ಗುಜರಾತ್ನ ಅಹಮದಾಬಾದ್ನಲ್ಲಿ ಜೂನ್ 12 ರಂದು ಏರ್ ಇಂಡಿಯಾ ವಿಮಾನ ವೈದ್ಯಕೀಯ ಕಾಲೇಜಿಗೆ ಅಪ್ಪಳಿಸಿದ ದುರಂತದ ಕೆಲವೇ ನಿಮಿಷಗಳಲ್ಲಿ, 56 ವರ್ಷದ ಉದ್ಯಮಿ ರಾಜು ಪಟೇಲ್ ತಮ್ಮ ತಂಡದೊಂದಿಗೆ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ಈ ಘಟನೆಯಲ್ಲಿ ತಕ್ಷಣವೇ ಸ್ಪಂದಿಸಿದ ಅವರ ಧೈರ್ಯವನ್ನು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
“ಮೊದಲ 20 ನಿಮಿಷಗಳ ಕಾಲ ಬೆಂಕಿ ತೀವ್ರವಾಗಿತ್ತು, ಹತ್ತಿರ ಹೋಗಲು ಸಾಧ್ಯವಾಗಲಿಲ್ಲ,” ಎಂದು ಪಟೇಲ್ ಘಟನೆಯನ್ನು ನೆನಪಿಸಿಕೊಂಡರು. ದಟ್ಟ ಹೊಗೆ ಮತ್ತು ಜ್ವಾಲೆಗಳ ನಡುವೆಯೂ, ಅಗ್ನಿಶಾಮಕ ದಳ ಮತ್ತು 108 ಆಂಬ್ಯುಲೆನ್ಸ್ಗಳ ಆಗಮನದ ನಂತರ, ಗಾಯಾಳುಗಳನ್ನು ಸ್ಥಳಾಂತರಿಸಲು ಅವರು ಸಹಾಯ ಮಾಡಿದರು. ಸೈರನ್ಗಳ ಕೊರತೆಯಿಂದಾಗಿ ಸೀರೆಗಳು ಮತ್ತು ಬೆಡ್ಶೀಟ್ಗಳನ್ನು ಬಳಸಿ ಗಾಯಾಳುಗಳನ್ನು ಆಂಬ್ಯುಲೆನ್ಸ್ಗೆ ಸಾಗಿಸಲಾಯಿತು.
ರಕ್ಷಣಾ ಕಾರ್ಯಾಚರಣೆಯ ಜೊತೆಗೆ, ಪಟೇಲ್ರ ತಂಡವು ಪ್ರಯಾಣಿಕರ ವಸ್ತುಗಳನ್ನು ಶೋಧಿಸುವ ಕಾರ್ಯಕ್ಕೆ ಕೈಹಾಕಿತ್ತು. ಸಂಜೆ 4 ಗಂಟೆಯ ವೇಳೆಗೆ ರಕ್ಷಣಾ ಕಾರ್ಯ ಬಹುತೇಕ ಮುಗಿದ ನಂತರ, ಅವಶೇಷಗಳಲ್ಲಿ 800 ಗ್ರಾಂ ಚಿನ್ನದ ಆಭರಣಗಳು, ₹80,000 ನಗದು, ಪಾಸ್ಪೋರ್ಟ್ಗಳು ಮತ್ತು ಭಗವದ್ಗೀತೆಯ ಪ್ರತಿ ಸಿಕ್ಕಿತ್ತು. ಈ ಎಲ್ಲವನ್ನೂ ಅವರು ಪೊಲೀಸರಿಗೆ ಒಪ್ಪಿಸಿದರು. “ನೆರವು ನೀಡಲು ಸಾಧ್ಯವಾದ್ದಕ್ಕೆ ಸಂತೋಷವಾಗಿದೆ. ನಮ್ಮಿಂದಾದಷ್ಟು ಮಾಡಿದ್ದೇವಿ,” ಎಂದು ಅವರು ಹೇಳಿದರು.
ರಾಜು ಪಟೇಲ್ ಅವರು ಸೇವಾ ಕಾರ್ಯದಲ್ಲಿ ಮೊದಲೇ ತೊಡಗಿಸಿಕೊಂಡಿದ್ದರು. 2008ರ ಅಹಮದಾಬಾದ್ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಆಸ್ಪತ್ರೆಯಿಂದ ಕೇವಲ 100 ಮೀಟರ್ ದೂರದಲ್ಲಿದ್ದ ಅವರು, ಆಗಲೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. “ಆದರೆ ಈ ವಿಮಾನ ದುರಂತವನ್ನು ಎಂದಿಗೂ ಮರೆಯಲಾಗದು,” ಎಂದು ಅವರು ಭಾವುಕರಾಗಿ ನುಡಿದರು. ಅಧಿಕಾರಿಗಳು ಸಂಜೆ 9 ಗಂಟೆಯವರೆಗೆ ಕಾರ್ಯಾಚರಣೆಗೆ ಅನುಮತಿ ನೀಡಿದ್ದರಿಂದ, ತಮ್ಮ ತಂಡದೊಂದಿಗೆ ಗರಿಷ್ಠ ಸಹಾಯ ಮಾಡಲು ಸಾಧ್ಯವಾಯಿತು ಎಂದು ಅವರು ಕೃತಜ್ಞತೆ ಸೂಚಿಸಿದರು.