ರಾಯಚೂರು, ಮಾರ್ಚ್ 30: ಕೇವಲ ಐದು ದಿನಗಳ ಹಿಂದೆಯೇ ಮಗುವಿಗೆ ಜನ್ಮ ನೀಡಿದ 22 ವರ್ಷದ ಬಾಣಂತಿಯೊಬ್ಬರು ಖಾಸಗಿ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿನ ಹಿಂದೆ ದೆವ್ವದ ಕೈವಾಡವಿದೆ ಎಂಬ ಮಾತುಗಳು ಸ್ಥಳೀಯರಲ್ಲಿ ಹರಡುತ್ತಿವೆ.
ಮೃತ ಬಾಣಂತಿಯ ಹೆಸರು ವಾಸವಿ (22). ಅವರು ಮಾನ್ವಿ ಪಟ್ಟಣದ ನಿವಾಸಿಯಾಗಿದ್ದರು. ಐದು ದಿನಗಳ ಹಿಂದೆ ವಾಸವಿ ಮುದ್ದಾದ ಮಗುವೊಂದಕ್ಕೆ ಜನ್ಮ ನೀಡಿದ್ದರು. ಆದರೆ ಮಗು ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮಾನ್ವಿಯ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪ್ರತಿದಿನ ವಾಸವಿ ಆಸ್ಪತ್ರೆಗೆ ಬಂದು ಮಗುವಿಗೆ ಹಾಲುಣಿಸಿ ಹೋಗುತ್ತಿದ್ದರು.
ಮಾರ್ಚ್ 26ರಂದು ನಡೆದ ಘಟನೆ
ಮಾರ್ಚ್ 26ರಂದು ಕೂಡ ವಾಸವಿ ಮಗುವಿಗೆ ಹಾಲುಣಿಸಲು ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಆ ದಿನ ಅವರು ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವಾಸವಿ ಮೆಟ್ಟಿಲುಗಳ ಮೂಲಕ ಮೇಲ್ಮಹಡಿಗೆ ಹೋಗುತ್ತಿರುವ ದೃಶ್ಯ ಸ್ಪಷ್ಟವಾಗಿ ಕಾಣುತ್ತದೆ.
ಸಾವಿನ ಹಿಂದೆ ದೆವ್ವದ ಕೈವಾಡವೇ?
ಸಿಸಿಟಿವಿ ದೃಶ್ಯ ನೋಡಿದ ಸ್ಥಳೀಯರು ಇದು ದೆವ್ವದ ಕೆಲಸ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಘಟನೆಯ ಹಿಂದೆ ಅಲೌಕಿಕ ಶಕ್ತಿಯ ಕೈವಾಡವಿದೆ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಅಂಶವೆಂದರೆ, ಮಗು ಹೆಣ್ಣು ಎಂಬ ಕಾರಣಕ್ಕೆ ಗಂಡನ ಮನೆಯವರು ವಾಸವಿಗೆ ನೋವಿನ ಮಾತುಗಳನ್ನಾಡಿದ್ದಾರೆ ಎಂದು ತಿಳಿದುಬಂದಿದೆ. ಹೆಣ್ಣು ಮಗು ಜನಿಸಿದ್ದಕ್ಕೆ ಮನೆಯಲ್ಲಿ ಅಸಮಾಧಾನ ವ್ಯಕ್ತವಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದು ವಾಸವಿ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರಬಹುದೇ ಎಂಬ ಕುತೂಹಲ ವ್ಯಕ್ತವಾಗಿದೆ.
ಪೊಲೀಸ್ ತನಿಖೆ ಪ್ರಾರಂಭ
ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ವಾಸವಿ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಕುಟುಂಬಸ್ಥರು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
