ಕೊಪ್ಪಳ: ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರು ಬಿಜೆಪಿ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಿಹಾರ ಚುನಾವಣೆಯ ಮೊದಲ ಹಂತದಲ್ಲಿ ಚುಂಚುಕಿ ಗೆಲುವಿನ ನಂತರ ಎರಡನೇ ಹಂತದಲ್ಲಿ ಗೆಲುವು ಅನುಮಾನ ಎಂಬ ಕಾರಣಕ್ಕೆ ಈ ಬಾಂಬ್ ಸ್ಫೋಟ ಘಟನೆ ನಡೆದಿರಬಹುದು ಎಂದು ಅನುಮಾನ ತೋರಿದ್ದಾರೆ.
ಬಿಜೆಪಿ ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಬಳಸಿಕೊಳ್ಳುತ್ತಾರೆ, ಏನು ಬೇಕಾದರೂ ಮಾಡುತ್ತಾರೆ ಎಂದು ರಾಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಪ್ರಧಾನಮಂತ್ರಿ ಹೇಳುವಷ್ಟು ಸ್ವಚ್ಛ ಇಲ್ಲ. ನಾನು ನೇರವಾಗಿ ಕೈವಾಡ ಇದೆ ಎಂದು ಹೇಳುತ್ತಿಲ್ಲ, ಆದರೆ ನನ್ನ ಬಳಿ ಪುರಾವೆ ಇಲ್ಲ, ನನಗೆ ಅನುಮಾನವಷ್ಟೇ ಇರೋದು ಎಂದು ತಮ್ಮ ಆರೋಪಿಸಿದ್ದಾರೆ.
ಈ ಆರೋಪಗಳ ಜೊತೆಗೆ, ರಾಯರೆಡ್ಡಿ ಅವರು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರತ್ತ ತೀವ್ರ ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು. ನೈತಿಕತೆ ಇದ್ದರೆ ಅಮಿತ್ ಶಾ ರಾಜೀನಾಮೆ ನೀಡಲಿ. ಮೋದಿ ದೇಶದ ಜನರ ಬಳಿ ಕ್ಷಮೆ ಕೇಳಲಿ ಎಂದು ಡಿಮಾಂಡ್ ಮಾಡಿದರು. ದೆಹಲಿ ಸ್ಫೋಟವನ್ನು ಕಟ್ಟಿಕೊಂಡು ಖಂಡಿಸಿದ ಅವರು, ಇದು ಒಂದು ಹೀನ ಕೃತ್ಯ. ಪಾಕಿಸ್ತಾನದ ಸಂಘಟನೆಗಳ ಜೊತೆ ಸಂಬಂಧ ಇದೆ ಅಂತ ತಿಳಿದು ಬಂದಿದೆ. ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ವಿಭಾಗ ಸಂಪೂರ್ಣ ವಿಫಲವಾಗಿದೆ. ಸ್ಫೋಟಗೊಂಡ ಕಾರನ್ನು ಬೆಳಗ್ಗೆಯಿಂದಲೇ ವಾಚ್ ಮಾಡುತ್ತಿದ್ದೇವೆ ಅಂದಿದ್ದಾರೆ, ಹಾಗಿದ್ದರೂ ಸ್ಫೋಟ ಯಾಕೆ ಆಯಿತು ? ಎಂದು ಪ್ರಶ್ನಿಸಿದರು.
ರಾಜ್ಯಗಳಲ್ಲಿ ಸಣ್ಣ ಸಣ್ಣ ಘಟನೆಗಳಿಗೆ ಬಿಜೆಪಿ ನಾಯಕರು ರಾಜೀನಾಮೆ ಕೇಳುವುದನ್ನು ಉದಾಹರಿಸಿದ ರಾಯರೆಡ್ಡಿ, ಇಂತಹ ದೊಡ್ಡ ಭದ್ರತಾ ವಿಫಲತೆಗೆ ಇವತ್ತು ಯಾಕೆ ರಾಜೀನಾಮೆ ಕೇಳುತ್ತಿಲ್ಲ ? ಇದು ಬಿಜೆಪಿಯ ದ್ವಿಮುಖ ನೀತಿ ಎಂದು ದೂಷಿಸಿದರು. ಕೇಂದ್ರ ಸರ್ಕಾರ ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ಘೋಷಿಸಬೇಕು ಎಂದು ಕೋರಿದ ಅವರು, ಮೋದಿ ಅವರಿಗೆ ಈ ಶಕ್ತಿ ಇದೆಯಾ ? ಹುಡುಕಿ ಹೊಡೆಯುತ್ತಿದ್ದೇವೆ ಅಂತಾರೆ, ಆದರೆ ದೇಶದಲ್ಲೇ ಭದ್ರತೆ ಇಲ್ಲ. ದೇಶದ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸ ಮತ್ತು ಸಚಿವ ಸ್ಥಾನದ ಕುರಿತು ಮಾಧ್ಯಮಗಳಲ್ಲಿ ಬಂದ ಊಹಾಪೋಹಗಳ ಬಗ್ಗೆಯೂ ರಾಯರೆಡ್ಡಿ ಮಾತನಾಡಿದರು. ಸಿಎಂ ಅವರು ದೆಹಲಿಗೆ ಹೋಗ್ತಿದ್ದು, ನನಗೂ ಬರೋಕೆ ಹೇಳಿದ್ದಾರೆ. ಅದು ಸಚಿವ ಸಂಪುಟ ಚರ್ಚೆಗೆ ಅಲ್ಲ. ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆಗೆ. ಮಂತ್ರಿಗಳನ್ನ ಮಾಡೋದು ಸಿಎಂ ಅವರ ಪರಮಾಧಿಕಾರ ಎಂದು ಸ್ಪಷ್ಟಪಡಿಸಿದರು. ಸಚಿವರಾಗಲು ಸಂವಿಧಾನದಲ್ಲಿ ಹಿರಿತನ ಅಥವಾ ಕೌಶಲ್ಯಕ್ಕೆ ಅವಕಾಶ ಇಲ್ಲವೆಂದೂ, 26 ವರ್ಷ ವಯಸ್ಸು ಸಾಕೆಂದೂ ತಿಳಿಸಿದರು. ಸಚಿವ ಸ್ಥಾನ ನಾನು ಕೇಳಿದ್ದೀನಿ. ಸಿಎಂ ಅವರು ನೋಡೋಣ ಅಂದಿದ್ದಾರೆ. ನನ್ನ ಪ್ರಕಾರ ಸಿಎಂ ಬದಲಾವಣೆ ಇಲ್ಲ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂದರು.
ಕೊನೆಯಲ್ಲಿ, ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ (ಡಿಕೆಶಿ) ಅವರ ಶಾಸಕರ ಸಂಖ್ಯಾಬಲ ಮುಖ್ಯ ಅಲ್ಲ ಎಂಬ ಹೇಳಿಕೆಗೆ ಬೆಂಬಲ ನೀಡಿದ ರಾಯರೆಡ್ಡಿ, ಡಿಕೆಶಿ ಅವರು ಹೇಳಿದ್ದರಲ್ಲಿ ಯಾವುದೂ ತಪ್ಪಿಲ್ಲ. ನಾನಂತೂ ಮಂತ್ರಿ ಆಗ್ತಿನೊ ಬಿಡ್ತಿನೋ ಗೊತ್ತಿಲ್ಲ, ಆದರೆ ಸಿದ್ದರಾಮಯ್ಯಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ.
