ಪಾಕ್ ಪರ ಬೇಹುಗಾರಿಕೆ ಆರೋಪ: ಗುರುಗ್ರಾಮ ವಕೀಲನ ಬಂಧನ

Untitled design 2025 12 03T131937.801

ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದೊಡ್ಡಿದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಪರ ಬೇಹುಗಾರಿಕೆ ನಡೆಸಿದ ಆರೋಪದಡಿ ಹರಿಯಾಣದ ಗುರುಗ್ರಾಮದ ವಕೀಲ ರಿಜ್ವಾನ್ ಅಲಿಯಾಸ್ ರಿಜ್ವಾನ್ ಅಹ್ಮದ್ ಎಂಬುವವರನ್ನು ಪೊಲೀಸರ ವಿಶೇಷ ತನಿಖಾ ತಂಡ (SIT) ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಅಮೃತಸರದಿಂದ ಮೂವರು ಆರೋಪಿಗಳನ್ನೂ ವಶಕ್ಕೆ ಪಡೆಯಲಾಗಿದೆ.

ರಿಜ್ವಾನ್ ತನ್ನ ಸ್ನೇಹಿತ ಮುಷರಫ್ ಅಲಿಯಾಸ್ ಪರ್ವೇಜ್ ಜೊತೆಗೂಡಿ ಅಮೃತಸರಕ್ಕೆ ಒಟ್ಟು ಏಳು ಬಾರಿ ಪ್ರಯಾಣಿಸಿ, ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಂದ ಹವಾಲಾ ಮಾರ್ಗದಲ್ಲಿ ಕೋಟ್ಯಂತರ ರೂಪಾಯಿ ಸ್ವೀಕರಿಸಿದ್ದಾನೆ. ಜುಲೈ ತಿಂಗಳಲ್ಲಿ ಇಬ್ಬರೂ ವಾಘಾ ಗಡಿ ಮತ್ತು ಗೋಲ್ಡನ್ ಟೆಂಪಲ್ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಸ್ಕಾರ್ಪಿಯೋ, ಸ್ಕೋಡಾ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಂದವರಿಂದ ರಿಜ್ವಾನ್ ರಹಸ್ಯವಾಗಿ ನಗದು ಹಣ ಪಡೆಯುತ್ತಿದ್ದ ಎಂಬುದು ಸಿಸಿಟಿವಿ ದೃಶ್ಯ ಮತ್ತು ಸಾಕ್ಷಿಗಳ ಮೂಲಕ ಬಯಲಾಗಿದೆ.

ಪೊಲೀಸ್ ವಿಚಾರಣೆಯಲ್ಲಿ ರಿಜ್ವಾನ್ ಒಪ್ಪಿಕೊಂಡಿದ್ದು, ಈ ರೀತಿ ಒಟ್ಟು 41 ಲಕ್ಷ ರೂಪಾಯಿ ನಗದನ್ನು ಸಂಗ್ರಹಿಸಿದ್ದಾನೆ. ಈ ಹಣವನ್ನು ಪಂಜಾಬ್‌ನಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿತ್ತು ಎಂಬುದು ತನಿಖಾಧಿಕಾರಿಗಳ ಅಂದಾಜಿಸಿದ್ದಾರೆ. ರಿಜ್ವಾನ್ ಬಳಿ ಎರಡು ಬ್ಯಾಂಕ್ ಖಾತೆಗಳಿದ್ದು, ಹವಾಲಾ ವ್ಯವಹಾರಕ್ಕೆ ಇವನ್ನೇ ಬಳಸಿಕೊಳ್ಳಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಅಮೃತಸರದಲ್ಲಿ ಬಂಧನಕ್ಕೊಳಗಾದ ಮೂವರು ಸಂದೀಪ್ ಸಿಂಗ್ (ಅಲಿಯಾಸ್ ಗಗನ್), ಅಮನ್‌ದೀಪ್ ಸಿಂಗ್ ಮತ್ತು ಜಸ್ಕರನ್ ಸಿಂಗ್  ರಿಜ್ವಾನ್‌ಗೆ ಪಾಕಿಸ್ತಾನದಿಂದ ಹಣ ವರ್ಗಾವಣೆ ಮಾಡುತ್ತಿದ್ದ ಮಧ್ಯವರ್ತಿಗಳಾಗಿದ್ದರು. ಇವರೆಲ್ಲರೂ ಪಾಕ್ ಹ್ಯಾಂಡ್ಲರ್‌ಗಳೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂಬುದು ಸ್ಪಷ್ಟವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ದೇಶಾದ್ಯಂತ ಪಾಕ್ ಪರ ಬೇಹುಗಾರಿಕೆ ಜಾಲಗಳ ಮೇಲೆ ಕೇಂದ್ರ ಗುಪ್ತಚರ ದಳ ಹಾಗೂ ರಾಜ್ಯ ಪೊಲೀಸರ ಸಂಯುಕ್ತ ಕಾರ್ಯಾಚರಣೆ ತೀವ್ರಗೊಂಡಿದೆ. ಇದೇ ಸಾಲಿನಲ್ಲಿ ಕಳೆದ ತಿಂಗಳು ಚಂದನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿರುವ DRDO ಅತಿಥಿಗೃಹದ ವ್ಯವಸ್ಥಾಪಕನನ್ನು CID (ಭದ್ರತಾ) ಗುಪ್ತಚರ ದಳ ಬಂಧಿಸಿತ್ತು. ಆತ ಪಾಕಿಸ್ತಾನಿ ಗುಪ್ತಚರ ಅಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾರತೀಯ ಸೇನೆಯ ರಕ್ಷಣಾ ಚಟುವಟಿಕೆಗಳ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾನೆ.

ಗುರುಗ್ರಾಮದ ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ವಕೀಲನೊಬ್ಬ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಗುಪ್ತಚರ ಇಲಾಖೆಗೆ ದೊಡ್ಡ ಆಘಾತವಾಗಿದೆ.

Exit mobile version