ಪ್ರೀತಿ ನಿರಾಕರಿಸಿದ ಯುವತಿಗೆ ಬಿಯರ್ ಬಾಟಲ್‌ನಿಂದ ಇರಿದ ಪಾಗಲ್‌ ಪ್ರೇಮಿ

Untitled design 2026 02 16T212735.245

ಶಿವಮೊಗ್ಗ: ಪಾಗಲ್ ಪ್ರೇಮಿಯೊಬ್ಬ, ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯ ಮೇಲೆ ಬಿಯರ್ ಬಾಟಲಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ

ಹಲ್ಲೆಗೊಳಗಾದ ಯುವತಿಯನ್ನು ಅಪೂರ್ವ ಎಂದು ಗುರುತಿಸಲಾಗಿದೆ. ಆರೋಪಿ ಸ್ವರೂಪ್ ಎಂಬಾತ ಕಳೆದ ಕೆಲವು ದಿನಗಳಿಂದ ಅಪೂರ್ವ ಬೆನ್ನು ಬಿದ್ದಿದ್ದ ಎನ್ನಲಾಗಿದೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸ್ವರೂಪ್ ತನ್ನ ಪ್ರೀತಿಯನ್ನು ಅಪೂರ್ವ ಮುಂದೆ ಹೇಳಿದ್ದನು. ಆದರೆ, ಆತನ ನಡವಳಿಕೆಯನ್ನು ಮೆಚ್ಚದ ಅಪೂರ್ವ, ನೇರವಾಗಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೆರಳಿದ ಸ್ವರೂಪ್, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ.

ಮನಬಂದಂತೆ ಇರಿದ ಪಾಪಿ:

ಇಂದು ಯುವತಿ ಅಪೂರ್ವ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಸ್ವರೂಪ್, ಮತ್ತೆ ಜಗಳ ತೆಗೆದಿದ್ದಾನೆ. ತಾನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಯುವತಿ ಮತ್ತೆ ನಿರಾಕರಿಸಿದಾಗ ಆತ ತನ್ನ ಬಳಿ ಇದ್ದ ಬಿಯರ್ ಬಾಟಲಿಯನ್ನು ಒಡೆದು, ಅದರ ಹರಿತವಾದ ಗಾಜಿನಿಂದ ಅಪೂರ್ವಳ ಕುತ್ತಿಗೆ ಮತ್ತು ಕೈ ಭಾಗಕ್ಕೆ ಮನಬಂದಂತೆ ಇರಿದು ಹಲ್ಲೆ ಮಾಡಿದ್ದಾನೆ.

ಸ್ಥಳೀಯರು ತಕ್ಷಣವೇ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅಪೂರ್ವಳ ಸ್ಥಿತಿ ಗಂಭೀರವಾಗಿದ್ದರಿಂದ, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರು ಆಕೆಗೆ ಚಿಕಿತ್ಸೆ ನೀಡುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಲಿ ಎಂದು ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ.

ಆರೋಪಿ ಪೊಲೀಸ್ ವಶಕ್ಕೆ:

ಘಟನೆ ನಡೆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ತೀರ್ಥಹಳ್ಳಿ ಪೊಲೀಸರು, ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಸ್ವರೂಪ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

ಶಿವಮೊಗ್ಗದಲ್ಲಿ ಭೀಕರ ಅಪಘಾತ: ಹಂಪ್ ಕಾಣದೇ ಬೈಕ್‌ನಲ್ಲಿ ಬಿದ್ದ ಯುವಕ ಸಾವು

ಶಿವಮೊಗ್ಗ ನಗರದ ಎಲ್‌ಬಿಎಸ್ ನಗರದ ಫ್ಲೈ ಓವರ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ 35 ವರ್ಷದ ಯುವಕ ಉಲ್ಲಾ ಮೃತಪಟ್ಟಿದ್ದಾರೆ. ವಾದಿ-ಎ-ಹುದಾ ನಿವಾಸಿ ಉಲ್ಲಾ (35) ಅವರು 2 ದಿನಗಳ ಹಿಂದೆ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಘಟನೆಯ ವಿವರ :

ಮಹಾನಗರ ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕವಾಗಿ ಹಾಕಲಾದ ಸ್ಪೀಡ್ ಹಂಪ್‌ಗೆ  ಗುರುತಿಸದೇ ಬೈಕ್ ಚಲಾಯಿಸುತ್ತಿದ್ದ ಉಲ್ಲಾ ಅವರು ಹಠಾತ್ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದರು. ಈ ಭಯಾನಕ ದೃಶ್ಯವನ್ನು ಸ್ಥಳದ ಸಿಸಿ ಕ್ಯಾಮರಾ ಸೆರೆಹಿಡಿದಿದ್ದು, ವೀಡಿಯೊ ವೈರಲ್ ಆಗುತ್ತಿದೆ. ಹಂಪ್‌ನ ರಚನೆಯಲ್ಲಿ ಯಾವುದೇ ಸೂಚನಾ ಫಲಕಗಳು ಅಥವಾ ಸರಿಯಾದ ಗುರುತುಗಳಿಲ್ಲದ ಕಾರಣ ರಾತ್ರಿ ಸಮಯದಲ್ಲಿ ಅಥವಾ ಕಡಿಮೆ ಬೆಳಕಿನಲ್ಲಿ ಇದು ಮಾರಕವಾಗುತ್ತಿದೆ ಎಂಬ ಆರೋಪಗಳು ಎದ್ದಿವೆ.

ಉಲ್ಲಾ ಅವರು ಶಿವಮೊಗ್ಗದ ಸಂಗೀತಾ ಮೊಬೈಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಪಘಾತದ ನಂತರ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಗಾಯಗಳು ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಿಸಲಿಲ್ಲ. ಈ ಘಟನೆಯಿಂದ ಸ್ಥಳೀಯರು ಮತ್ತು ವಾಹನ ಸವಾರರಲ್ಲಿ ತೀವ್ರ ಆಕ್ರೋಶ ಮೂಡಿದ್ದು, ನಗರದಲ್ಲಿ ಹಲವು ಹಂಪ್‌ಗಳು ಅಪಘಾತಕ್ಕೆ ಕಾರಣವಾಗುತ್ತಿವೆ ಎಂಬ ಆರೋಪಗಳು ಹೆಚ್ಚಾಗಿವೆ. ಮಹಾನಗರ ಪಾಲಿಕೆಯಿಂದ ಇಂತಹ ಹಂಪ್‌ಗಳನ್ನು ಸರಿಯಾಗಿ ಗುರುತಿಸಿ, ಸೂಚನಾ ಫಲಕಗಳು ಮತ್ತು ಬೆಳಕುಗಳನ್ನು ಜೋಡಿಸಬೇಕು ಎಂಬ ಒತ್ತಡ ಹೆಚ್ಚಾಗಿದೆ.

ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದು, ಹಂಪ್‌ನ ರಚನೆಯ ಬಗ್ಗೆ ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಈ ದುರಂತವು ಶಿವಮೊಗ್ಗದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

Exit mobile version