ನವದೆಹಲಿ: ಈಶಾನ್ಯ ದೆಹಲಿಯ ಸೀಲಾಮ್ಪುರದ ಜನತಾ ಮಜ್ದೂರ್ ಕಾಲೋನಿಯಲ್ಲಿ ಜುಲೈ 12ರ ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ 4 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಘಟನೆ ನಡೆದಿದೆ. ಈ ದುರಂತದಲ್ಲಿ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 14 ತಿಂಗಳ ಮಗು ಸೇರಿದಂತೆ 8 ಮಂದಿಯನ್ನು ರಕ್ಷಿಸಲಾಗಿದೆ.
ದೆಹಲಿಯ ವೆಲ್ಕಮ್ ಪ್ರದೇಶದ ಗಲಿ ನಂ. 5ರಲ್ಲಿ ಈ ಕಟ್ಟಡ ಕುಸಿತವಾಗಿದ್ದು, ದೆಹಲಿ ಅಗ್ನಿಶಾಮಕ ದಳದ ಮಾಹಿತಿಯ ಪ್ರಕಾರ, ಕಟ್ಟಡವು ಸುಮಾರು 30-35 ಚದರ ಗಜ್ಗಳ ವಿಸ್ತೀರ್ಣದಲ್ಲಿತ್ತು. ರಕ್ಷಣಾ ಕಾರ್ಯಾಚರಣೆಗೆ ಏಳು ಅಗ್ನಿಶಾಮಕ ಟೆಂಡರ್ಗಳು ಸ್ಥಳಕ್ಕೆ ಧಾವಿಸಿವೆ. ಸ್ಥಳೀಯರು, ದೆಹಲಿ ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಮತ್ತು ದೆಹಲಿ ಪೊಲೀಸರು ಒಟ್ಟಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
“ಬೆಳಿಗ್ಗೆ 7 ಗಂಟೆಗೆ ಕಟ್ಟಡ ಕುಸಿತದ ಬಗ್ಗೆ ಕರೆ ಬಂದಿತು. ಹಲವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಏಳು ಅಗ್ನಿಶಾಮಕ ಟೆಂಡರ್ಗಳು ಸ್ಥಳದಲ್ಲಿವೆ. ಇನ್ನೂ 5-6 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆಯಿದೆ,” ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್ ಗಾರ್ಗ್ ಹೇಳಿದ್ದಾರೆ. ಕಟ್ಟಡದಲ್ಲಿ 8-10 ಜನ ವಾಸವಾಗಿದ್ದರು, ಇದರಲ್ಲಿ ಮೂವರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ ಎಂದು ಸ್ಥಳೀಯರ ತಿಳಿಸಿದ್ದಾರೆ.
ಕಟ್ಟಡ ಕುಸಿತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ವಿವರವಾದ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ದೆಹಲಿಯ ಜನನಿಬಿಡ ಪ್ರದೇಶಗಳಲ್ಲಿ ಕಟ್ಟಡಗಳ ರಚನಾತ್ಮಕ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕಳೆದ ಶುಕ್ರವಾರ ದೆಹಲಿಯ ಆಜಾದ್ಪುರ್ ಮಾರ್ಕೆಟ್ನಲ್ಲಿ ಎರಡಂತಸ್ತಿನ ಕಟ್ಟಡ ಕುಸಿದಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ಇದೀಗ ಸೀಲಾಮ್ಪುರದ ಈ ಘಟನೆಯು ರಾಷ್ಟ್ರ ರಾಜಧಾನಿಯ ಜನರಲ್ಲಿ ಆತಂಕವನ್ನುಂಟು ಮಾಡಿದೆ.
