ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮತ್ತೊಂದು ಮದ್ವೆಯಾದ ಪತ್ನಿ: ಮೃತನ ಸಹೋದರಿಯಿಂದ ದೂರು

ದೆಹಲಿ ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ , ಮನೀಶ್ ಸಿಸೋಡಿಯಾ ಖುಲಾಸೆ (2)

ತುಮಕೂರು, ಫೆಬ್ರವರಿ 27: ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ದಾಸರಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಅನುಮಾನಾಸ್ಪದ ಸಾವು ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿರುವ ಹಿನ್ನೆಲೆ ಸಾವಿನ ಕುರಿತು ಕುಟುಂಬಸ್ಥರಲ್ಲಿ ಗಂಭೀರ ಅನುಮಾನಗಳು ಮೂಡಿದೆ. 23 ದಿನಗಳ ಬಳಿಕ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮೃತ ವ್ಯಕ್ತಿಯನ್ನು ಪರಮೇಶ್ (50) ಎಂದು ಗುರುತಿಸಲಾಗಿದೆ. ಜನವರಿ 31ರಂದು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಅದೇ ದಿನ ಅಂತ್ಯಕ್ರಿಯೆ ನೆರವೇರಿಸಿ, ಗ್ರಾಮದಲ್ಲೇ ಸಮಾಧಿ ಮಾಡಲಾಗಿತ್ತು. ಆರಂಭದಲ್ಲಿ ಇದು ಸಹಜ ಸಾವು ಎಂದು ಪರಿಗಣಿಸಲಾಗಿತ್ತು. ಆದರೆ ಫೆಬ್ರವರಿ 19ರಂದು ಈ ಘಟನೆಗೆ ತಿರುವು ಸಿಕ್ಕಿದೆ.

ಪರಮೇಶ್ ಅವರ ಪತ್ನಿ, ಪತಿಯ ಸಾವು ಸಂಭವಿಸಿದ ಕೆಲವೇ ದಿನಗಳಲ್ಲಿ ಮತ್ತೊಂದು ಮದುವೆಯಾಗಿರುವುದು ಸಂಬಂಧಿಕರಲ್ಲಿ ಅನುಮಾನ ಹುಟ್ಟಿಸಿದೆ. ವಿಶೇಷವಾಗಿ ಮೃತನ ಸಹೋದರಿ ಈ ಬೆಳವಣಿಗೆಯನ್ನು ಪ್ರಶ್ನಿಸಿ, ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಅಣ್ಣನ ಸಾವು ಸಹಜವಾಗಿರಲಿಲ್ಲ ಎಂಬ ಅನುಮಾನವನ್ನು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಹೋದರಿಯ ಹೇಳಿಕೆಯ ಪ್ರಕಾರ, ಪರಮೇಶ್ ಮೃತಪಟ್ಟ ಸಂದರ್ಭದಲ್ಲಿ ಅವರ ಮೂಗಿನ ಪಕ್ಕದಲ್ಲಿ ಗಾಯದ ಗುರುತು ಕಂಡುಬಂದಿತ್ತು. ಜೊತೆಗೆ ಗುಪ್ತಾಂಗ ಭಾಗದಲ್ಲಿ ಊತವೂ ಕಂಡುಬಂದಿದ್ದು, ಇದು ಸಹಜ ಹೃದಯಾಘಾತದಿಂದ ಸಂಭವಿಸುವ ಲಕ್ಷಣಗಳಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಾನೂನು ಪ್ರಕ್ರಿಯೆ ಅನುಸರಿಸಿ ತಹಸೀಲ್ದಾರ್ ರಾಜೇಶ್ವರಿ ಅವರ ಸಮ್ಮುಖದಲ್ಲಿ ಸಮಾಧಿಯಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಪರೀಕ್ಷೆಯ ಮೂಲಕ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲಾಗುತ್ತದೆ.

ಪೊಲೀಸರ ಪ್ರಕಾರ, ಇದು ಅನುಮಾನಾಸ್ಪದ ಸಾವು ಪ್ರಕರಣವಾಗಿರುವುದರಿಂದ ವೈದ್ಯರು ಸಂಪೂರ್ಣವಾಗಿ ದೇಹದ ಎಲ್ಲಾ ಭಾಗಗಳನ್ನು ಪರಿಶೀಲಿಸಲಿದ್ದಾರೆ. ವಿಶೇಷವಾಗಿ ಗಾಯದ ಗುರುತುಗಳು, ಅವು ಸಾವಿಗೆ ಮುಂಚೆ ಉಂಟಾಗಿದವೆಯೇ ಅಥವಾ ನಂತರದವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.

ಪ್ರಕರಣ ಇದೀಗ ಮರಣೋತ್ತರ ಪರೀಕ್ಷಾ ವರದಿಯ ಮೇಲೆ ಅವಲಂಬಿತವಾಗಿದೆ. ವರದಿ ಒಂದು ವಾರದೊಳಗೆ ಲಭ್ಯವಾಗುವ ನಿರೀಕ್ಷೆಯಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಕಾರಣ ಹೃದಯಾಘಾತವೇ ಅಥವಾ ಬೇರೆ ಕಾರಣವೇ ಎಂಬುದು ವರದಿ ಬಳಿಕವೇ ಸ್ಪಷ್ಟವಾಗಲಿದೆ.

ಸದ್ಯ ಹೆಬ್ಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಹೊರಬಂದ ನಂತರವೇ ಪರಮೇಶ್ ಅವರ ಸಾವಿನ ನಿಜಸ್ವರೂಪ ಬಹಿರಂಗವಾಗಲಿದೆ. ವರದಿ ಆಧಾರವಾಗಿ ಅಗತ್ಯವಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

Exit mobile version