ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕಂಟೆಂಟ್ ಕ್ರಿಯೇಟರ್​ಗಳಿಗೆ ಆದಾಯ ಹಂಚಿಕೆ ಮಾಡಿ: ಅಶ್ವಿನಿ ವೈಷ್ಣವ್

Untitled design 2026 02 26T174934.344

ನವದೆಹಲಿ, ಫೆಬ್ರವರಿ 28: ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ ಸೇರಿದಂತೆ ವಿವಿಧ ಕಂಟೆಂಟ್‌ಗಳನ್ನು ರಚಿಸಿ ಅಪ್‌ಲೋಡ್ ಮಾಡುವವರಿಗೆ ಸಿಹಿಸುದ್ದಿ ಲಭಿಸಿದೆ. ಡಿಜಿಟಲ್ ಮಾಧ್ಯಮಗಳು ಕಂಟೆಂಟ್ ಕ್ರಿಯೇಟರ್‌ಗಳಿಗೆ ತಮ್ಮ ಆದಾಯದಲ್ಲಿ ನ್ಯಾಯಯುತ ಪಾಲು ನೀಡಬೇಕು ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಒತ್ತಾಯಿಸಿದ್ದಾರೆ.

ಡಿಜಿಟಲ್ ನ್ಯೂಸ್ ಪಬ್ಲಿಶರ್ಸ್ ಅಸೋಸಿಯೇಶನ್ (ಡಿಎನ್‌ಪಿಎ) ಸಮ್ಮೇಳನ 2026 ರಲ್ಲಿ ಮಾತನಾಡಿದ ಅವರು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಿಗೆ ಕಂಟೆಂಟ್ ಒದಗಿಸುವವರಿಗೆ ಸೂಕ್ತ ಮನ್ನಣೆ ಮತ್ತು ಸಂಭಾವನೆ ನೀಡುವಲ್ಲಿ ವಿಫಲವಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಡಿಜಿಟಲ್ ಪರಿಸರ ವ್ಯವಸ್ಥೆಯ ಬೆನ್ನೆಲುಬೇ ಕ್ರಿಯೇಟರ್‌ಗಳು’

“ಮಾಧ್ಯಮ ವೃತ್ತಿಪರರು, ಸೃಜನಶೀಲ ಕಲಾವಿದರು, ಇನ್‌ಫ್ಲುಯೆನ್ಸರ್‌ಗಳು, ಬರಹಗಾರರು ಮತ್ತು ಸಂಶೋಧಕರು ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ತಮ್ಮ ಕಂಟೆಂಟ್‌ಗಳನ್ನು ಸೃಷ್ಟಿಸುತ್ತಾರೆ. ಅವರೇ ಈ ಡಿಜಿಟಲ್ ಪರಿಸರ ವ್ಯವಸ್ಥೆಯ ನಿಜವಾದ ಬೆನ್ನೆಲುಬು” ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ವೈಷ್ಣವ್ ಹೇಳಿದರು.

“ಗ್ರಾಮೀಣ ಪ್ರದೇಶದಲ್ಲಿ ಕುಳಿತು ಮನರಂಜನಾತ್ಮಕ ವಿಡಿಯೋಗಳನ್ನು ತಯಾರಿಸುವವರಿಂದ ಹಿಡಿದು ಅತ್ಯಾಧುನಿಕ ಸೃಜನಶೀಲ ಕಲಾವಿದರವರೆಗೆ ಎಲ್ಲರಿಗೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಆದರೆ ಇಂದಿನ ಈ ವ್ಯವಸ್ಥೆಯಲ್ಲಿ ಹೆಚ್ಚಿನ ಕ್ರಿಯೇಟರ್‌ಗಳಿಗೆ ನ್ಯಾಯಯುತ ಆದಾಯ ಸಿಗುತ್ತಿಲ್ಲ” ಎಂದು ಅವರು ವಿವರಿಸಿದರು.

ಮಾನವ ಅಭಿವೃದ್ಧಿಗೆ ಪ್ರೋತ್ಸಾಹದ ಅಗತ್ಯ

ಮಾನವ ಅಭಿವೃದ್ಧಿ ಯಾವಾಗಲೂ ಪ್ರೋತ್ಸಾಹ ಮತ್ತು ಮನ್ನಣೆಯಿಂದ ಪ್ರೇರಿತವಾಗುತ್ತದೆ ಎಂದು ವೈಷ್ಣವ್ ಉಲ್ಲೇಖಿಸಿದರು. “ಪ್ರಾಮಾಣಿಕ ಕೆಲಸಕ್ಕೆ ನ್ಯಾಯಯುತ ಪ್ರಶಂಸೆ ಮತ್ತು ಪ್ರತಿಫಲ ಸಿಗುವ ಭರವಸೆ ಇದ್ದಾಗ ಮಾತ್ರ ಸೃಜನಶೀಲತೆಗೆ ಪ್ರೋತ್ಸಾಹ ಸಿಗುತ್ತದೆ. ಕಂಟೆಂಟ್ ಕ್ರಿಯೇಟರ್‌ಗಳಿಗೆ ಈ ರೀತಿಯ ಮನ್ನಣೆ ನೀಡುವುದು ಡಿಜಿಟಲ್ ಯುಗದ ಪ್ರಮುಖ ಆವಶ್ಯಕತೆಯಾಗಿದೆ” ಎಂದು ಅವರು ತಿಳಿಸಿದರು.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕ್ರಿಯೇಟರ್‌ಗಳಿಂದ ಪಡೆಯುವ ಕಂಟೆಂಟ್‌ನ ಮೌಲ್ಯವನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಆದಾಯ ಹಂಚಿಕೆ ಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜವಾಬ್ದಾರಿ ಹೆಚ್ಚಳ

ಡೀಪ್‌ಫೇಕ್ ಮತ್ತು ಸುಳ್ಳು ಮಾಹಿತಿ ಪ್ರಸರಣದಂತಹ ಸಮಸ್ಯೆಗಳ ಬಗ್ಗೆಯೂ ಸಚಿವರು ಎಚ್ಚರಿಕೆ ನೀಡಿದರು. “ಡೀಪ್‌ಫೇಕ್‌ನಂತಹ ನಕಲಿ ಚಿತ್ರಗಳು ಮತ್ತು ಸುಳ್ಳು ಮಾಹಿತಿಗಳ ಪ್ರಸರಣದಿಂದಾಗಿ ವಿಶ್ವಾದ್ಯಂತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಸಾರ್ವಜನಿಕ ನಂಬಿಕೆ ಕುಸಿಯುವ ಅಪಾಯವಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.

“ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ತಮ್ಮಲ್ಲಿ ಪ್ರಕಟವಾಗುವ ಕಂಟೆಂಟ್‌ನ ಸತ್ಯಾಸತ್ಯತೆಗೆ ಜವಾಬ್ದಾರರಾಗಿರಬೇಕು. ಅಪಾಯಕಾರಿ ಮತ್ತು ತಪ್ಪುದಾರಿಗೆಳೆಯುವ ಕಂಟೆಂಟ್‌ಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು” ಎಂದು ಅವರು ಸೂಚಿಸಿದರು.

 

 

 

Exit mobile version