ಆರ್ಸಿಬಿ ಅಭಿಮಾನಿಗಳು ಸಂಭ್ರಮದ ವೇಳೆ ನಡೆದದ್ದು ದೊಡ್ಡ ದುರುಂತ. 11 ಜನ ಅಮಾಯಕರ ಸಾವು ರಾಜ್ಯಕ್ಕೆ ಸೂತಕ ತಂದ್ರೆ, ರಾಜ್ಯ ಸರ್ಕಾರಕ್ಕೂ ಸಂಕಷ್ಟವನ್ನ ತಂದೊಡ್ಡಿದೆ. 18 ವರ್ಷದ ಬಳಿಕ ಕಪ್ ಗೆದ್ದಿರೋ ಖುಷಿಯಲ್ಲಿದ್ದ ಅಮಾಯಕ ಜನರ ಸಾವು ಸಿಎಂ ಸಿದ್ದರಾಮಯ್ಯಗೆ ತಲೆನೋವು ತಂದಿದೆ. ಸರ್ಕಾರ ಪ್ರಕರಣ ಗಂಭೀರವಾಗಿ ತೆಗೆದುಕೊಂಡರೂ ಕೂಡ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದು, ಸಿಎಂ ಸಿದ್ದರಾಮಯ್ಯಗೆ ಟೆನ್ಷನ್ ತಂದಿದೆ.
ಆರ್ಸಿಬಿ, ಆರ್ಸಿಬಿ ಆರ್ಸಿಬಿ ಅಂತ ಕೂಗಾಡಿಕೊಂಡು, ಕೈಯಲ್ಲಿ ಪ್ಲಾಗ್ ಸಂಭ್ರಮಾಚರಣೆ ಮಾಡ್ತಿದ್ದ ಅಮಾಯಕ ಜೀವಗಳು ಬಲಿಯಾಗಿ ಇಂದಿಗೆ ಒಂದು ವಾರ.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಬರೋಬ್ಬರಿ ಹನ್ನೊಂದು ಯುವಕ, ಯುವತಿಯರ ಸಾವನ್ನಪ್ಪಿದ್ದು, ಅವರ ಕುಟುಂಬಸ್ಥರ ಕಣ್ಣೀರು ಕಟ್ಟೆ ಒಡೆದಿದೆ. ರಾಷ್ಟೀಯ ಮಟ್ಟದಲ್ಲೂ ಭಾರೀ ಸದ್ದು ಮಾಡ್ತಿರೋ ಈ ಪ್ರಕರಣ ರಾಜ್ಯ ಸರಕಾರಕ್ಕೆ ಸಂಕಷ್ಟ ತಂದೊಡ್ಡತ್ತಾ ಎನ್ನೋ ಪ್ರಶ್ನೆ ಮೂಡಿದೆ. ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ಗೊಂಡಿತ್ತು. ಘಟನೆ ನಡೆದ ದಿನವೇ ಪ್ರಾಥಮಿಕ ಮಾಹಿತಿ ಪಡೆದಿದ್ದ ವರಿಷ್ಠರು ಈಗ ಸಂಪೂರ್ಣ ವರದಿ ಪಡೆಯಲಿದ್ದಾರೆ. ಹೀಗಾಗಿ ನಾಳೆಯೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ಬರುವಂತೆ ಸೂಚಿಸಿದೆ.
ಈಗಾಗಲೇ ಡಿಸಿಎಂ ಡಿಕೆಶಿ ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದರ ನಡುವೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಸಿದ್ದರಾಮಯ್ಯಗೆ ಟೆನ್ಷೆನ್ ತಂದಿದೆ. ಹೀಗಾಗಿ ಸಿಎಂ ಕಾವೇರಿ ನಿವಾಸದಲ್ಲಿ ಸಾಲು ಸಾಲು ಸಭೆ ನಡೆಸಿ ಸಿಎಂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ ಹೈಕೋರ್ಟ್ ಈಗಾಗಲೇ ಪಿಐಎಲ್ ದಾಖಲಿಸಿಕೊಂಡು ಸರ್ಕಾರಕ್ಕೆ ನೋಟೀಸ್ ಕೂಡ ನೀಡಿದೆ. ಹೀಗಾಗಿ ಕಾನೂನು ಹೋರಾಟದ ಬಗ್ಗೆಯೂ ಗೃಹ ಸಚಿವ ಜಿ ಪರಮೇಶ್ವರ್, ಕಾನೂನು ಹೆಚ್ ಕೆ ಪಾಟೀಲ ಅವರ ಜೊತೆಗೆ ಸಿಎಂ ಸಿದ್ದರಾಮಯ್ಯ ಸುಧೀರ್ಘ ಸಭೆ ನಡೆಸಿದ್ದಾರೆ. ಇನ್ನೂ ನಾಳೆ ಬೆಳಿಗ್ಗೆ ರಾಹುಲ್ ಗಾಂಧಿ ಭೇಟಿಗೆ 11 ಗಂಟೆಗೆ ಸಮಯ ನಿಗದಿ ಮಾಡಲಾಗಿದ್ದು, ಸಭೆಯಲ್ಲಿ ಲೋಪದೋಷದ ಬಗ್ಗೆಯೂ ಚರ್ಚೆಯಾಗಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಗೆ ಮುಜುಗರವಾಗಿರುವ ಕಾಲ್ತುಳಿತ ದುರಂತದ ಬಗ್ಗೆ ಖುದ್ದುಯಾಗಿ ರಾಹುಲ್ ಗಾಂಧಿ ವರದಿ ಪಡೆದುಕೊಳ್ಳಲಿದ್ದಾರೆ.
ಇನ್ನೂ ಇದೇ ವೇಳೆ ಹೆಚ್ಚುವರಿ ಸಮಯದ ಸಿಕ್ಕರೆ, ಸಂಪುಟ ವಿಸ್ತರಣೆ, ವಿಧಾನ ಪರಿಷತ್ ಸದಸ್ಯರ ಆಯ್ಕೆ ಕುರಿತಂತೆಯೂ ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸುವ ಸಾಧ್ಯತೆ ಇದೆ. ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮದಲ್ಲಿದ್ದ ಸಿಎಂ ಸಿದ್ದರಾಮಯ್ಯಗೆ ಆರ್ಸಿಬಿ ಅಭಿಮಾನಿಗಳ ಸಾವಿನ ಪ್ರಕರಣ ಟೆನ್ಷನ್ ಹೆಚ್ಚಿಸಿದ್ದಂತೂ ಸುಳ್ಳಲ್ಲ..
ದುರ್ಗೇಶ್ ನಾಯಿಕ, ಪೊಲಿಟಿಕಲ್ ಬ್ಯೂರೋ ಗ್ಯಾರಂಟಿ ನ್ಯೂಸ್ ಬೆಂಗಳೂರು..