ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಕಿತ್ತಾಟ ಈಗ ಸಂಪೂರ್ಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣ ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ದಿಢೀರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಖರ್ಗೆ ಅವರ ರಾಜಾಜಿನಗರ ನಿವಾಸದಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಈ ಗೌಪ್ಯ ಮಾತುಕತೆಯಲ್ಲಿ ರಾಜ್ಯದ ರಾಜಕೀಯ ಬಿಕ್ಕಟ್ಟು, ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಡಿ.ಕೆ.ಶಿ ಬಣದಿಂದ ಪಕ್ಷಕ್ಕೆ ಆಗುತ್ತಿರುವ ತೀವ್ರ ಹಾನಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಖರ್ಗೆಯವರ ಗಮನಕ್ಕೆ ತಂದಿದ್ದಾರೆ ಎಂಬುದು ಆಂತರಿಕ ಮಾಹಿತಿ. ಇತ್ತೀಚೆಗೆ ಡಿ.ಕೆ.ಶಿ ಬಣದ ಕೆಲವು ಶಾಸಕರು ಮತ್ತು ಸಚಿವರು ಸಾರ್ವಜನಿಕವಾಗಿ ಸಿಎಂ ವಿರುದ್ಧ ಹರಿಹಾಯ್ದಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಎಂಬ ಆರೋಪ ಮಾಡಿದ್ದಾರೆ. ಇದು ಪಕ್ಷದ ಒಗ್ಗಟ್ಟಿಗೆ ಧಕ್ಕೆ ತಂದಿದೆ ಎಂಬುದು ಸಿದ್ದರಾಮಯ್ಯ ಅವರ ವಾದ.
ಹೈಕಮಾಂಡ್ನಿಂದ ಸಂಧಾನ ಸೂತ್ರ
ಸಿಎಂ ಭೇಟಿಗೂ ಮುನ್ನವೇ ಕಾಂಗ್ರೆಸ್ ಹೈಕಮಾಂಡ್ ಸಂಧಾನ ಸೂತ್ರ ರವಾನಿಸಿದೆ. ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರು ಸೇರಿದಂತೆ ದೆಹಲಿಯ ಉನ್ನತ ನಾಯಕರು ಇಬ್ಬರು ಬಣದ ನಾಯಕರನ್ನು ಶಾಂತಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಸರಿಯಿಲ್ಲ. ಆದರೆ ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಗೆಹರಿಸಲಾಗುವುದು. ಅಗತ್ಯ ಬಿದ್ದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಲಾಗುವುದು ಎಂದು ರಾಹುಲ್ ಗಾಂಧಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂಬುದು ಆಪ್ತ ಮೂಲಗಳ ಮಾಹಿತಿ.
ತನ್ವೀರ್ ಸೇಠ್ ವಿಶ್ವಾಸ
ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಒಂದೆರಡು ದಿನಗಳಲ್ಲಿ ಪವರ್ ಶೇರಿಂಗ್ ಗೊಂದಲ ಸಂಪೂರ್ಣ ಬಗೆಹರಿಯುತ್ತದೆ. ಪಕ್ಷ ಒಗ್ಗಟ್ಟಿನಿಂದ ಇದೆ, ಯಾರೂ ದೊಡ್ಡ ತೊಂದರೆ ಪಡುವಂತಿಲ್ಲ. ಹೈಕಮಾಂಡ್ ಎಲ್ಲವನ್ನೂ ನೋಡಿಕೊಳ್ಳುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿ ಬಣದಲ್ಲಿ ಆತ್ವರ
ಇತ್ತ ಡಿ.ಕೆ. ಶಿವಕುಮಾರ್ ಬಣದಲ್ಲಿ ತೀವ್ರ ಅಸಮಾಧಾನ ಮುಂದುವರಿದಿದ್ದು, 2.5 ವರ್ಷ ಪೂರ್ತಿಯಾಗುವ ಮೊದಲೇ ಸಿಎಂ ಬದಲಾವಣೆ ಮಾಡಿ ಎಂಬ ಒತ್ತಡ ಜೋರಾಗಿದೆ. ಇದಕ್ಕೆ ಸಿದ್ದರಾಮಯ್ಯ 5 ವರ್ಷ ಪೂರ್ತಿ ನಾನೇ ಸಿಎಂ ಆಗಿರುತ್ತೇನೆ ಎಂದು ಸವಾಲು ಹಾಕಿದ್ದಾರೆ. ಇಬ್ಬರು ಬಣದ ಶಾಸಕರಲ್ಲಿ, ಡಿ.ಕೆ.ಶಿ ಬಣ ಸ್ವಲ್ಪ ಮೇಲುಗೈ ಸಾಧಿಸಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿ.ಕೆ.ಶಿ ಅವರು ಗುರುವಾರ ರಾತ್ರಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವಮೂರ್ತಿಯನ್ನು ಮನೆಗೆ ಕರೆಸಿಕೊಂಡು ಸಂಕಲ್ಪ ಪೂಜೆ ಮಾಡಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ನಲ್ಲಿ ಈಗ ಎಲ್ಲರ ದೃಷ್ಟಿ ದೆಹಲಿಯ ಕಡೆಗೆ. ಒಂದೆರಡು ದಿನಗಳಲ್ಲಿ ಯಾವ ನಿರ್ಧಾರ ಬರುತ್ತದೆ, ಯಾರ ಕೈ ಮೇಲಾಗುತ್ತದೆ ಎಂಬುದೇ ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆಯಾಗಿದೆ.
