಗಿತ್ತು. ಈ ಪ್ರತಿಜ್ಞೆಯು ಪ್ರಮುಖವಾಗಿ ನಾಲ್ಕು ಸ್ತಂಭಗಳ ಮೇಲೆ ನಿಂತಿದೆ:

  1. ಡೇಟಾ ಗೌಪ್ಯತೆ: ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಆದ್ಯತೆ.

  2. ಪಾರದರ್ಶಕತೆ: AI ಕಾರ್ಯವೈಖರಿಯಲ್ಲಿ ಮುಕ್ತತೆ.

  3. ಹೊಣೆಗಾರಿಕೆ: ತಂತ್ರಜ್ಞಾನದ ಬಳಕೆಯ ಪರಿಣಾಮಗಳಿಗೆ ಜವಾಬ್ದಾರರಾಗಿರುವುದು.

  4. ತಪ್ಪು ಮಾಹಿತಿಯ ವಿರುದ್ಧ ಹೋರಾಟ: ಕೃತಕ ಬುದ್ಧಿಮತ್ತೆ ಬಳಸಿ ಹರಡುವ ಸುಳ್ಳು ಸುದ್ದಿಗಳ ನಿಯಂತ್ರಣ.

ಈ ಪ್ರತಿಜ್ಞೆಯನ್ನು ಪೂರ್ಣಗೊಳಿಸಿದ ನಾಗರಿಕರಿಗೆ ಡಿಜಿಟಲ್ ಬ್ಯಾಡ್ಜ್‌ಗಳನ್ನು ನೀಡಲಾಗಿದ್ದು, ಅವರಿಗೆ AI ಕಲಿಕೆಯ ವಿಶೇಷ ಪಠ್ಯಕ್ರಮಗಳಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.

ಈ ಸಾಧನೆಯ ಕುರಿತು ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿದೆ. ತಂತ್ರಜ್ಞಾನವನ್ನು ಕೇವಲ ಬಳಸುವುದು ಮಾತ್ರವಲ್ಲ, ಅದನ್ನು ಸಮಾಜದ ಒಳಿತಿಗಾಗಿ ಜವಾಬ್ದಾರಿಯುತವಾಗಿ ಬಳಸುವುದು ಮುಖ್ಯ. ವಿಶೇಷವಾಗಿ 2.5 ಲಕ್ಷ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿರುವುದು ಭಾರತದ ಭವಿಷ್ಯದ ದಿಕ್ಕನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು. ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಕ್ರಿಯ ಪಾಲ್ಗೊಳ್ಳುವಿಕೆಯು ಈ ದಾಖಲೆ ನಿರ್ಮಾಣವಾಗಲು ಪ್ರಮುಖ ಕಾರಣವಾಗಿದೆ.

ಭಾರತವು ಕೇವಲ AI ಬಳಕೆದಾರ ರಾಷ್ಟ್ರವಾಗಿ ಉಳಿಯದೆ, ಜಾಗತಿಕ ಮಟ್ಟದಲ್ಲಿ AI ನೀತಿ ಸಂವಾದಗಳನ್ನು ಮುನ್ನಡೆಸುವ ಶಕ್ತಿಯಾಗಿ ಹೊರಹೊಮ್ಮಿದೆ. ನೈತಿಕತೆ ಮತ್ತು ಮಾನವ ಕೇಂದ್ರಿತ ತಂತ್ರಜ್ಞಾನದ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ.

Exit mobile version