ರಾಜ್ಯಾದ್ಯಂತ ಬಂದ್‌‌ ಯಶಸ್ವಿಯಾಗಿದೆ: ವಾಟಾಳ್ ನಾಗರಾಜ್

11 (50)

ಬೆಂಗಳೂರು: ಇಡೀ ರಾಜ್ಯಾದ್ಯಂತ ನಡೆದ ಕರ್ನಾಟಕ ಬಂದ್ ಯಶಸ್ವಿಯಾಗಿ ನಡೆದಿದೆ ಎಂದು ಕನ್ನಡ ಪರ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ. ಬಂದ್‌ ಗೆ ಹೋರಾಟ ಮಾಡಿದ ಎಲ್ಲಾ ಸಂಘಟನೆಗಳಿಗೆ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕ ಬಂದ್ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, “ನಮ್ಮ ಇಡೀ ರಾಜ್ಯದಲ್ಲಿ ಬಂದ್ ಅಸಾಧಾರಣವಾಗಿ ಯಶಸ್ವಿಯಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಹೋರಾಟದ ಪ್ರತಿಫಲ ಕಾಣಿಸಿಕೊಂಡಿದೆ. ಕೆಲವು ಕಡೆಗಳಲ್ಲಿ ಬಸ್‌ಗಳು ಓಡಾಡಿದರೂ, ಜನರ ಸಂಚಾರ ಬಹಳ ಕಡಿಮೆ. ಬಸ್ ನಿಲ್ದಾಣಗಳು ಬಹುತೇಕ ಖಾಲಿಯಾಗಿದ್ದವು. ಕನ್ನಡಿಗರ ಹಿತಾಸಕ್ತಿಗಾಗಿ ನಡೆದ ಬಂದ್ ಜನರಿಂದ ಸಾಕಷ್ಟು ಬೆಂಬಲವನ್ನು ಪಡೆದಿದೆ. ನಾವು ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುವಲ್ಲಿ ಯಶಸ್ವಿಯಾಗಿದ್ದೇವೆ,” ಎಂದರು.

ADVERTISEMENT
ADVERTISEMENT

ಬಂದ್ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡಿರುವ ಬಗ್ಗೆ ವಾಟಾಲ್‌ ನಾಗರಾಜ್‌ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. “ನಮ್ಮವರನ್ನು ಬಂಧಿಸಲಾಗಿದೆ. ಬೆಂಗಳೂರು ಕಮಿಷನರ್ ಈ ಬಂದ್‌ನ್ನು ವೈಯಕ್ತಿಕವಾಗಿ ತೆಗೆದುಕೊಂಡಂತಿದೆ. ಭಾಸ್ಕರ್ ರಾವ್ ಅವರ ರೀತಿಯಲ್ಲಿ ಇವರು ರಾಜಕೀಯ ಪ್ರವೇಶಿಸಲು ನೋಡುತ್ತಿದ್ದಾರೆ ಎಂಬ ಅನುಮಾನ ಇದೆ. ನನಗೂ ನೋಟಿಸ್ ಕೊಟ್ಟಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಹೋರಾಟ ಮಾಡಲು ಅವಕಾಶ ಇದೆ ಎಂದರು. ಟೌನ್ ಹಾಲ್‌ನಲ್ಲಿ ಪರ್ಮಿಷನ್ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದೆ. ಆದರೆ, ನಮ್ಮ ಹೋರಾಟಕ್ಕೆ ಕನ್ನಡಿಗರ ಆಕ್ರೋಶ ಮತ್ತು ಬೆಂಬಲವಿದೆ. ಇದು ನಾವು ಮಾಡಿದ ಹೋರಾಟಕ್ಕೆ ಸಿಕ್ಕ ಯಶಸ್ಸು,” ಎಂದು ಹೇಳಿದರು.

ಹೋಟೆಲ್‌ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಹೋಟೆಲ್ ಮಾಲೀಕರಿಗೆ ಭಾರಿ ದುರಹಂಕಾರ ಬಂದಿದೆ. ಪೊಲೀಸರ ನೆರವಿನಿಂದ ನಮ್ಮ ಹೋರಾಟವನ್ನು ತಡೆಹಿಡಿಯಲು ಯತ್ನಿಸಿದ್ದಾರೆ. ಹೋರಾಟದ ಹತ್ತಿಕ್ಕುವ ಮಟ್ಟಕ್ಕೆ ಹೋಗಬಾರದಿತ್ತು. ಆದರೂ ಕನ್ನಡಿಗರ ಬಲವಿರುವಾಗ, ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ. ಹೋಟೆಲ್‌ ಮಾಲೀಕರ ಈ ದುರಹಂಕಾರ ನಮ್ಮನ್ನು ಬೆನ್ನಟ್ಟುವುದಿಲ್ಲ,” ಎಂದರು.

ಕನ್ನಡಿಗರ ಹಕ್ಕುಗಳನ್ನು ಕಾಪಾಡುವುದು ನಮ್ಮ ಪ್ರಾಥಮಿಕ ಕರ್ತವ್ಯ. “ಈ ಹೋರಾಟ ಇಲ್ಲಿಯೇ ಮುಕ್ತಾಯವಾಗುವುದಿಲ್ಲ. ಈ ಹೋರಾಟವನ್ನು ನಿರಂತರವಾಗಿ ಮುಂದುವರಿಸುತ್ತೇವೆ. ಅನೇಕರು ನಮ್ಮ ಹೋರಾಟವನ್ನು ನೆಗೆಟಿವ್ ಆಗಿ ನೋಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಮ್ಮ ಹೋರಾಟ ಸತ್ಯ ಮತ್ತು ನ್ಯಾಯಕ್ಕಾಗಿ. ಇದು ಎಲ್ಲರಿಗೂ ಅರ್ಥವಾಗಬೇಕಾದ ಸಂಗತಿ,” ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದರು.

Exit mobile version