ದಿಲ್ಲಿಯ ಐತಿಹಾಸಿಕ ರೆಡ್ ಫೋರ್ಟ್ ಬಳಿ ನಡೆದ ಭಯಂಕರ ಕಾರ್ ಬಾಂಬ್ ಸ್ಫೋಟದಲ್ಲಿ 8 ಮಂದಿ ಸಾವು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಘಟನೆಯು ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ನ ಸ್ಲೀಪರ್ ಸೆಲ್ಗಳಿಂದ ನಡೆದ ಕೃತ್ಯನಾ ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ. ಸ್ಫೋಟಕ್ಕೆ ಕಾರಣನಾಗಿದ್ದ ಡಾ. ಉಮರ್ ಮೊಹಮ್ಮದ್ ಎಂಬ ವೈದ್ಯನು ಆತ್ಮಾಹುತಿ ದಾಳಿ ನಡೆಸಿರುವ ಆರೋಪವಿದೆ. ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 2900 ಕೆಜಿ ಸ್ಫೋಟಕ ಸಾಮಗ್ರಿ ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಕೃತ್ಯ ನಡೆದಿದೆ.ಇದು ‘ಆಪರೇಷನ್ ಸಿಂದೂರ್’ಗೆ ಪ್ರತೀಕಾರವೇ? ಎಂದು ಚರ್ಚೆಯಾಗಿದೆ.
ಸ್ಫೋಟಕ್ಕೆ ಕೆಲವೇ ಗಂಟೆಗಳ ಮುನ್ನ, ದೆಹಲಿ ಪೊಲೀಸ್, ಜಮ್ಮು-ಕಾಶ್ಮೀರ ಪೊಲೀಸ್, ಉತ್ತರ ಪ್ರದೇಶ ATS ಮತ್ತು ಇತರ ಏಜೆನ್ಸಿಗಳು ಏಕಕಾಲದ ಕಾರ್ಯಾಚರಣೆ ನಡೆಸಿದವು. ಹರಿಯಾಣ ಫರೀದಾಬಾದ್ನಲ್ಲಿ 2,900 ಕೆಜಿ ಸ್ಫೋಟಕ ಸಾಮಗ್ರಿ (ಅಮೋನಿಯಂ ನೈಟ್ರೇಟ್, ಪೊಟ್ಯಾಶಿಯಂ ನೈಟ್ರೇಟ್, ಸಲ್ಫರ್) ವಶಪಡಿಸಿಕೊಂಡರು. ಜೊತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸಹ ಸಿಕ್ಕಿದವು. ಈ ಮಾಡ್ಯೂಲ್ನಲ್ಲಿ 8 ಜನರನ್ನು ಆರೋಪಿತರನ್ನಾಗಿ ಬಂಧಿಸಲಾಯಿತು.
ಈ ಕಾರ್ಯಾಚರಣೆಯಿಂದ ಉಗ್ರರ ಪ್ಲಾನ್ ಸಂಪೂರ್ಣವಾಗಿ ಫೇಲ್ ಆಗುವ ಭಯದಲ್ಲಿ ಶಂಕಿತ ಉಗ್ರರು ತುರ್ತು ಆತ್ಮಾಹುತಿ ದಾಳಿ ನಡೆಸಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಡಾ. ಉಮರ್ ಮೊಹಮ್ಮದ್ (ಪುಲ್ವಾಮಾ, ಕಾಶ್ಮೀರದವರು), ಡಾ. ಮುಜಾಮಿಲ್ ಶಕೀಲ್ ಮತ್ತು ಡಾ. ಆದೀಲ್ ರದರ್ ಎಂಬ ಮೂರು ವೈದ್ಯರು ಈ ಮಾಡ್ಯೂಲ್ನ ಮುಖ್ಯರಾಗಿದ್ದರು. ಇವರು ಸ್ಥಿತಿವಂತ ಕುಟುಂಬಗಳಿಂದ ಬಂದ ವಿದ್ಯಾವಂತ ಯುವಕರು – ಶ್ರೀನಗರ್ದ ಗವರ್ನಮೆಂಟ್ ಮೆಡಿಕಲ್ ಕಾಲೇಜ್ನ ಮೇರಿಟ್ ವಿದ್ಯಾರ್ಥಿಗಳು. ಆದರೂ, ಟೆಲಿಗ್ರಾಂ ಮೂಲಕ ರ್ಯಾಡಿಕಲ್ ಡಾಕ್ಟರ್ಸ್ ಗ್ರೂಪ್ನಲ್ಲಿ ಸಂಘಟಿಸಿ, ಜೆಇಎಂಗೆ ಸೇರಿದ್ದರು.
ಸ್ಫೋಟದ ನಂತರ ಡಾ. ಉಮರ್ನ ತಾಯಿ ಮತ್ತು ಇಬ್ಬರು ಸಹೋದರರನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿದ್ದು, DNA ಟೆಸ್ಟ್ ಮೂಲಕ ದೃಢೀಕರಣ ನಡೆಸಲಾಗುತ್ತಿದೆ. ಉಮರ್ನ ಹೈಯುಂಡೈ i20 ಕಾರು 7 ಬಾರಿ ಖರೀದಿ-ಮಾರಾಟವಾಗಿತ್ತು ಎಂದು ಪೊಲೀಸ್ ತಿಳಿಸಿದ್ದಾರೆ.
ಜೈಷ್-ಎ-ಮೊಹಮ್ಮದ್ ಸಂಘಟನೆಯ ಸ್ಲೀಪರ್ ಸೆಲ್: ವೈದ್ಯರ ಮೂಲಕ ಉಗ್ರ ಕೃತ್ಯ!
ಈ ದಾಳಿ ‘ವೈಟ್ ಕಾಲರ್ ಟೆರರ್’ ಎಂದು ಕರೆಯಲ್ಪಡುವ ಹೊಸ ಬಗೆಯ ಭಯೋತ್ಪಾದನೆಯ ಉದಾಹರಣೆ. ಜೈಶ್-ಎ-ಮೊಹಮ್ಮದ್ ಸಂಘಟನೆಯ ಸ್ಲೀಪರ್ ಸೆಲ್ಗಳು ಕಾಶ್ಮೀರ, ಹರ್ಯಾಣ, ಉತ್ತರ ಪ್ರದೇಶಗಳಲ್ಲಿ ಇದ್ದವು. ಡಾ. ಉಮರ್, ಡಾ. ಮುಜಾಮಿಲ್ ಮತ್ತು ಡಾ. ಆದೀಲ್ ರದರ್ ಮೂವರೂ ಜೆಇಎಂಗೆ ಸೇರಿದ್ದು, ಶ್ರೀನಗರ್ನಲ್ಲಿ ಉಗ್ರರ ಪೋಸ್ಟರ್ಗಳನ್ನು ಹಾಕಿದ್ದರು. ಜೊತೆಗೆ ಲಖನೌದ ಡಾ. ಶಾಹೀನಾ ಶಹೀದ್ (ಮಹಿಳಾ ವೈದ್ಯೆ) ಸಹ ಭಾಗವಹಿಸಿದ್ದಾಳೆ ಎಂದು ಶಂಕೆ. ಇವಳು ಜೆಇಎಂನ ಮಹಿಳಾ ವಿಂಗ್ ‘ಜಮಾತ್ ಉಲ್-ಮೊಮಿನಾತ್’ನಲ್ಲಿ ನೇತೃತ್ವ ವಹಿಸಿದ್ದಾಳೆ, ಮಸೂದ್ ಅಜರ್ ಸಹೋದರಿ ಸಾದಿಯಾ ಅಜರ್ ಅಡಿಯಲ್ಲಿ.
ಆಪರೇಶನ್ ಸಿಂದೂರ್ಗೆ ಪ್ರತೀಕಾರವೇ ಈ ದಾಳಿ?
ಈ ಸ್ಫೋಟ ‘ಆಪರೇಷನ್ ಸಿಂದೂರ್’ಗೆ ಪ್ರತೀಕಾರವಾಗಿದೆ ಎಂದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಮೇ 7ರಂದು ನಡೆದ ಈ ಆಪರೇಷನ್ ಅಪ್ರೇಲ್ 2025ರ ಪಹಲ್ಗಾಮ್ ದಾಳಿಗೆ (26 ಮಂದಿ ಸತ್ತಿದ್ದರು) ಪ್ರತಿಕ್ರಿಯೆಯಾಗಿ ಜೈಶ್-ಎ-ಮೊಹಮ್ಮದ್ನ ಬಹಾವಲ್ಪುರ್ ತರಬೇತಿ ಶಿಬಿರವನ್ನು ಭಾರತೀಯ ವಾಯುಸೇನೆ ಧ್ವಂಸಗೊಳಿಸಿತು. ಈ ಕಾರ್ಯಾಚರಣೆಯಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ನ ಸಂಬಂಧಿಕರು ಸತ್ತಿದ್ದರು. ಇದರ ಪ್ರತೀಕಾರವಾಗಿ ಜೆಇಎಂ ಸ್ಲೀಪರ್ ಸೆಲ್ಗಳ ಮೂಲಕ ದಿಲ್ಲಿಯಲ್ಲಿ ದಾಳಿ ಸಂಘಟಿಸಿತ್ತು ಎಂದು ಮೂಲಗಳು ತಿಳಿಸಿವೆ.
ಇದೀಗ NIA, NSG ಮತ್ತು ಇತರ ಏಜೆನ್ಸಿಗಳು ತನಿಖೆಯನ್ನು ತೀವ್ರಗೊಳಿಸಿವೆ. ಈ ‘ವೈಟ್ ಕಾಲರ್ ಟೆರರ್’ ಮಾಡ್ಯೂಲ್ನ ವ್ಯಾಪಕ ನೆಟ್ವರ್ಕ್ ಇದೆಯೇ ಎಂದು ತಿಳಿಯಲು ಪ್ರಯತ್ನ ನಡೆಯುತ್ತಿದೆ. ಈ ಘಟನೆಯಿಂದ ದೇಶದ ಭದ್ರತೆಗೆ ಚಿಂತೆಯ ಸಂಗತಿ ಉಂಟಾಗಿದೆ.
