‘ಗುಡ್ ಬೈ ಟು ಇಂಡಿಯಾ’, ವಿಮಾನ ದುರಂತದಲ್ಲಿ ಮಡಿದ ಬ್ರಿಟಿಷ್ ಪ್ರಜೆಯ ಕೊನೆಯ ವಿಡಿಯೋ

Web 2025 06 12t221331.322

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171, ಬೋಯಿಂಗ್ 787-8 ಡ್ರೀಮ್‌ಲೈನರ್, ಜೂನ್ 12, 2025 ರಂದು ಮಧ್ಯಾಹ್ನ 1:38ಕ್ಕೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮೇಘನಿನಗರದಲ್ಲಿ ಪತನಗೊಂಡಿತು. ಈ ಘೋರ ದುರಂತದಲ್ಲಿ 242 ಜನರ ಪೈಕಿ 241 ಜನರು, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ, ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು, ಮತ್ತು 1 ಕೆನಡಿಯನ್ ಪ್ರಜೆ ಇದ್ದರು. ಈ ದುರಂತದಲ್ಲಿ ಮೃತಪಟ್ಟ ಬ್ರಿಟಿಷ್ ಪ್ರಜೆ ಜ್ಯಾಮಿ ರೇ ಮೀಕ್ ಮತ್ತು ಆತನ ಸ್ನೇಹಿತನ ಕೊನೆಯ ವಿಡಿಯೋ ಈಗ ವೈರಲ್ ಆಗಿದೆ, ಇದರಲ್ಲಿ ಅವರು “ಗುಡ್ ಬೈ ಟು ಇಂಡಿಯಾ” ಎಂದು ಖುಷಿಯಿಂದ ಹೇಳಿದ್ದಾರೆ.

ಬ್ರಿಟಿಷ್ ಪ್ರಜೆ ಜ್ಯಾಮಿ ರೇ ಮೀಕ್ ಮತ್ತು ಆತನ ಸ್ನೇಹಿತ ಭಾರತದಲ್ಲಿ ಪ್ರವಾಸಕ್ಕಾಗಿ ಆಗಮಿಸಿದ್ದರು. ದೇಶದ ಹಲವು ಪ್ರೇಕ್ಷಣೀಯ ಸ್ಥಳಗಳು, ಜನಸಂದಣಿ ಪ್ರದೇಶಗಳು, ಮತ್ತು ಮಾರುಕಟ್ಟೆಗಳಿಗೆ ಭೇಟಿ ನೀಡಿದ್ದ ಅವರು, ತಮ್ಮ ಪ್ರವಾಸವನ್ನು ಸಂತೋಷದಿಂದ ದಾಖಲಿಸಿದ್ದರು. ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಮರಳಲು ಏರ್ ಇಂಡಿಯಾ ವಿಮಾನವನ್ನು ಹತ್ತುವ ಮೊದಲು, ಲಾಂಜ್‌ನಲ್ಲಿ ಕುಳಿತು ಒಂದು ವಿಡಿಯೋವನ್ನು ತೆಗೆದಿದ್ದಾರೆ. ಆದರೆ, ಈ ವಿಡಿಯೋ ಅವರ ಕೊನೆಯ ವಿಡಿಯೋ ಆಗಿರುವುದು ದುಃಖದ ಸಂಗತಿ.

ADVERTISEMENT
ADVERTISEMENT


ವಿಡಿಯೋದಲ್ಲಿ ಜ್ಯಾಮಿ ರೇ ಮೀಕ್, “ನಾವೀಗ ವಿಮಾನ ನಿಲ್ದಾಣದಲ್ಲಿದ್ದೇವೆ. ಇನ್ನೇನು ವಿಮಾನ ಬೋರ್ಡಿಂಗ್ ಆಗಬೇಕಿದೆ. ಗುಡ್ ಬೈ ಟು ಇಂಡಿಯಾ, ಸುದೀರ್ಘ 10 ಗಂಟೆಗಳ ಲಂಡನ್ ಪ್ರಯಾಣ ಇದು,” ಎಂದು ಖುಷಿಯಿಂದ ಹೇಳಿದ್ದಾರೆ. ತಮ್ಮ ಸ್ನೇಹಿತನೊಂದಿಗಿನ ಸಂಭಾಷಣೆಯಲ್ಲಿ, “ಭಾರತ ಪ್ರಯಾಣದ ಅತೀ ದೊಡ್ಡ ಟೇಕ್‌ಅವೇ ಎಂದರೆ ನಾನು ತಾಳ್ಮೆ ಕಳೆದುಕೊಂಡಿಲ್ಲ. ಲಂಡನ್‌ಗೆ ಅತ್ಯಂತ ಸಂತೋಷದಿಂದ, ಖುಷಿಯಾಗಿ ಮರಳುತ್ತಿದ್ದೇನೆ,” ಎಂದು ತಿಳಿಸಿದ್ದಾರೆ. ಆದರೆ, ಈ ವಿಡಿಯೋ ತೆಗೆದ ಕೆಲವೇ ನಿಮಿಷಗಳಲ್ಲಿ ವಿಮಾನವು 825 ಅಡಿ ಎತ್ತರದಿಂದ ಕೆಳಗಿಳಿದು ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಅಪ್ಪಳಿಸಿತು.

ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ತಾಂತ್ರಿಕ ದೋಷದಿಂದಾಗಿ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ಈ ದುರಂತದಲ್ಲಿ 3 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 241 ಜನರು ಸಾವನ್ನಪ್ಪಿದ್ದಾರೆ. ರಮೇಶ್ ವಿಶ್ವಾಸ್‌ಕುಮಾರ್ ಎಂಬ ಒಬ್ಬ ಬ್ರಿಟಿಷ್ ಪ್ರಜೆ ಮಾತ್ರ ಪವಾಡದಂತೆ ಜೀವ ಉಳಿಸಿಕೊಂಡಿದ್ದಾರೆ. 204 ಶವಗಳನ್ನು ಸ್ಥಳದಿಂದ ಸಂಗ್ರಹಿಸಲಾಗಿದೆ ಎಂದು ಅಹಮದಾಬಾದ್ ಪೊಲೀಸ್ ಕಮಿಷನರ್ ಜಿ.ಎಸ್. ಮಲಿಕ್ ತಿಳಿಸಿದ್ದಾರೆ.

ದುರಂತದ ತಕ್ಷಣ NDRF, ಭಾರತೀಯ ಸೇನೆ, CRPF, ಮತ್ತು ಕೋಸ್ಟ್ ಗಾರ್ಡ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. 45 ವೈದ್ಯಕೀಯ ವಿದ್ಯಾರ್ಥಿಗಳು ಗಾಯಗೊಂಡು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಾಟಾ ಗ್ರೂಪ್ ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಮತ್ತು ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನ ಪುನರ್‌ನಿರ್ಮಾಣಕ್ಕೆ ನೆರವು ಘೋಷಿಸಿದೆ. ಏರ್ ಇಂಡಿಯಾ ದೆಹಲಿ ಮತ್ತು ಮುಂಬೈನಿಂದ ಪರಿಹಾರ ವಿಮಾನಗಳನ್ನು ಏರ್ಪಡಿಸಿದೆ.

Exit mobile version