ಕಂಪ್ಲೆಂಟ್ ಕೊಡೋಕೆ ಹೋಗಿ ಖಾಕಿ ಪ್ರೀತಿಯಲ್ಲಿ ಬಿದ್ದ ಲೇಡಿ..!

Untitled design 2025 12 28T124834.078

ವಿಜಯಪುರ : ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತರುವಂತಹ ಗಂಭೀರ ಆರೋಪ ವಿಜಯಪುರದಲ್ಲಿ ಕೇಳಿಬಂದಿವೆ. ದೂರು ನೀಡಲು ಪೊಲೀಸ್ ಠಾಣೆಗೆ ಹೋದ ಗೃಹಿಣಿಯನ್ನೇ ಪಿಎಸ್ಐ ಒಬ್ಬರು ಬಲೆಗೆ ಬೀಳಿಸಿಕೊಂಡು, ಆಕೆಯ ಸಂಸಾರ ಹಾಳು ಮಾಡಿರುವ ಆರೋಪ ಕೇಳಿ ಬಂದಿದೆ.

ಆಲಮೇಲ ಪಟ್ಟಣದ ನಿವಾಸಿ ಭೀಮಾಶಂಕರ ಹೋಳ್ಕರ್ ಎಂಬುವರು, ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಪಿಎಸ್ಐ ಮನೋಹರ್ ಕಂಚಗಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಪತ್ನಿ ಅನುರಾಧ ಅವರೊಂದಿಗೆ ಪಿಎಸ್ಐ ಮನೋಹರ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಭೀಮಾಶಂಕರ ಆರೋಪಿಸಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಮನೋಹರ್ ಕಂಚಗಾರ್ ಅವರು ಆಲಮೇಲ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಕುಟುಂಬ ಕಲಹದ ಹಿನ್ನೆಲೆ ಅನುರಾಧ ಅವರು ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ದೂರು ವಿಚಾರಣೆ ನೆಪದಲ್ಲಿ ಮನೋಹರ್ ಮತ್ತು ಅನುರಾಧ ನಡುವೆ ಪ್ರೀತಿ ಬೆಳೆದಿತ್ತು ಎಂಬ ಆರೋಪವನ್ನು ಪತಿ ಮಾಡಿದ್ದಾರೆ.

ಭೀಮಾಶಂಕರ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಅಕ್ರಮ ಸಂಬಂಧದ ವಿಚಾರ ಕುಟುಂಬದವರಿಗೆ ತಿಳಿದ ಬಳಿಕ, ಭೀಮಾಶಂಕರ ಅವರು ತಮ್ಮ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ವಾಪಸ್ ಆಲಮೇಲಕ್ಕೆ ಬರುವಂತಾಯಿತು ಎಂದು ತಿಳಿಸಿದ್ದಾರೆ. ಬಳಿಕ ಮಗನಿಂದ ಭೀಮಾಶಂಕರ ಅವರಿಗೆ ಕರೆ ಬಂದಿದ್ದು, “ಮನೋಹರ್ ಹಾಗೂ ಅನುರಾಧ ಇಬ್ಬರೂ ನನಗೆ ಕಿರುಕುಳ ನೀಡುತ್ತಿದ್ದಾರೆ. ಕರೆದುಕೊಂಡು ಹೋಗಿ” ಎಂದು ಮಗ ಮನವಿ ಮಾಡಿದ್ದಾನೆ ಎನ್ನಲಾಗಿದೆ.

ಇನ್ನೂ ಗಂಭೀರ ಆರೋಪ ಮಾಡಿರುವ ಭೀಮಾಶಂಕರ, “ನನ್ನ ಮಗನಿಗೆ ‘ಅಪ್ಪಾ’ ಎಂದು ಮನೋಹರ್ ಹೇಳಿಸಿಕೊಂಡಿದ್ದಾರೆ. ಇದನ್ನು ವಿರೋಧಿಸಿದಾಗ ನನ್ನ ಮಗ ಹಾಗೂ ನನಗೆ, ಅನುರಾಧ ಮತ್ತು ಮನೋಹರ್ ಹಲ್ಲೆ ಮಾಡಿದ್ದಾರೆ” ಎಂದು ದೂರಿದ್ದಾರೆ. ಪಿಎಸ್ಐ ಮನೋಹರ್ ಅವರು ತಮ್ಮ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ನನಗೆ ನ್ಯಾಯ ಬೇಕು. ನನ್ನ ಹೆಂಡ್ತಿ ಮತ್ತು ಮಕ್ಕಳನ್ನು ವಾಪಸ್ ಕೊಡಬೇಕು” ಎಂದು ಭೀಮಾಶಂಕರ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Exit mobile version