“ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ”: ಬೆಂಕಿ ಭವಿಷ್ಯ ನುಡಿದ ಬಬಲಾದಿ ಮುತ್ಯಾ

Untitled design 2026 02 19T212927.341

ವಿಜಯಪುರ: ಮಹಾಶಿವರಾತ್ರಿ ಅಂಗವಾಗಿ ಪ್ರತಿವರ್ಷ ನುಡಿಯಲಾಗುವ ಬೆಂಕಿ ಭವಿಷ್ಯ ಈ ಬಾರಿ ಭಕ್ತರಲ್ಲಿ ಕುತೂಹಲ ಹಾಗೂ ಆತಂಕ ಮೂಡಿಸಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿಯಲ್ಲಿರುವ ಬಬಲಾದಿ ಗ್ರಾಮದ ಸದಾಶಿವ ಮುತ್ಯಾರ ಮಠದಲ್ಲಿ ಈ ವರ್ಷದ ಕಾಲಜ್ಞಾನ ಪ್ರಕಟಿಸಲಾಗಿದೆ.

ಬೆಂಕಿ ಭವಿಷ್ಯ ಮತ್ತು ಕಾಲಜ್ಞಾನಕ್ಕೆ ಪ್ರಸಿದ್ಧವಾದ ಈ ಮಠದಲ್ಲಿ ಮಠದ ಪರಂಪರೆಯಂತೆ ಮಹಾಶಿವರಾತ್ರಿಯ ಮೂರನೇ ದಿನ ಭವಿಷ್ಯ ನುಡಿಯುವುದು ಅನಾದಿಕಾಲದಿಂದ ನಡೆದುಕೊಂಡು ಬರುತ್ತಿದೆ. ಈ ಬಾರಿ “ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ” ಎಂಬ ಎಚ್ಚರಿಕೆಯಿಂದಲೇ ಭವಿಷ್ಯ ಆರಂಭವಾಗಿದೆ.

ಯಾರು ನುಡಿದರು ಭವಿಷ್ಯ?

ಮಠದ ಪರಂಪರೆಯಂತೆ ಶ್ರೀಶಕೆ 1948, ಪರಾಭವನಾಮ ಸಂವತ್ಸರದ ಭವಿಷ್ಯವನ್ನು ಸಿದ್ದು ಮುತ್ಯಾ ಎಂದೇ ಖ್ಯಾತರಾಗಿರುವ ಶ್ರೀ ಸಿದ್ರಾಮಪ್ಪ ಹೋಳಿಮಠ ಅವರು ಪ್ರಕಟಿಸಿದರು. 2026ನೇ ಸಾಲಿನ ಈ ಭವಿಷ್ಯದಲ್ಲಿ ದೇಶ-ವಿದೇಶದ ಪರಿಸ್ಥಿತಿಗಳ ಬಗ್ಗೆ ಹಲವಾರು ಸ್ಪೋಟಕ ಸೂಚನೆಗಳನ್ನು ನೀಡಲಾಗಿದೆ.

ಪ್ರಕೃತಿ ವಿಕೋಪಗಳ ಎಚ್ಚರಿಕೆ

ಕಾಲಜ್ಞಾನ ಪ್ರಕಾರ, ವಿಶ್ವದ ಕೆಲವು ಭಾಗಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಅತಿವೃಷ್ಟಿ ಉಂಟಾಗಿ ಪ್ರವಾಹ ಭೀತಿ ಎದುರಾಗಬಹುದು ಎಂದು ಎಚ್ಚರಿಸಲಾಗಿದೆ. ಈ ವರ್ಷ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವೆಡೆ ಪ್ರಕೃತಿ ಕೋಪ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.

ಅಗ್ನಿ ಅನಾಹುತಗಳು ಸಂಭವಿಸುವ ಸೂಚನೆಯೂ ನೀಡಲಾಗಿದೆ. ಕಾಡುಪ್ರಾಣಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳು ಕಂಡುಬರುವ ಸಾಧ್ಯತೆ ಇದೆ ಎಂದು ಭವಿಷ್ಯ ಹೇಳುತ್ತದೆ. ಗಡಿ ಭಾಗದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಸೂಚನೆ ನೀಡಲಾಗಿದೆ.

ಆದರೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ ಎಂಬ ಆಶಾವಾದದ ಮಾತನ್ನೂ ಕಾಲಜ್ಞಾನ ಹೇಳಿದೆ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಆರ್ಥಿಕ ಕ್ರಾಂತಿ ಸಂಭವಿಸಬಹುದು ಎಂದು ಸೂಚಿಸಲಾಗಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗುವ ಸಾಧ್ಯತೆ ಇದೆ.

ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ

ಈ ವರ್ಷ ಚಿಕ್ಕ ಮಕ್ಕಳಿಗೆ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಜನರ ನಡುವೆ ಕಲಹ ಹೆಚ್ಚಾಗಬಹುದು ಎಂಬುದೂ ಉಲ್ಲೇಖಿಸಲಾಗಿದೆ. ಆದರೂ ಒಟ್ಟಾರೆ ಜನರ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ರೈತರಿಗೆ ಶುಭ ಸೂಚನೆ

ರೈತರಿಗೆ ಈ ವರ್ಷ ಒಳ್ಳೆಯದಾಗಲಿದೆ ಎಂದು ಕಾಲಜ್ಞಾನ ಹೇಳುತ್ತದೆ. ಹೆಚ್ಚಿನ ಮಳೆಯ ಪರಿಣಾಮವಾಗಿ ಕೃಷಿ ಉತ್ಪಾದನೆ ಉತ್ತಮವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಶುಭ-ಅಶುಭ ಫಲಗಳು ಸಮ

ಒಟ್ಟಾರೆ 1948 ಪರಾಭವ ನಾಮ ಸಂವತ್ಸರದಲ್ಲಿ ಶುಭ ಮತ್ತು ಅಶುಭ ಫಲಗಳು ಸಮವಾಗಿರುತ್ತವೆ ಎಂದು ಭವಿಷ್ಯ ನುಡಿಸಲಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡುಬಂದರೂ, ಇನ್ನೂ ಕೆಲವೆಡೆ ಸವಾಲುಗಳು ಎದುರಾಗಬಹುದು.

“ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ, ಪಾಪದ ಕೆಲಸ ಹೆಚ್ಚಾದಿತು” ಎಂಬ ಮಾತು ಭಕ್ತರಲ್ಲಿ ಚಿಂತನೆ ಮೂಡಿಸಿದೆ. ಆದರೆ ಭವಿಷ್ಯವು ಕೇವಲ ಎಚ್ಚರಿಕೆಯ ಸೂಚನೆ ಎಂದು ಮಠದ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version