ಹಿಮಾಚಲ ಪ್ರದೇಶದಲ್ಲಿ ಪ್ರವಾಹದಿಂದ ಕೊಚ್ಚಿಹೋದ 20 ಕಾರ್ಮಿಕರು, ಇಬ್ಬರು ಸಾವು

Untitled design 2025 06 26t081311.555

ಹಿಮಾಚಲ ಪ್ರದೇಶದ ಕಾಂಗ್ರಾ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಬುಧವಾರ ಸಂಭವಿಸಿದ ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭಾರೀ ಮಳೆಯಿಂದ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ. ಕಾಂಗ್ರಾ ಜಿಲ್ಲೆಯ ಮನುನಿ ಖಾದ್‌ನಲ್ಲಿ ಉಂಟಾದ ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 15-20 ಕಾರ್ಮಿಕರು ಕೊಚ್ಚಿಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಇದರ ಜೊತೆಗೆ, ಕುಲ್ಲು ಜಿಲ್ಲೆಯಲ್ಲಿ ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರಾ ಜಿಲ್ಲೆಯ ಖಾನಿಯಾರ್‌ನ ಮನುನಿ ಖಾದ್‌ನಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾದ ನಂತರ, ಇಂದಿರಾ ಪ್ರಿಯದರ್ಶಿನಿ ಜಲವಿದ್ಯುತ್ ಯೋಜನೆಯ ಕಾರ್ಮಿಕ ಕಾಲೋನಿಯನ್ನು ಪ್ರವಾಹದ ನೀರು ಆವರಿಸಿತ್ತು. ಈ ಯೋಜನೆಯ ಕೆಲಸವನ್ನು ಭಾರೀ ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಕಾರ್ಮಿಕರು  ಆಶ್ರಯಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಹತ್ತಿರದ ಚರಂಡಿಗಳಿಂದ ಉಕ್ಕಿ ಬಂದ ನೀರು ಕಾಲೋನಿಯನ್ನು ತಲುಪಿದ್ದು, ಇದರಿಂದ ಕಾರ್ಮಿಕರನ್ನು ಕೊಚ್ಚಿ ಹೋಗಿದ್ದಾರೆ. ಈ ಘಟನೆಯಿಂದ ಇಬ್ಬರ ಶವಗಳನ್ನು ಈಗಾಗಲೇ ಹೊರತೆಗೆಯಲಾಗಿದೆ, ಆದರೆ ಇತರ ಕಾರ್ಮಿಕರ ಸ್ಥಿತಿಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಸ್ಥಳೀಯ ಆಡಳಿತ, ಗ್ರಾಮ ಪಂಚಾಯತ್, ಮತ್ತು ಕಂದಾಯ ಇಲಾಖೆಯ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಸವಾಲುಗಳು ಎದುರಾಗಿವೆ. ಕೆಲವು ಸ್ಥಳೀಯ ಕಾರ್ಮಿಕರು ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೊಚ್ಚಿಹೋಗಿರುವವರ ಸಂಖ್ಯೆಯ ಬಗ್ಗೆ ಧರ್ಮಶಾಲಾದ ಬಿಜೆಪಿ ಶಾಸಕ ಸುಧೀರ್ ಶರ್ಮಾ, ಸುಮಾರು 20 ಜನರು ಕಾಣೆಯಾಗಿದ್ದಾರೆ ಎಂದು ದೃಢಪಡಿಸಿದ್ದಾರೆ.

ಕುಲ್ಲು ಜಿಲ್ಲೆಯ ಹಲವು ಭಾಗಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ಇದರಿಂದ ಅನೇಕ ಮನೆಗಳು, ಶಾಲಾ ಕಟ್ಟಡಗಳು, ಅಂಗಡಿಗಳು, ಸಂಪರ್ಕ ರಸ್ತೆಗಳು ಮತ್ತು ಸಣ್ಣ ಸೇತುವೆಗಳು ಹಾನಿಗೊಳಗಾಗಿವೆ. ಈ ಘಟನೆಯಲ್ಲಿ ಮೂವರು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಭಾರೀ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮೀಣ ಭಾಗಗಳಿಗೆ ತೆರಳುವ ಮಾರ್ಗಗಳು ಮುಚ್ಚಿಹೋಗಿವೆ. ಇದರಿಂದ ಸ್ಥಳೀಯ ಜನರ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.

Exit mobile version