ಪತ್ನಿ ಮನೆ ಬಿಟ್ಟು ಹೋದ ಸಿಟ್ಟಿಗೆ ನಾದಿನಿಯನ್ನು ಕೊಂದ ಪತಿ

Untitled design 2025 04 17t111640.630

ಗುರುಗ್ರಾಮ: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು, ವ್ಯಕ್ತಿಯೊಬ್ಬ ತನ್ನ 10 ವರ್ಷದ ನಾದಿನಿಯನ್ನು ಕ್ರೂರವಾಗಿ ಕೊಲೆ ಮಾಡಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿ ಮೋಹಿತ್ ಕುಮಾರ್ (ಬಿಹಾರದ ಮುಂಗೇರ್ ಜಿಲ್ಲೆಯವರು) ಅನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬಿಹಾರದ ಮುಂಗೇರ್ ಜಿಲ್ಲೆಯ ಮೂಲದ ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮೋಹಿತ್ ಕುಮಾರ್ ತನ್ನ ಪತ್ನಿಯ ನಡುವೆ ಹಲವು ದಿನಗಳಿಂದ ವೈವಾಹಿಕ ಕಲಹ ನಡೆಯುತ್ತಿದ್ದು, ಆಕೆ ಇತ್ತೀಚೆಗಷ್ಟೆ ಮನೆ ಬಿಟ್ಟು ಹೋಗಿದ್ದಾಳೆ. ಇದರಿಂದ ಕೋಪಗೊಂಡ ಮೋಹಿತ್ ತನ್ನ ಪತ್ನಿಯ ತಂಗಿ, ಕೇವಲ ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ ಕ್ರೂರವಾಗಿ ಕೊಲೆಮಾಡಿದ್ದಾನೆ.

ಮೋಹಿತ್, ಬಾಲಕಿಯನ್ನು ತನ್ನ ಮನೆಗೆ ಕರೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಶಾಲಿನಿಂದ ಸುತ್ತಿ ಸ್ಥಳೀಯ ಚರಂಡಿಯಲ್ಲಿ ಎಸೆದು ಹೋಗಿದ್ದಾನೆ.

ನಂತರ ಬಾಲಕಿಯ ತಂದೆ ತನ್ನ ಕಿರಿಯ ಮಗಳು ಕಾಣೆಯಾಗಿದ್ದಾಳೆ ಎಂದು ಪಲಂ ವಿಹಾರ್ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದರು. ನಂತರ ಪೊಲೀಸರು ಹುಡುಕಾಟ ಆರಂಭಿಸಿದರೂ ಪ್ರಾರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ವಿಚಾರಣೆಯ ಪ್ರಕ್ರಿಯೆ ವೇಳೆ, ಬಾಲಕಿಯ ಕುಟುಂಬ ತಮ್ಮ ಹಿರಿಯ ಮಗಳು ಮತ್ತು ಆಕೆಯ ಪತಿಯ ನಡುವೆ ವಿರೋಧವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಮುಂದುವರೆಸಿ ಬಜ್‌ಗೇರಾ ಪ್ರದೇಶದಿಂದ ಮೋಹಿತ್ ಕುಮಾರ್‌ನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ, ಆತ ತನ್ನ ಪತ್ನಿಯ ತಂಗಿಯನ್ನು ಕೊಲೆಮಾಡಿದ್ದಾಗಿ ಹೇಳಿದ್ದಾನೆ. ತನ್ನ ವೈವಾಹಿಕ ಜೀವನದಲ್ಲಿ ಮಧ್ಯೆಪ್ರವೇಶಿಸಿದ್ದಕ್ಕಾಗಿ ಪತ್ನಿ ಹಾಗೂ ಅತ್ತೆ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ನಿರ್ಧಾರದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾನೆ.

ಮೋಹಿತ್ ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ತಕ್ಷಣ ಕಾರ್ಯನಿರ್ವಹಿಸಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಹಾಯದಿಂದ ಚರಂಡಿಯಲ್ಲಿ ಶೋಧ ಕಾರ್ಯ ನಡೆಸಿದರು. ಕೊನೆಗೆ, ಬಾಲಕಿಯ ಶವವನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಆರೋಪಿ ಮೋಹಿತ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version