ಬಾರಾಮತಿ: ಮಹಾರಾಷ್ಟ್ರ ರಾಜಕೀಯದ ಪ್ರಭಾವಿ ನಾಯಕ, ಎನ್ಸಿಪಿ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇದ್ದ ವಿಮಾನ ಇಂದು ಬೆಳಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶದ (Emergency Landing) ವೇಳೆ ಪತನಗೊಂಡಿದೆ. ಈ ಭೀಕರ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯ ಹಿನ್ನೆಲೆ:
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಅವರು ಇಂದು ಬಾರಾಮತಿಯಲ್ಲಿ ನಾಲ್ಕು ಪ್ರಮುಖ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಇದಕ್ಕಾಗಿ ಅವರು ಮುಂಬೈನಿಂದ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು. ವಿಮಾನವು ಮುಂಬೈನಿಂದ ಹೊರಟ ಒಂದು ಗಂಟೆಯ ನಂತರ, ಅಂದರೆ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಬಾರಾಮತಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಲು ಪೈಲಟ್ ಪ್ರಯತ್ನಿಸಿದರಾದರೂ, ವಿಮಾನವು ರನ್ವೇ ಮೇಲೆ ನಿಯಂತ್ರಣ ತಪ್ಪಿ ಬೆಳಗ್ಗೆ 9.30ರ ಹೊತ್ತಿಗೆ ವಿಮಾನ ಪತನಗೊಂಡಿದೆ.
BIG BREAKING | Maharashtra Deputy Chief Minister Ajit Pawar’s aircraft meets with an accident during a possible emergency landing in Baramati. More details awaited. pic.twitter.com/m7JrXoBL28
— Asawari Jindal (@AsawariJindal15) January 28, 2026
ಅಪಘಾತ ಸಂಭವಿಸಿದ ವಿಮಾನದಲ್ಲಿ ಅಜಿತ್ ಪವಾರ್ ಅವರು ಸ್ವತಃ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಈ ಬಗ್ಗೆ DGCA ಅಧಿಕೃತ ಮಾಹಿತಿ ನೀಡಿದೆ. ಸ್ಥಳದಿಂದ ಲಭ್ಯವಾಗಿರುವ ದೃಶ್ಯಗಳು ಅಪಘಾತದ ತೀವ್ರತೆಯನ್ನು ಸಾರುತ್ತಿವೆ. ಪತನಗೊಂಡ ಬೆನ್ನಲ್ಲೇ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಆಕಾಶದತ್ತ ಕಪ್ಪು ಹೊಗೆ ಚಿಮ್ಮುತ್ತಿದೆ. ವಿಮಾನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅವಶೇಷಗಳು ರನ್ವೇ ಉದ್ದಕ್ಕೂ ಹರಡಿವೆ. ಇನ್ನೂ ಮೃತದೇಹಗಳನ್ನ ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ.
ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರವು ಸ್ಥಳದಲ್ಲಿದ್ದು ತನಿಖೆ ಕೈಗೊಂಡಿದೆ. ತುರ್ತು ಭೂಸ್ಪರ್ಶಕ್ಕೆ ನಿಖರವಾದ ಕಾರಣವೇನು ? ಇಂಜಿನ್ ವಿಫಲವಾಗಿದೆಯೇ ಅಥವಾ ಹವಾಮಾನ ವೈಪರೀತ್ಯವೇ ? ಎಂಬ ಬಗ್ಗೆ ತಜ್ಞರು ಪರಿಶೀಲಿಸುತ್ತಿದ್ದಾರೆ.
