ಕಾಗಿನೆಲೆಯ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಲಿಂಗೈಕ್ಯ

Untitled design 2026 01 15T110217.142

ರಾಯಚೂರು: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ಸಮೀಪದ ಕಾಗಿನೆಲೆ ಕನಕಗುರುಪೀಠದ ಪೀಠಾಧ್ಯಕ್ಷರಾದ ಸಿದ್ದರಾಮನಂದ ಸ್ವಾಮೀಜಿ ಅವರು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಇಂದು ಬೆಳಗಿನ ಜಾವ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಜನವರಿ 12, 13 ಮತ್ತು 14ರಂದು ಕಾಗಿನೆಲೆ ಕನಕಗುರುಪೀಠದಲ್ಲಿ ಅತ್ಯಂತ ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಲುಮತ ಸಾಹಿತ್ಯ ಸಮ್ಮೇಳನ, ಪೂಜಾರಿಗಳ ಶಿಬಿರ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿದ್ದು, ಈ ಕಾರ್ಯಕ್ರಮದ ಸಿದ್ಧತೆ ಮತ್ತು ನಿರ್ವಹಣೆಯಲ್ಲಿ ಸ್ವಾಮೀಜಿಗಳು ಸಂಪೂರ್ಣ ತೊಡಗಿಸಿಕೊಂಡಿದ್ದರು.

ನಿರಂತರ ಕಾರ್ಯಕ್ರಮಗಳು, ವಿಶ್ರಾಂತಿ ಕೊರತೆ ಹಾಗೂ ಸರಿಯಾದ ಊಟ-ನಿದ್ದೆಯಿಲ್ಲದೆ ತೀವ್ರ ದಣಿವಿನಿಂದ ಬಳಲುತ್ತಿದ್ದ ಸ್ವಾಮೀಜಿಗಳಿಗೆ ಬುಧವಾರ ರಾತ್ರಿ ಲೋ ಬಿಪಿ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.

ಸಿದ್ದರಾಮನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಗ್ರಾಮದವರು. ಮಹದೇವಯ್ಯ ಹಾಗೂ ಜಯಮ್ಮ ದಂಪತಿಯ ಎರಡನೇ ಪುತ್ರನಾಗಿ ಜನಿಸಿದ್ದ ಇವರ ಜನ್ಮನಾಮ ಮೋಹನ್ ಪ್ರದಾನ. ಬಾಲ್ಯದಿಂದಲೇ ಆತ್ಮೀಯ ಚಿಂತನೆ ಮತ್ತು ಧಾರ್ಮಿಕ ಆಸಕ್ತಿಯುಳ್ಳವರಾಗಿದ್ದ ಅವರು 18ನೇ ವಯಸ್ಸಿನಲ್ಲೇ ಮನೆ ತೊರೆದು ಅಧ್ಯಾತ್ಮ ಮಾರ್ಗವನ್ನು ಆರಿಸಿಕೊಂಡಿದ್ದರು. ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಸೇರಿದಂತೆ ವಿವಿಧ ಧರ್ಮಪಂಥಗಳ ಅಧ್ಯಯನ ನಡೆಸಿ, ಶರಣ ಸಾಹಿತ್ಯ ಹಾಗೂ ಎಲ್ಲಾ ಧರ್ಮಗಳ ತತ್ವಚಿಂತನೆಗೆ ತೊಡಗಿಸಿಕೊಂಡಿದ್ದರು.

ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲಕಾಲ ವಿದ್ಯಾಭ್ಯಾಸ ನಡೆಸಿದ ಬಳಿಕ, ನಾಲ್ಕು ವರ್ಷಗಳ ಕಾಲ ಸಿಂಧನೂರಿನಲ್ಲಿ ಸ್ವಾಮೀಜಿಯಾಗಿ ವಾಸ್ತವ್ಯ ಮಾಡಿದ್ದರು. 2011ರಲ್ಲಿ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ಹತ್ತಿರ ಕನಕಗುರು ಪೀಠಕ್ಕೆ ಆಗಮಿಸಿದ ಅವರು, ನಂತರ ಕಾಗಿನೆಲೆ ಕನಕಗುರುಪೀಠವನ್ನು ಸ್ಥಾಪಿಸಿ ಹಾಲುಮತ ಸಂಸ್ಕೃತಿಗೆ ಹೊಸ ಆಯಾಮ ನೀಡಿದರು.

ಕಲಬುರಗಿ ವಿಭಾಗದಲ್ಲಿ ಕನಕಗುರು ಪೀಠಗಳನ್ನು ಆರಂಭಿಸಿ, ಪ್ರತಿವರ್ಷ ಜನವರಿ 12, 13, 14ರಂದು ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ನಡೆಸುವುದು ಅವರ ಪ್ರಮುಖ ಕನಸಾಗಿತ್ತು. ಸಮಾಜಸೇವೆಯ ಭಾಗವಾಗಿ ಶಾಲಾ ಮಕ್ಕಳಿಗೆ ಉಚಿತ ದಾಸೋಹ, ಸಾಮೂಹಿಕ ವಿವಾಹ, ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದರು. ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ಗಣನೀಯ ಕೊಡುಗೆ ನೀಡಿದ ಗಣ್ಯರಿಗೆ ‘ಭಾಸ್ಕರ’, ‘ಕನಕರತ್ನ’ ಹಾಗೂ ‘ಸಿದ್ಧ ಶ್ರೀ’ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದರು.

ಸ್ವಾಮೀಜಿಗಳ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದು, ಅನೇಕ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಗಣ್ಯರು ಕಂಬನಿ ಮಿಡಿದಿದ್ದಾರೆ.

https://youtu.be/NouFsF3PZ2w?si=KDWCZMx1FsyWmfQN

Exit mobile version