ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್: ತಿಂಡಿ ತಿನ್ನುತ್ತಾ ಇಬ್ಬರೂ ಏನ್ ಮಾತಾಡಿದ್ರು ಗೊತ್ತಾ..?

Web 2025 11 29T102648.290

ಕರ್ನಾಟಕ ರಾಜಕೀಯದಲ್ಲಿ ಈಗ ಎಲ್ಲರ ಕಣ್ಣೂ ಸಿಎಂ ಸಿದ್ದರಾಮಯ್ಯ ಅವರ ‘ಕಾವೇರಿ’ ನಿವಾಸದ ಮೇಲೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಗ್ಗೆ ಬ್ರೇಕ್‌ಫಾಸ್ಟ್ ಜೊತೆಗೆ ಚರ್ಚೆಯೇ ರಾಜ್ಯದ ಮುಂದಿನ ರಾಜಕೀಯ ಚಿತ್ರಣವನ್ನು ನಿರ್ಧರಿಸಲಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ, “ದೆಹಲಿಗೆ ಬರುವ ಮೊದಲು ನೀವಿಬ್ಬರೂ ಕುಳಿತು ಮಾತಾಡಿ, ಒಮ್ಮತದ ನಿರ್ಧಾರಕ್ಕೆ ಬನ್ನಿ.” ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಡಿ.ಕೆ. ಶಿವಕುಮಾರ್ ಅವರು ಸಿಎಂ ನಿವಾಸಕ್ಕೆ ಆಗಮಿಸಿದರು. ಬಾಗಿಲಲ್ಲೇ ನಿಂತು ಡಿಸಿಎಂ ಅವರನ್ನು ಸ್ವಾಗತಿಸಿದ ಸಿದ್ದರಾಮಯ್ಯ ಅವರು, ಸ್ವಲ್ಪ ತಡವಾಗಿ ಬಂದಿದ್ದಕ್ಕೆ ತಮಾಷೆಯ ರೀತಿಯಲ್ಲಿ ಕಿಚಾಯಿಸಿದ್ದಾರೆ ಸಿಎಂ. “ಏನಯ್ಯ ಇಷ್ಟೊಂದು ಲೇಟಾ? ಟೈಮ್ ನೋಡಿಕೊಂಡು ಬಂದ್ಯಾ?” ಎಂದು ಕೇಳಿದ್ದಾರಂತೆ ಸಿಎಂ.

ಕಾವೇರಿ ನಿವಾಸದ ಟಿಫನ್ ರೂಂನಲ್ಲಿ ಇಬ್ಬರೂ ಕುಳಿತು ಚರ್ಚೆ ಆರಂಭಿಸಿದ್ದಾರೆ. ಈ ಬ್ರೇಕ್‌ಫಾಸ್ಟ್ ಮೀಟಿಂಗ್‌ನ ಮುಖ್ಯ ಅಜೆಂಡಾ ಒಂದೇ ಮುಖ್ಯಮಂತ್ರಿ ಸ್ಥಾನದ ರೊಟೇಷನ್. 2023ರ ವಿಧಾನಸಭೆ ಚುನಾವಣೆಗೂ ಮುಂಚೆ ಡಿ.ಕೆ. ಶಿವಕುಮಾರ್ ಅವರಿಗೆ “ಎರಡೂವರೆ ವರ್ಷ ಸಿದ್ದರಾಮಯ್ಯ, ನಂತರ ಎರಡೂವರೆ ವರ್ಷ ನೀನು” ಎಂಬ ಭರವಸೆ ನೀಡಲಾಗಿತ್ತು ಎಂದು ಡಿಕೆ ಶಿವಕುಮಾರ್ ಪಕ್ಷ ಸಭೆಗಳಲ್ಲಿ ಆಗಾಗ ಹೇಳಿಕೊಳ್ಳುತ್ತಾರೆ. ಆದರೆ ಸಿದ್ದರಾಮಯ್ಯ ಅವರು ಈಗ “2025-26ನೇ ಬಜೆಟ್ ಮಂಡಿಸುವವರೆಗೂ ನಾನೇ ಸಿಎಂ ಆಗಿರಬೇಕು” ಎಂಬ ನಿಲುವಿನಲ್ಲಿದ್ದಾರೆ.

ಹೈಕಮಾಂಡ್ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ. “ಒಬ್ಬರೇ ಸಿಎಂ ಆಗಿ ಮುಂದುವರೆಯಲಿ, ರೊಟೇಷನ್ ಬೇಡ.” ಆದರೆ ಡಿ.ಕೆ. ಶಿವಕುಮಾರ್ ಅವರು ತಮಗೆ ಕೊಟ್ಟ ಮಾತನ್ನು ಉಲ್ಲೇಖಿಸುತ್ತಾ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರು ತಮ್ಮ ಅನುಭವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಬಜೆಟ್ ಮಂಡನೆಯನ್ನು ಕಾರಣವಾಗಿಟ್ಟುಕೊಂಡು ಸಿಎಂ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ.

ಈ ಎಲ್ಲ ರಾಜಕೀಯ ಕುದಿಯುವ ಸಂದರ್ಭದಲ್ಲಿ ಇಂದಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಅತ್ಯಂತ ನಿರ್ಣಾಯಕವಾಗಿದೆ. ಇಬ್ಬರೂ ಒಮ್ಮತ ಸಾಧಿಸಿದರೆ ಹೈಕಮಾಂಡ್‌ಗೆ ಒಂದೇ ವರದಿ ಹೋಗಲಿದೆ. ಒಮ್ಮತ ಇಲ್ಲದಿದ್ದರೆ ದೆಹಲಿಯಲ್ಲಿ ಮತ್ತೊಂದು ಸುದೀರ್ಘ ಸಭೆ ಅನಿವಾರ್ಯವಾಗಲಿದೆ.

ಕರ್ನಾಟಕ ರಾಜಕೀಯದ “ಕುರ್ಚಿ ಕ್ಲೈಮ್ಯಾಕ್ಸ್”ಗೆ ಇನ್ನು ಕೆಲವೇ ಕ್ಷಣಗಳು ಬಾಕಿ ಎನ್ನಬಹುದು. ಈ ಬ್ರೇಕ್‌ಫಾಸ್ಟ್ ಟೇಬಲ್ ಮೇಲೆ ಇಡ್ಲಿ-ವಡೆ ಜೊತೆಗೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯ ಉತ್ತರವೂ ಇರಲಿದೆಯೇ?

Exit mobile version