ಬದುಕಿನ ಪಯಣ ಮುಗಿಸಿ ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಎಸ್‌.ಎಲ್‌ ಭೈರಪ್ಪ

Untitled design 2025 09 26t125219.816

ಕನ್ನಡ ಸಾಹಿತ್ಯದ ಹಿರಿಯ ಕಾದಂಬರಿಕಾರ, ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ (94) ಅವರು ಸೆಪ್ಟೆಂಬರ್ 24ರಂದು ಬೆಂಗಳೂರಿನಲ್ಲಿ ನಿಧನರಾದರು. ಇಂದು, ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಚಿರಶಾಂತಿಧಾಮದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಸಿಡಿಸಿ ಈ ಮಹಾನ್ ಸಾಹಿತಿಗೆ ಗೌರವ ಸಲ್ಲಿಸಿದರು.

ಗುರುವಾರ, ಭೈರಪ್ಪನವರ ಪಾರ್ಥಿವ ಶರೀರವನ್ನು ಮೈಸೂರಿಗೆ ತರಲಾಯಿತು. ಮೈಸೂರಿನ ಕಲಾಮಂದಿರದ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ, ಜೆಎಸ್‌ಎಸ್ ಆಸ್ಪತ್ರೆಗೆ ಶರೀರವನ್ನು ರವಾನಿಸಲಾಯಿತು. ಅವರ ಮನೆಯಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿ, ಚಾಮುಂಡಿ ಬೆಟ್ಟದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಜೀವನ ಚರಿತ್ರೆ

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ 1934 ರ ಜುಲೈ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜನಿಸಿದರು. ಆದರೆ, ಅವರ ಆತ್ಮಕಥೆ ಭಿತ್ತಿಯಲ್ಲಿ ತಮ್ಮ ಜನ್ಮದಿನವನ್ನು 1931 ರ ಆಗಸ್ಟ್ 20 ಎಂದು ಉಲ್ಲೇಖಿಸಿದ್ದಾರೆ. ಬಡತನ, ಪ್ಲೇಗ್ ಮಾರಿಯಿಂದ ಕುಗ್ಗಿದ ಪರಿಸರದಲ್ಲಿ ಬೆಳೆದ ಭೈರಪ್ಪನವರು, ತಾಯಿಯ ಧೀಮಂತಿಕೆಯಿಂದ ಪ್ರೇರಿತರಾಗಿ ಕಷ್ಟದ ಬದುಕಿನಲ್ಲೂ ಶಿಕ್ಷಣವನ್ನು ಮುಂದುವರಿಸಿದರು.

ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಮುಂದುವರಿಸಿದ ಭೈರಪ್ಪನವರು, ಎಂ.ಎ.ನಲ್ಲಿ ಸುವರ್ಣ ಪದಕ ಗಳಿಸಿದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಸತ್ಯ ಮತ್ತು ಸೌಂದರ್ಯ ಎಂಬ ಇಂಗ್ಲಿಷ್‌ನಲ್ಲಿ ರಚಿತವಾದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು.

ಸ್ಮಾರಕ ಘೋಷಣೆ

ಎಸ್.ಎಲ್. ಭೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಭೈರಪ್ಪನವರು ತಮ್ಮ ಬಹುಪಾಲು ಬದುಕನ್ನು ಮೈಸೂರಿನಲ್ಲಿ ಕಳೆದಿದ್ದರಿಂದ, ಅವರ ಸ್ಮಾರಕಕ್ಕೆ ಮೈಸೂರು ಸೂಕ್ತ ಸ್ಥಳವೆಂದು ಸರ್ಕಾರ ತೀರ್ಮಾನಿಸಿದೆ.

Exit mobile version