ಇಡಿ ದಾಳಿಗಳು ರಾಜಕೀಯ ಪ್ರೇರಿತ, ತನಿಖಾ ಸಂಸ್ಥೆಗಳು ಕೇಂದ್ರದ ಕೈಗೊಂಬೆ: ಪ್ರಿಯಾಂಕ್ ಖರ್ಗೆ ಆರೋಪ

Web Photo Editor (32)

ಪಾಕಿಸ್ತಾನದ ಉಗ್ರ ಸಂಘಟನೆಯೊಂದರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆಯ ಮೇರೆಗೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಮಾಹಿತಿಯ ಪ್ರಕಾರ ಬಂಧಿತ ವ್ಯಕ್ತಿ ಕೆಲಸ ಅರಸಿ ದಾವಣಗೆರೆಗೆ ಬಂದಿದ್ದ. ಆತನ ಮೊಬೈಲ್‌ ಫೋನ್‌ ಪರಿಶೀಲನೆ ವೇಳೆ ಕೆಲವು ಮಹತ್ವದ ಮಾಹಿತಿ ಪತ್ತೆಯಾಗಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯೊಂದಿಗೆ ಚಾಟ್ ಮೂಲಕ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಸರ್ ಎಂವಿ ಡೀಪ್ ಟೆಕ್ ಪಾರ್ಕ್‌ಗೆ ಭೂಸ್ವಾಧೀನ ಕುರಿತು ಪ್ರತಿಕ್ರಿಯೆ

ಶಿಡ್ಲಘಟ್ಟದಲ್ಲಿ ಸರ್ ಎಂವಿ ಡೀಪ್ ಟೆಕ್ ಪಾರ್ಕ್‌ಗಾಗಿ 2,800 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಭಿವೃದ್ಧಿ ಯೋಜನೆಗಳಿಗೆ ನಿರಂತರ ವಿರೋಧ ವ್ಯಕ್ತವಾದರೆ ಏರೋಸ್ಪೇಸ್, ಟೆಕ್ ಪಾರ್ಕ್ ಹಾಗೂ ಟೌನ್‌ಶಿಪ್‌ಗಳ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು, ಸುಮಾರು 8.5 ಶೇಕಡಾ ದರದಲ್ಲಿ ಅಭಿವೃದ್ಧಿಯಾಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿ ನೀತಿಗಳು ಬೆಂಗಳೂರಿನಾಚೆಗೆ ವಿಸ್ತರಿಸಬೇಕಾಗಿದೆ ಎಂದು ಹೇಳಿದರು.

ರೈತರ ಭೂಮಿಯನ್ನು ಕಾನೂನುಬದ್ಧವಾಗಿ ಹಾಗೂ ಅವರ ಒಪ್ಪಿಗೆ ಪಡೆದು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ರೈತರು ಭೂಮಿ ನೀಡಲು ಸಮ್ಮತಿಸದಿದ್ದರೆ ಯೋಜನೆಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗುತ್ತದೆ. ಗೊಂದಲ ಸೃಷ್ಟಿ ಮಾಡಿದರೆ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂದರು.

ಡ್ರಗ್ಸ್ ಹಾವಳಿ ಕುರಿತು ಬಿಜೆಪಿ ನಾಯಕರ ಟೀಕೆಗೆ ತಿರುಗೇಟು

ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಮೊದಲು ಬಿಜೆಪಿ ನಾಯಕರು ತಮ್ಮ ಆಡಳಿತದ ಅವಧಿಯನ್ನು ಅವಲೋಕಿಸಿಕೊಳ್ಳಲಿ ಎಂದು ಹೇಳಿದರು. “ನನ್ನ ಹೆಸರು ಪ್ರಸ್ತಾಪ ಮಾಡದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ. ನನ್ನ ಬಗ್ಗೆ ಉತ್ತಮ ಪಿಆರ್ ಇದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅದರಿಂದ ಅವರಿಗೆ ಏನು ಸಂಬಂಧ?” ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತಾವಧಿಯಲ್ಲಿಯೂ ಅಪರಾಧಗಳು ನಡೆದಿವೆ. ಡ್ರಗ್ಸ್ ಸಮಸ್ಯೆ ಆಗಿಲ್ಲವೇ?. ಅಪರಾಧ ತಡೆಯುವ ಸಾಮರ್ಥ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದರು.

ಇಡಿ ದಾಳಿಗಳು ರಾಜಕೀಯ ಪ್ರೇರಿತ: ಪ್ರಿಯಾಂಕ್ ಖರ್ಗೆ

ಇತ್ತೀಚಿನ ಜಾರಿ ನಿರ್ದೇಶನಾಲಯ (ED) ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ದೇಶಾದ್ಯಂತ ಸಾವಿರಾರು ದಾಳಿಗಳು ನಡೆದಿದ್ದರೂ ಶಿಕ್ಷೆಗೆ ಒಳಗಾದ ಪ್ರಕರಣಗಳ ಪ್ರಮಾಣ ಅತ್ಯಂತ ಕಡಿಮೆಯಿದೆ. ಇವು ರಾಜಕೀಯ ಪ್ರೇರಿತ ದಾಳಿಗಳಾಗಿದ್ದು, ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಟೀಕಿಸಿದರು. “ನಮ್ಮ ಮೇಲೂ ಇವತ್ತಲ್ಲ ನಾಳೆ ಐಟಿ ಅಥವಾ ಇಡಿ ದಾಳಿ ನಡೆಯಬಹುದು. ಏನು ಬೇಕಾದರೂ ಆಗಬಹುದು” ಎಂದು ಹೇಳಿದರು. 

 

Exit mobile version