ರಾಂಚಿ: ಜಾರ್ಖಂಡ್ನ ಛತ್ರ ಜಿಲ್ಲೆಯಲ್ಲಿ ಸೋಮವಾರ ಸಂಜೆ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಏಳು ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ಪತನಗೊಂಡಿರುವುದಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಅಧಿಕೃತವಾಗಿ ತಿಳಿಸಿದೆ. ರಕ್ಷಣಾ ತಂಡಗಳು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಚುರುಕುಗೊಂಡಿದೆ.
ವಿಮಾನದಲ್ಲಿದ್ದವರು ಯಾರು ?
ಅಪಘಾತಕ್ಕೀಡಾದ ವಿಮಾನದಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು. ಅದರಂತೆ ಇಬ್ಬರು ಪೈಲಟ್ಗಳು, ಒಬ್ಬ ರೋಗಿ (ಚಿಕಿತ್ಸೆಗಾಗಿ ದೆಹಲಿಗೆ ತೆರಳುತ್ತಿದ್ದವರು), ಇಬ್ಬರು ರೋಗಿಯ ಸಹಾಯಕರು, ಒಬ್ಬ ವೈದ್ಯರು ಮತ್ತು ಒಬ್ಬ ಅರೆವೈದ್ಯಕೀಯ ಸಿಬ್ಬಂದಿ (Paramedic) ವಿಮಾನದಲ್ಲಿದ್ದರು ಎಂದು ತಿಳಿದುಬಂದಿದೆ.
ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್ಕ್ರಾಫ್ಟ್ ಸಿ90 (VT-AJV) ವಿಮಾನವು ರಾಂಚಿಯಿಂದ ಸಂಜೆ 7:11ಕ್ಕೆ ದೆಹಲಿಗೆ ಹೊರಟಿದೆ. ಕೋಲ್ಕತ್ತಾ ಎಟಿಸಿ (ATC) ಜೊತೆಗೆ ಸಂಪರ್ಕ ಸಾಧಿಸಿದ ನಂತರ, ರಾತ್ರಿ 7:34ರ ಸುಮಾರಿಗೆ ವಾರಣಾಸಿಯಿಂದ ಆಗ್ನೇಯಕ್ಕೆ ಸುಮಾರು 100 ನಾಟಿಕಲ್ ಮೈಲಿ ದೂರದಲ್ಲಿ ವಿಮಾನದ ರಡಾರ್ ಮತ್ತು ಸಂವಹನ ಸಂಪರ್ಕ ಕಡಿತಗೊಂಡಿದೆ. ಆ ನಂತರ ವಿಮಾನವು ಛತ್ರ ಜಿಲ್ಲೆಯ ವ್ಯಾಪ್ತಿಯಲ್ಲಿ ಪತನಗೊಂಡಿದೆ.
ತನಿಖೆಗೆ ಎಎಐಬಿ (AAIB) ತಂಡ ಆಗಮನ
ಘಟನೆ ನಡೆದ ತಕ್ಷಣ ಜಿಲ್ಲಾಡಳಿತದ ಶೋಧ ಮತ್ತು ರಕ್ಷಣಾ ತಂಡವು ಸ್ಥಳಕ್ಕೆ ತಲುಪಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವಿಮಾನ ಅಪಘಾತ ತನಿಖಾ ದಳ (AAIB) ತಂಡವನ್ನು ತನಿಖೆಗಾಗಿ ಕಳುಹಿಸುತ್ತಿದೆ. ವಿಮಾನದ ಎಂಜಿನ್ ವೈಫಲ್ಯ ಅಥವಾ ಹವಾಮಾನ ವೈಪರೀತ್ಯ ಈ ದುರಂತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯಲಿದೆ.