“ಜನವರಿ 6ಕ್ಕೆ ಡಿಕೆಶಿ ಸಿಎಂ ಆದ್ರೆ ಮೊದಲು ಖುಷಿಪಡುವವನು ನಾನೇ”: ಶಿವಗಂಗಾ ಬಸವರಾಜ್

Untitled design 2025 12 13T222012.765

ದಾವಣಗೆರೆ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತು ಮತ್ತೆ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್  ಹೇಳಿದಂತೆ ಜನವರಿ 6ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿದರೆ, ಖುಷಿ ಪಡುವವರಲ್ಲಿ ನಾನೇ ಮೊದಲಿಗರು ಎಂದು ಬಸವರಾಜ್ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರಿಗೆ 6 ಮತ್ತು 9 ಅದೃಷ್ಟ ಸಂಖ್ಯೆಗಳು ಎಂದು ಹೇಳಿದರು. “ಈ ಸಂಖ್ಯೆಗಳಂತೆ ಅವರು ಮುಖ್ಯಮಂತ್ರಿಯಾದರೆ ನಾನು ಅತ್ಯಂತ ಖುಷಿ ಪಡುತ್ತೇನೆ. ಡಿಕೆಶಿ ಅವರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಕಷ್ಟಕ್ಕೆ ತಕ್ಕ ಫಲ ಸಿಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು “ನಾಯಕತ್ವ ಬದಲಾವಣೆ ಇಲ್ಲ, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ” ಎಂದು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಬಸವರಾಜ್, ಆ ಹೇಳಿಕೆಯನ್ನು ಹೈಕಮಾಂಡ್‌ಗೆ ತಿಳಿಸುವುದಾಗಿ ಈಗಾಗಲೇ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎಂದು ನೆನಪಿಸಿದರು. “ಹೈಕಮಾಂಡ್ ಸೂಚನೆಯಂತೆಯೇ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷದಲ್ಲಿ ಶಿಸ್ತು ಪಾಲನಾ ಸಮಿತಿ ಇದೆ. ಆ ಸಮಿತಿ ಬಳಿ ವಿಚಾರ ಹೋದರೆ ಉತ್ತರ ಕೊಡಬೇಕಾಗುತ್ತದೆ. ಯತೀಂದ್ರ ಮಾತನಾಡಿದ್ದು ತಪ್ಪು, ನಾನು ಮಾತನಾಡಿದರೂ ತಪ್ಪು. ಹಿಂದೆ ಇದೇ ರೀತಿ ಮಾತನಾಡಿದವರು ಈಗ ಅನುಭವಿಸುತ್ತಿದ್ದಾರೆ” ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಹೆಸರು ಪ್ರಸ್ತಾಪಿಸಿ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೆಂಬಲಿಗರು ಪ್ರತ್ಯೇಕವಾಗಿ ಡಿನ್ನರ್ ಪಾರ್ಟಿ ನಡೆಸಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಬಸವರಾಜ್ ಸ್ಪಷ್ಟಪಡಿಸಿದರು. “ಶಾಸಕರು ನಿತ್ಯ ಸೇರಿ ಊಟ-ಉಪಾಹಾರ ಮಾಡುತ್ತೇವೆ. ಇದು ಸಾಮಾನ್ಯ ವಿಚಾರ. ಇದರಲ್ಲಿ ವಿಶೇಷ ಏನೂ ಇಲ್ಲ” ಎಂದು ಅವರು ಹೇಳಿದರು.

ಡಿ.ಕೆ. ಶಿವಕುಮಾರ್ ಮತ್ತು ಅವರ ತಂಡ ದೆಹಲಿ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿ ವೋಟ್ ಚೋರಿ ಪ್ರತಿಭಟನೆ ಸಮಾವೇಶದ ಹಿನ್ನೆಲೆಯಲ್ಲಿ ಹೋಗುತ್ತಿದ್ದಾರೆ ಎಂದು ತಿಳಿಸಿದರು. “ನನ್ನ ಬಳಿ ಬೇರೆ ಕಾರ್ಯಕ್ರಮಗಳಿರುವುದರಿಂದ ನಾನು ಹೋಗುತ್ತಿಲ್ಲ” ಎಂದು ಹೇಳಿದರು.

ಈ ಹಿಂದೆ ತಾವೇ “ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ, ರಕ್ತದಲ್ಲಿ ಬರೆದು ಕೊಡುತ್ತೇನೆ” ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ ಬಸವರಾಜ್ ನಗುತ್ತಾ ಹೇಳಿದರು:.”ಜನವರಿಯಲ್ಲಿ ರಕ್ತ ಒಣಗುತ್ತದೆಯೋ ಹಸಿಯಾಗಿ ಇರುತ್ತದೆಯೋ ಕಾದು ನೋಡಬೇಕು. ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಯಾದ ಮೇಲೆ ನೋಡೋಣ. ಈಗ ಇದು ಅನವಶ್ಯಕ ಚರ್ಚೆ. ಸಂಕ್ರಾಂತಿ ಬರುತ್ತಿದೆ, ಎಲ್ಲರಿಗೂ ಖುಷಿಯ ವಿಚಾರ ಸಿಗುತ್ತದೆ. ಎಲ್ಲರಿಗೂ ಒಳ್ಳೆಯದಾಗುತ್ತದೆ. ಜನವರಿ ವೇಳೆಗೆ ಈ ಬಗ್ಗೆ ಮತ್ತೆ ಮಾತನಾಡುತ್ತೇನೆ.” ಎಂದರು.

Exit mobile version