ಗ್ಲೋಬಲ್ ತಮಿಳಿಗನಾಗ್ತಾರ ತಮಿಳುನಾಡು ಸಿಎಂ ವಿಜಯ್

Untitled design 2026 05 21T204828.549

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ, ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್), ಆರಂಭದಲ್ಲೇ ಹೊಸದೊಂದು ರಾಜಕೀಯ ವಿವಾದಕ್ಕೆ ಸಿಲುಕಿದ್ದಾರೆಯೇ? ಹೀಗೊಂದು ಪ್ರಶ್ನೆ ಈಗ ದಕ್ಷಿಣ ಭಾರತದ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಮುಖ್ಯ ಕಾರಣ, ಶ್ರೀಲಂಕಾದ ತಮಿಳರ ಮಾರಣಹೋಮದ ನೆನಪಿನ ‘ಮುಳ್ಳಿವಾಕಲ್ ಘಟನೆ’ ಕುರಿತು ಅವರು ವ್ಯಕ್ತಪಡಿಸಿರುವ ಅಭಿಪ್ರಾಯ.

ಏನಿದು ಮುಳ್ಳಿವಾಕಲ್ ಹಿನ್ನೆಲೆ?

1980ರಿಂದ 2009ರವರೆಗೆ ಶ್ರೀಲಂಕಾದಲ್ಲಿ ತಮಿಳು ಈಳಂ ಪರ ಹೋರಾಟ ನಡೆಸಿದ್ದ ಎಲ್‌ಟಿಟಿಇ (LTTE) ಸಂಘಟನೆಯ ಕೊನೆಯ ದಿನಗಳಿಗೆ ಸಾಕ್ಷಿಯಾಗಿದ್ದು ಇದೇ ಮುಳ್ಳಿವಾಕಲ್ ಎಂಬ ಕರಾವಳಿ ಹಳ್ಳಿ. 2009ರ ಮೇ 18ರಂದು ಶ್ರೀಲಂಕಾ ಸೇನೆ ನಡೆಸಿದ ಅಂತಿಮ ಕಾರ್ಯಾಚರಣೆಯಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾಗಿದ್ದು, ಇದರಿಂದ ಮೂರು ದಶಕಗಳ ಅಂತರ್ಯುದ್ಧ ಕೊನೆಗೊಂಡಿತ್ತು.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಈ ಅಂತಿಮ ಯುದ್ಧದ ವೇಳೆ ಸಾವಿರಾರು ತಮಿಳು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ, ಜಾಗತಿಕವಾಗಿ ತಮಿಳು ಸಮುದಾಯವು ಪ್ರತಿವರ್ಷ ಮೇ 18 ಅನ್ನು ‘ಮುಳ್ಳಿವಾಕಲ್ ನೆನಪಿನ ದಿನ’ ಅಥವಾ ‘ತಮಿಳು ಜನಾಂಗೀಯ ಹತ್ಯೆ ದಿನ’ವಾಗಿ ಆಚರಿಸುತ್ತದೆ. ಭಾರತದಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ಕೃತ್ಯದ ಹಿನ್ನೆಲೆ ಎಲ್‌ಟಿಟಿಇ ಸಂಘಟನೆಯನ್ನು ನಿಷೇಧಿಸಲಾಗಿದೆ.

ವಿವಾದಕ್ಕೆ ಕಾರಣವಾದ ಸಿಎಂ ವಿಜಯ್ ಪೋಸ್ಟ್

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮೇ 18ರಂದು ಸಿಎಂ ವಿಜಯ್ ಅವರು ಜಾಗತಿಕ ತಮಿಳು ಸಮುದಾಯಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು. “ಮುಳ್ಳಿವಾಕಲ್ ನೆನಪುಗಳನ್ನು ನಮ್ಮ ಹೃದಯದಲ್ಲಿ ಇಟ್ಟುಕೊಳ್ಳೋಣ. ಸಮುದ್ರದಾಚೆ ವಾಸಿಸುವ ನಮ್ಮ ತಮಿಳು ಬಾಂಧವರ ಹಕ್ಕುಗಳಿಗಾಗಿ ನಾವು ಸದಾ ಜೊತೆಯಾಗಿ ನಿಲ್ಲುತ್ತೇವೆ” ಎಂದು ಅವರು ಬರೆದುಕೊಂಡಿದ್ದರು. ಪ್ರಭಾಕರನ್ ನೇತೃತ್ವದ ಹೋರಾಟದ ಹಿನ್ನೆಲೆಯುಳ್ಳ ಈ ದಿನವನ್ನು ಸಿಎಂ ನೆನೆದಿರುವುದು ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್ ಮೌನ: ಬಿಜೆಪಿಯಿಂದ ತೀಕ್ಷ್ಣ ವಾಗ್ದಾಳಿ

ವಿಜಯ್ ಅವರ ಈ ಪೋಸ್ಟ್ ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್‌ಗಳು ಹತ್ಯೆ ಮಾಡಿದ್ದ ಕಹಿ ನೆನಪನ್ನು ಇಂದಿಗೂ ಕಾಂಗ್ರೆಸ್ ಮರೆತಿಲ್ಲ. ಆದರೂ, ತಮಿಳುನಾಡು ಸಿಎಂ ಮುಳ್ಳಿವಾಕಲ್ ದಿನವನ್ನು ಬೆಂಬಲಿಸಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿರುವುದು ವಿರೋಧ ಪಕ್ಷಗಳ ಕಣ್ಣು ಕೆಂಪಗಾಗಿಸಿದೆ.

ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ರಾಹುಲ್ ಗಾಂಧಿ ಅವರ ವಿರುದ್ಧ ಟೀಕೆಗಳ ಸುರಿಮಳೆಗೆರೆದಿದೆ. ತನ್ನ ತಂದೆಯ ಹತ್ಯೆಗೆ ಕಾರಣವಾದ ಸಂಘಟನೆಯ ಹಿನ್ನೆಲೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಟಿವಿಕೆ ಪಕ್ಷದ ಧೋರಣೆಯ ವಿರುದ್ಧ ಕಾಂಗ್ರೆಸ್ ಯಾಕೆ ಮೌನವಾಗಿದೆ ಎಂದು ಬಿಜೆಪಿ ಪ್ರಶ್ನಿಸಿದೆ. ಈ ಎಲ್ಲ ಟೀಕೆ ಹಾಗೂ ರಾಜಕೀಯ ಸರಣಿ ಪ್ರಶ್ನೆಗಳ ನಡುವೆ ಕಾಂಗ್ರೆಸ್ ಹೈಕಮಾಂಡ್ ನಡೆ ಏನಾಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

Exit mobile version