ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿಗೆ ಸಂಚು: ಆರೋಪಿ ಜೈಲಿನಲ್ಲೇ ಕೊ*ಲೆ

Untitled design 2026 02 10T091039.983

ಫರಿದಾಬಾದ್: ಅಯೋಧ್ಯೆಯ ಭವ್ಯ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾನೆ ಎನ್ನಲಾದ ಪ್ರಮುಖ ಆರೋಪಿ ಅಬ್ದುಲ್ ರೆಹಮಾನ್ ಜೈಲಿನಲ್ಲೇ ಹತ್ಯೆಗೀಡಾಗಿದ್ದಾನೆ.. ಹರಿಯಾಣದ ಫರಿದಾಬಾದ್ ಜೈಲಿನಲ್ಲಿ ನಡೆದ ಈ ಹತ್ಯೆ ಜೈಲು ಭದ್ರತೆ ಹಾಗೂ ಕೈದಿಗಳ ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆ ಎಬ್ಬಿಸಿದೆ.

ಉತ್ತರ ಪ್ರದೇಶದ ಮಿಲ್ಕಿಪುರ ನಿವಾಸಿಯಾದ ಅಬ್ದುಲ್ ರೆಹಮಾನ್ (20) ಎಂಬಾತನನ್ನು 2025ರ ಮಾರ್ಚ್ ತಿಂಗಳಲ್ಲಿ ಗುಜರಾತ್ ಹಾಗೂ ಹರಿಯಾಣ ಎಸ್‌ಟಿಎಫ್ (STF) ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಲಾಗಿತ್ತು. ಬಂಧನದ ವೇಳೆ ಈತನ ಬಳಿ ಎರಡು ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾಗಿದ್ದು, ಅಯೋಧ್ಯೆಯ ರಾಮಮಂದಿರದ ಮೇಲೆ ಸ್ಫೋಟ ನಡೆಸಲು ಆತ ಸಂಚು ರೂಪಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ISI ಸಂಪರ್ಕ ಶಂಕೆ

ತನಿಖಾ ಸಂಸ್ಥೆಗಳ ಪ್ರಕಾರ, ಅಬ್ದುಲ್ ರೆಹಮಾನ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿತ್ತು. ಈತನ ಮೊಬೈಲ್ ಫೋನ್ ಪರಿಶೀಲನೆ ವೇಳೆ ರಾಮಮಂದಿರಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು, ನಕ್ಷೆಗಳು ಮತ್ತು ಸಂವೇದನಾಶೀಲ ಮಾಹಿತಿಗಳು ಪತ್ತೆಯಾಗಿದ್ದವು.

ಜೈಲಿನಲ್ಲಿ ಹತ್ಯೆ ನಡೆದಿದ್ದು ಹೇಗೆ?

ಭಾನುವಾರ ರಾತ್ರಿ ಫರಿದಾಬಾದ್ ಜೈಲಿನಲ್ಲಿ ಅಬ್ದುಲ್ ರೆಹಮಾನ್ ಹಾಗೂ ಮತ್ತೊಬ್ಬ ಕೈದಿ ನಡುವೆ ಜಗಳ ಉಂಟಾಗಿದೆ. ಕಾಶ್ಮೀರಿ ಮೂಲದ ಕೈದಿ ಅರುಣ್ ಚೌಧರಿ ಎಂಬಾತನೊಂದಿಗೆ ರೆಹಮಾನ್ ವಾಗ್ವಾದ ನಡೆಸಿದ್ದಾನೆ ಎಂದು ಜೈಲು ಮೂಲಗಳು ತಿಳಿಸಿವೆ. ರಾತ್ರಿ ಸುಮಾರು 2:30ರ ವೇಳೆಗೆ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ರೆಹಮಾನ್ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ರೆಹಮಾನ್‌ನ್ನು ತಕ್ಷಣವೇ ಜೈಲು ಆಸ್ಪತ್ರೆಗೆ ದಾಖಲಿಸಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಜೈಲು ಭದ್ರತೆ ಕುರಿತು ಅನುಮಾನ

ಈ ಘಟನೆ ಜೈಲು ಭದ್ರತೆಯ ಕುರಿತು ಗಂಭೀರ ಆತಂಕ ಮೂಡಿಸಿದೆ. ಅತ್ಯಂತ ಸಂವೇದನಾಶೀಲ ಪ್ರಕರಣದ ಆರೋಪಿ ಆಗಿದ್ದರೂ, ಜೈಲಿನೊಳಗೆ ಇಂತಹ ಹತ್ಯೆ ನಡೆದಿರುವುದು ಭದ್ರತಾ ಲೋಪವೇ ಎಂಬ ಪ್ರಶ್ನೆ ಎದ್ದಿದೆ. ಜೈಲು ಅಧಿಕಾರಿಗಳು ಪ್ರಕರಣದ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದು, ಹತ್ಯೆಗೆ ಬಳಸಿದ ವಸ್ತು ಜೈಲಿನೊಳಗೆ ಹೇಗೆ ಬಂದಿತು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಅರುಣ್ ಚೌಧರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆ ವೈಯಕ್ತಿಕ ವೈಷಮ್ಯದಿಂದ ನಡೆದಿತ್ತೇ, ಅಥವಾ ಇದರ ಹಿಂದೆ ಇನ್ನೇನಾದರೂ ದೊಡ್ಡ ಸಂಚು ಇದೆಯೇ ಎಂಬ ಅಂಶಗಳನ್ನು ತನಿಖೆ ಮೂಲಕ ಹೊರತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version