ಆರೋಗ್ಯವಂತ ಎಂದು ವರದಿ ಪಡೆದ ಶೇ.80 ಭಾರತೀಯರಿಗೆ ಹೃದಯಾಘಾತ! ಸಂಶೋಧನೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ವರದಿ

Untitled design 2026 03 30T195318.189

ನವದೆಹಲಿ: ಇಂದಿನ ಆಧುನಿಕ ಯುಗದಲ್ಲಿ ಹೃದಯದ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಆಗಾಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಈಗ ರೂಢಿಯಾಗಿದೆ. ಆದರೆ, ನಾವು ನಂಬಿರುವ ವೈದ್ಯಕೀಯ ವರದಿಗಳೇ ನಮ್ಮನ್ನು ದಾರಿ ತಪ್ಪಿಸುತ್ತಿವೆಯೇ ? ಹೌದು ಎನ್ನುತ್ತದೆ ದೆಹಲಿಯ ಜಿಬಿ ಪಂತ್ ಆಸ್ಪತ್ರೆಯ ಸಂಶೋಧಕರ ಹೊಸ ವಿಶ್ಲೇಷಣೆ.

ತಪಾಸಣೆಯ ವೇಳೆ ನಿಮ್ಮ ಹೃದಯ ಆರೋಗ್ಯವಾಗಿದೆ, ಆತಂಕ ಬೇಡ ಎಂಬ ವರದಿ ಪಡೆದಿದ್ದ ಶೇ.80ರಷ್ಟು ಭಾರತೀಯರು ನಂತರ ಹೃದಯಾಘಾತಕ್ಕೆ ತುತ್ತಾಗಿದ್ದಾರೆ ಎಂಬ ಆಘಾತಕಾರಿ ಸತ್ಯ ಈಗ ಹೊರಬಿದ್ದಿದೆ.

ಜಿಬಿ ಪಂತ್ ಆಸ್ಪತ್ರೆಯ ಸಂಶೋಧಕರು ಸುಮಾರು 5,000ಕ್ಕೂ ಹೆಚ್ಚು ಭಾರತೀಯ ರೋಗಿಗಳ ವೈದ್ಯಕೀಯ ದತ್ತಾಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದಾರೆ. ಈ ರೋಗಿಗಳು ಹೃದಯಾಘಾತಕ್ಕೆ ಮುನ್ನ ಮಾಡಿಸಿಕೊಂಡಿದ್ದ ತಪಾಸಣೆಗಳಲ್ಲಿ ಯಾವುದೇ ಗಂಭೀರ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೂ ಇವರುಗಳಲ್ಲಿ ಬಹುತೇಕರು ಹೃದಯಾಘಾತ ಅನುಭವಿಸಿರುವುದು ಸಂಶೋಧಕರನ್ನ ದಂಗಾಗುವಂತೆ ಮಾಡಿದೆ.

ಈ ಆಘಾತಕಾರಿ ಬೆಳವಣಿಗೆಗೆ ಮುಖ್ಯ ಕಾರಣ ನಾವು ಬಳಸುತ್ತಿರುವ ‘ರಿಸ್ಕ್ ಅಸೆಸ್‌ಮೆಂಟ್’ (ಅಪಾಯ ಅಳೆಯುವ) ಸಾಧನಗಳು. ಪ್ರಸ್ತುತ ಭಾರತದಲ್ಲಿ ಬಳಸಲಾಗುವ ಹೆಚ್ಚಿನ ವೈದ್ಯಕೀಯ ಮಾನದಂಡಗಳು ಮತ್ತು ತಂತ್ರಜ್ಞಾನಗಳು ಪಾಶ್ಚಿಮಾತ್ಯ ದೇಶಗಳ (ಅಮೆರಿಕ ಅಥವಾ ಯುರೋಪ್) ಜನರ ದೇಹದ ಪ್ರಕೃತಿಯನ್ನು ಆಧರಿಸಿ ಸಿದ್ಧಪಡಿಸಿದವುಗಳಾಗಿವೆ.

ಪಾಶ್ಚಿಮಾತ್ಯ ಸಾಧನಗಳು ಮುಖ್ಯವಾಗಿ ರಕ್ತನಾಳಗಳಲ್ಲಿನ ಕೊಲೆಸ್ಟ್ರಾಲ್ ಮಟ್ಟ ಮತ್ತು ವಯಸ್ಸಿನ ಆಧಾರದ ಮೇಲೆ ಹೃದಯಾಘಾತದ ಸಂಭವನೀಯತೆಯನ್ನು ಲೆಕ್ಕ ಹಾಕುತ್ತವೆ. ಆದರೆ ಭಾರತೀಯರ ದೇಹದ ರಚನೆ, ವಂಶವಾಹಿ (Genetics) ಲಕ್ಷಣಗಳು ಮತ್ತು ಜೀವನಶೈಲಿ ಪಾಶ್ಚಿಮಾತ್ಯರಿಗಿಂತ ಭಿನ್ನವಾಗಿದೆ. ಭಾರತೀಯರಲ್ಲಿ ಕಂಡುಬರುವ ವಿಶಿಷ್ಟವಾದ ಅಪಾಯದ ಮಾದರಿಗಳನ್ನು ಗುರುತಿಸುವಲ್ಲಿ ಈ ವಿದೇಶಿ ತಂತ್ರಜ್ಞಾನಗಳು ಸಂಪೂರ್ಣವಾಗಿ ವಿಫಲವಾಗುತ್ತಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಭಾರತೀಯರಲ್ಲಿ ಮಧುಮೇಹ, ಹೊಟ್ಟೆಯ ಭಾಗದ ಬೊಜ್ಜು ಮತ್ತು ಮಾನಸಿಕ ಒತ್ತಡದಂತಹ ಅಂಶಗಳು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುತ್ತವೆ. ಇವುಗಳನ್ನು ವಿದೇಶಿ ಮಾದರಿಯ ಸಾಧನಗಳು ಸರಿಯಾಗಿ ಅಳೆಯುವುದಿಲ್ಲ. ಆದ್ದರಿಂದ, ಭಾರತೀಯರ ದೇಹದ ವಿಶಿಷ್ಟ ಲಕ್ಷಣಗಳಿಗೆ ಅನುಗುಣವಾಗಿ ಪ್ರತ್ಯೇಕ ‘ರಿಸ್ಕ್ ಸ್ಕೋರ್’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ ಎಂದು ಈ ಸಂಶೋಧನೆ ಎಚ್ಚರಿಸಿದೆ.

Exit mobile version