ಬೈಕ್ ಅಪಘಾತದಲ್ಲಿ ಶಾಲಾ ಶಿಕ್ಷಕ ಸಾವು: ಕಣ್ಣೀರು ಹಾಕಿದ ಮಕ್ಕಳು

Untitled design 2025 06 19t171937.787

ವಿಜಯಪುರ: ಶಾಲೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಅಡ್ಡಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದ ಶಿಕ್ಷಕರೊಬ್ಬರು ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟ ದುರಂತ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅಂಬಳನೂರ ಕ್ರಾಸ್ ಬಳಿ ನಡೆದಿದೆ. 46 ವರ್ಷದ ವಾಸುದೇವ ಹಂಚಾಟೆ ಎಂಬ ಶಿಕ್ಷಕರು ಈ ದುರ್ಘಟನೆಯಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಯ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕನನ್ನು ಕಳೆದುಕೊಂಡ ದುಃಖದಲ್ಲಿ ಮಕ್ಕಳು ಗೋಳಾಡಿದ್ದಾರೆ.

ವಾಸುದೇವ ಹಂಚಾಟೆ ಅವರು ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಕೇವಲ ಶೈಕ್ಷಣಿಕ ಪಾಠಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಜ್ಞಾನವನ್ನು ರೋಚಕವಾಗಿ ತಿಳಿಸುವ ಅವರ ವಿಶಿಷ್ಟ ಶೈಲಿಯಿಂದಾಗಿ ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದರು.

ADVERTISEMENT
ADVERTISEMENT

ವಾಸುದೇವ ಅವರು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರು. ದ್ವಿಚಕ್ರ ವಾಹನ ಚಾಲನೆಯ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುವ ಮಹತ್ವವನ್ನು ಪದೇ ಪದೇ ಒತ್ತಿ ಹೇಳುತ್ತಿದ್ದರು. ತಮ್ಮ ಪೋಷಕರಿಗೂ ಈ ಸಂದೇಶವನ್ನು ತಲುಪಿಸುವಂತೆ ಮಕ್ಕಳಿಗೆ ಸಲಹೆ ನೀಡುತ್ತಿದ್ದರು. ತಾವೇ ಸಹ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಅವರು, ಪ್ರತಿದಿನ ಹೆಲ್ಮೆಟ್ ಧರಿಸಿ ಶಾಲೆಗೆ ಬೈಕ್‌ನಲ್ಲಿ ಆಗಮಿಸುತ್ತಿದ್ದರು. ಆದರೆ, ದುರಂತದ ದಿನದಂದು ವಿಳಂಬವಾದ ಕಾರಣಕ್ಕೆ ಹೆಲ್ಮೆಟ್ ಧರಿಸದೆ ಶಾಲೆಗೆ ತೆರಳಿದ್ದರು.

ಘಟನೆಯ ದಿನ, ವಾಸುದೇವ ಹಂಚಾಟೆ ಅವರು ಶಾಲೆಗೆ ತೆರಳುವಾಗ ರಸ್ತೆಯಲ್ಲಿ ಒಡ್ಡಾಡುತ್ತಿದ್ದ ನಾಯಿಯನ್ನು ತಪ್ಪಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ದುರಾದೃಷ್ಟವಶಾತ್, ಆ ದಿನ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಇದರಿಂದಾಗಿ ಬೀಳುವಾಗ ತಲೆಗೆ ಗಂಭೀರವಾದ ಗಾಯವಾಗಿದೆ. ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗದಿದ್ದರೂ, ತಲೆಗಾದ ಗಾಯದ ತೀವ್ರತೆಯಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Exit mobile version