ಮಹಾಶಿವರಾತ್ರಿಯಂದೇ ಮಾಂಸದೂಟ : ABVP-SFI ನಡುವೆ ಘರ್ಷಣೆ

ಮಹಾಶಿವರಾತ್ರಿಯಂದೇ ಮಾಂಸದೂಟ

Untitled Design 2025 02 27t181501.300

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ SFI ಹಾಗೂ ABVP ನಡುವಣ ಕಿಚ್ಚು ಧಗಧಗಿಸಿದೆ. ಎರಡೂ ಗುಂಪುಗಳ ನಡುವೆ ಆಹಾರ ವಿಚಾರಕ್ಕೆ ಘರ್ಷಣೆಯೇ ಏರ್ಪಟ್ಟಿದೆ. ದಕ್ಷಿಣ ಏಷ್ಯಾ ದೆಹಲಿ ( SAU) ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ದಿನ ದೊಡ್ಡ ಹೈಡ್ರಾಮಾವೇ ನಡೆದುಹೋಗಿದೆ.

ಏನಿದು ಘಟನೆ..?

ಮಹಾಶಿವರಾತ್ರಿ ದಿನ ಮಧ್ಯಾಹ್ನ ವಿವಿ ಹಾಸ್ಟೆಲ್ ನ ಮೆಸ್ ನಲ್ಲಿ ಮಾಂಸಾಹಾರ ಊಟ ನಡೆಸಲಾಗ್ತಿತ್ತು.. ಆದ್ರೆ ಏಕಾಏಕಿ ಹಾಸ್ಟೆಲ್ ಮೆಸ್ ಗೆ ನುಗ್ಗಿದ್ದ ABVP ಸದಸ್ಯರು ಒಂದಷ್ಟು ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ SFI ಮತ್ತು ABVP ನಡುವೆ ದೊಡ್ಡ ಘರ್ಷಣೆಯೇ ಏರ್ಪಟ್ಟಿದೆ. ಜಗಳ , ವಾಗ್ವಾದ ಮಾರಾಮಾರಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದ್ದು , ಪರ ವಿರೋಧ ಚರ್ಚೆಗಳಿಗೆ ವೇದಿಕೆಯಾಗಿದೆ. ಘರ್ಷಣೆಯಲ್ಲಿ ಮಹಿಳಾ ವಿದ್ಯಾರ್ಥಿಗಳನ್ನೂ ಕೂಡ ಥಳಿಸಲಾಗಿದೆ ಎನ್ನಲಾಗ್ತಿದೆ. ಅಲ್ಲದೇ ಯುವತಿಯೊಬ್ಬಳ ಕೂದಲು ಹಿಡಿದು ಎಳೆದಾಡುತ್ತಿರುವ ವಿಡಿಯೋವೊಂದು ನೆಟ್ಟಿಗರ ಕಣ್ ಕೆಂಪಾಗಿಸಿದೆ.

ಅಷ್ಟಕ್ಕೂ ABVP ನಡೆಗೆ ಕಾರಣವೇನು..?

ಶಿವರಾತ್ರಿ ಹಬ್ಬದ ಹಿನ್ನಲೆ 2 ದಿನಗಳ ಮುಂಚೆಯೇ ವಿವಿಯ 110 ವಿದ್ಯಾರ್ಥಿಗಳ ಬಣದಿಂದ ಯೂನಿವರ್ಸಿಟಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಧಾರ್ಮಿಕ ನಂಬಿಕೆ ಹಿನ್ನಲೆ ಶಿವರಾತ್ರಿ ದಿನ ಕೇವಲ ಸಾತ್ವಿಕ ಆಹಾರವನ್ನ ಮಾತ್ರ ಮಾಡಿಸಿ ಎಂದು ಬೇಡಿಕೆ ಇಟ್ಟಿದ್ದರು. ಇವರ ಬೇಡಿಕೆಯನ್ನ ಆಡಳಿತ ಮಂಡಳಿ ಪುರಸ್ಕರಿಸಿ , ಪ್ರತ್ಯೇಕವಾಗಿ ಸಾತ್ವಿಕ ಆಹಾರದ ವ್ಯವಸ್ಥೆಯನ್ನ ಮಾಡಲಾಗಿತ್ತು. ಆದ್ರೆ ಅದೆಲ್ಲಿಂದಲೂ ABVP ಗೆ ಇಲ್ಲಿ ನಾನ್ ವೆಜ್ ಸರ್ವ್ ಮಾಡ್ತಿರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಏಕಾಏಕಿ ಮಧ್ಯಾಹ್ನ ಹಾಸ್ಟೆಲ್ ನ ಮೆಸ್ ಗೆ ನುಗ್ಗಿದವರು ದೊಂಬಿಯನ್ನೇ ಎಬ್ಬಿಸಿಬಿಟ್ಟಿದ್ದರು. ಮೆಸ್ ಕಮಿಟಿಯ ವಿದ್ಯಾರ್ಥಿಗಳನ್ನ ಥಳಿಸಿದ್ದರು. ಇದೇ ಸಂದರ್ಭದಲ್ಲೇ ಮೆಸ್ ಕಮಿಟಿಯ ವಿದ್ಯಾರ್ಥಿನಿಯ ಕೂದಲು ಎಳೆದಾಡಿ ತಳ್ಳಾಡಿ ಹಲ್ಲೆ ಮಾಡಲಾಗಿದೆ. ಇದೇ ಸಂಬಂಧ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

ಇತ್ತ ABVP ಎಂಟ್ರಿ ಕೊಡ್ತಿದ್ದಂತೆ ಅವರೊಂದಿಗೆ SFI ( ಸ್ಟೂಡೆಂಟ್ ಫೆಡರೇಷನ್ ಇಂಡಿಯಾ) ಸದಸ್ಯರೂ ಕೂಡ ಘರ್ಷಣೆಗೆ ಇಳಿದಿದ್ದು , ಉದ್ವಿಗ್ನತೆ ಹೆಚ್ಚಾಗ್ತಿದ್ದಂತೆ , ಹಲ್ಲೆಗೊಳಗಾಗಿದ್ದ ಸಂತ್ರಸ್ತ ಯುವತಿ ಮೈದಾನಗರಿ ಪೊಲೀಸರಿಗೆ ಪಿಸಿಆರ್ ಕಾಲ್ ಮಾಡಿ ಮಾಹಿತಿ ಮುಟ್ಟಿದ್ದಾರೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾಗಲೂ ಕೂಡ ಕಾದಾಟ ತಣ್ಣಗಾಗಿರಲಿಲ್ಲ.. ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡರು.

SFI ಆರೋಪವೇನು..?

ಇನ್ನೂ SFI ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ( ABVP) ವಿರುದ್ಧ ಆರೋಪಗಳ ಸುರಿಮಳೆಗೈದಿದೆ.. ಏಕಾಎಕಿ ಮೆಸ್ ಗೆ ನುಗ್ಗಿದ ABVP ಸದಸ್ಯರು ದಾಂಧಲೆ ನಡೆಸಿದ್ದಾರೆ. ಮಹಿಳೆ ಅಂತಲೂ ನೋಡ್ದೇ ಆಕೆಯನ್ನ ಥಳಿಸಿ ಅವಮಾನಿಸಿದ್ದಾರೆ. ಎಲ್ಲರಿಗೂ ಅವರಿಗಿಷ್ಟವಾದ ಆಹಾರ ಪದ್ದತಿ ಪಾಲಿಸುವ ಹಕ್ಕಿದೆ.. ಆದ್ರೆ ಇವರು ಗೂಂಡಾಗಿರಿತನ ಪ್ರದರ್ಶಿಸುತ್ತಿದ್ದಾರೆ ಅನ್ನೋ ಆರೋಪ ಮಾಡಿದ್ದಾರೆ..

ABVP ಪ್ರತ್ಯಾರೋಪವೇನು..?

ABVP ಅವರು SFI ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.. ಮೊದಲೇ ನಾವು ಕೇಳಿದ್ದಂತೆಯೇ ಕೇವಲ ಸಾತ್ವಿಕ ಆಹಾರವನ್ನ ಆಡಳಿತ ಮಂಡಳಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ SFI ನ ಸದಸ್ಯರು ಬೇಕಂತ್ಲೇ ಪ್ರತ್ಯೇಕ ಕೋಣೆಗೆ ನುಗ್ಗಿ ಸಸ್ಯಾಹಾರಿಗಳು , ಉಪವಾಸದಲ್ಲಿದ್ದವರಿಗೆ ಬಲವಂತವಾಗಿ ಮಾಂಸಾಹಾರ ಬಡಿಸಲು , ಅವರಿಗೆ ತಿನ್ನುವಂತೆ ಫೋರ್ಸ್ ಮಾಡ್ತಿದ್ದರು ಎಂದು ಆರೋಪಿಸಿದ್ದಾರೆ.. ಅಲ್ಲದೇ ABVP ಪ್ರಧಾನ ಕಾರ್ಯದರ್ಶಿ ಸಾರ್ಥಕ್ ಶರ್ಮಾ ಈ ಬಗ್ಗೆ ಮಾತನಾಡಿದ್ದು, ಎಲ್ಲರಿಗೂ ಅವರವರ ಧಾರ್ಮಿಕ ಆಚಾರ ವಿಚಾರ ಪಾಲಿಸುವ ಹಕ್ಕಿದೆ. ಅಂತೆಯೇ ಧಾರ್ಮಿಕ ನಂಬಿಕೆಯೊಂದಿಗೆ ಸಾತ್ವಿಕ ಆಹಾರಕ್ಕೆ ಅನುವು ಮಾಡಿಕೊಡಲಾಗಿತ್ತು ಸಹ. ಆದ್ರೆ ಈ ರೀತಿ ಕೆಲ ದುರುಳರು ಬಲವಂತವಾಗಿ ಮಾಂಸಾಹಾರ ಬಡಿಸಿ ವ್ರತ ಭಂಗ ಮಾಡಲು ಪ್ರಯತ್ನಿಸಿದ್ದು ಸರಿ ಅಲ್ಲ ಎಂದು ಕಿಡಿಕಾರಿದ್ದಾರೆ.

ಮುಂದೇನು..?

ಮೂಲಗಳ ಪ್ರಕಾರ ಸದ್ಯಕ್ಕೆ ಈ ಬಗ್ಗೆ ಅಧಿಕೃತವಾಗಿ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರುಗಳೂ ಕೂಡ ದಾಖಲಾಗಿಲ್ಲ.. ಇನ್ನೂ ವಿವಿ ಮಟ್ಟದಲ್ಲಿ ಈ ಬಗ್ಗೆ ಆಂತರಿಕ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ABVP vs SFI

ABVP ಮತ್ತು SFI ವಿರುದ್ಧ ಘರ್ಷಣೆ ಇದೇನು ಮೊದಲೇನಲ್ಲ , ಇದಕ್ಕಿಂತಲೂ ಮಿತಿ ಮೀರಿದ ಗಲಭೆಗಳಿಗೂ ದೇಶ, ಇಡೀ ವಿಶ್ವ ಸಾಕ್ಷಿಯಾಗಿದೆ.. ಇದೆರೆಡೂ ಸಂಘಟನೆಗಳೂ ಕೂಡ ಭಾರತದ ಅತ್ಯಂತ ಪ್ರತಿಷ್ಠಿತ ವಿದ್ಯಾರ್ಥಿ ಸಂಘಟನೆಗಳು. ಎರೆಡೂ ಸಂಘಟನೆಗಳ ಸಿದ್ಧಾಂತಗಳು ತದ್ವಿರುದ್ಧವಾಗಿದ್ದು ಮೊದಲಿಂದಲೂ ಸಹ ಎಣ್ಣೆ ಸೀಗೆಕಾಯಿಯಂತೆ ಪರಸ್ಪರ ಮುಗಿಬೀಳುತ್ತಲಿರುತ್ತವೆ.

ನಮ್ರತಾ ರಾವ್, ಕಾಪಿ ಎಡಿಟರ್‌, ಗ್ಯಾರಂಟಿ ನ್ಯೂಸ್
Exit mobile version