ಪಹಲ್ಗಾಮ್‌ನಲ್ಲಿ ಭಯಾನಕ ಉಗ್ರ ದಾಳಿ: ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ದಿನೇಶ್ ಗುಂಡೂರಾವ್

ಭಾರತೀಯರಿಗೆ ಒಗ್ಗಟ್ಟಿನ ಕರೆ ನೀಡಿದ ಸಚಿವ ದಿನೇಶ್ ಗುಂಡೂರಾವ್

123 2025 04 23t105529.985

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಅತ್ಯಂತ ಭೀಕರ ಮತ್ತು ನೀಚವಾದ ಕೃತ್ಯವಾಗಿದೆ. ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಇಡೀ ದೇಶವನ್ನು ಆಳವಾದ ದುಃಖಕ್ಕೆ ದೂಡಿದೆ. ಈ ಕ್ರೂರ ಘಟನೆಯು ಕನ್ನಡದ ಚಿಂತಕ ಪೂರ್ಣಚಂದ್ರ ತೇಜಸ್ವಿಯವರ “ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯಾ?” ಎಂಬ ಮಾತನ್ನು ನೆನಪಿಸುತ್ತದೆ.

ಪಹಲ್ಗಾಮ್‌ನ ಈ ದಾಳಿಯು ಕೇವಲ ಭಯೋತ್ಪಾದಕ ಕೃತ್ಯವಷ್ಟೇ ಅಲ್ಲ; ಇದು ಮಾನವೀಯತೆಯ ವಿರುದ್ಧ, ಭಾರತದ ಸಾರ್ವಭೌಮತ್ವದ ವಿರುದ್ಧ ಮತ್ತು ಈ ನೆಲದ ಅಸ್ಮಿತೆಯ ಮೇಲಿನ ನೇರ ದಾಳಿಯಾಗಿದೆ. ಈ ಕೃತ್ಯದ ಹಿಂದಿರುವ ಶಕ್ತಿಗಳನ್ನು ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಿನಿಂದ ತಡೆಗಟ್ಟಲೇಬೇಕು.

ADVERTISEMENT
ADVERTISEMENT

ಸಂವಿಧಾನದ 370ನೇ ವಿಧಿಯ ರದ್ದತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂಬ ಸುಳ್ಳು ಕಥೆಯನ್ನು ಕೇಂದ್ರ ಸರ್ಕಾರವು ಹರಡಿತ್ತು. ಆದರೆ, ಕಣಿವೆ ರಾಜ್ಯದಲ್ಲಿ ಉಗ್ರ ಕೃತ್ಯಗಳು ತಡೆಯಿಲ್ಲದೆ ಮುಂದುವರೆದಿರುವುದಕ್ಕೆ ಈ ದಾಳಿಯೇ ಸಾಕ್ಷಿಯಾಗಿದೆ. ದೇಶದ ಭದ್ರತೆಯ ವಿಷಯದಲ್ಲಿ ಕೇಂದ್ರ ಸರ್ಕಾರವು ಇನ್ನಾದರೂ ಸುಳ್ಳು ಹೇಳುವ ಚಾಳಿಯನ್ನು ಬಿಡಬೇಕಾಗಿದೆ.

ಪಾಕಿಸ್ತಾನದ ಬೆಂಬಲವಿಲ್ಲದೆ, ಆ ದೇಶದ ಗುಪ್ತಚರ ಸಂಸ್ಥೆಗಳ ಕೈವಾಡವಿಲ್ಲದೆ ಪಹಲ್ಗಾಮ್‌ನಂತಹ ವ್ಯವಸ್ಥಿತ ದಾಳಿಯು ಸಾಧ್ಯವೇ ಇಲ್ಲ. ಈ ಕೃತ್ಯದ ಹಿಂದಿನ ಪಾಕಿಸ್ತಾನದ ಪಾತ್ರವನ್ನು ಜಗತ್ತಿಗೆ ಸಾಬೀತುಪಡಿಸುವ ಜವಾಬ್ದಾರಿಯು ಕೇಂದ್ರ ಸರ್ಕಾರದ ಮೇಲಿದೆ. ಈ ದಾಳಿಯನ್ನು ಖಂಡಿಸಿ, ದೇಶದ ಒಗ್ಗಟ್ಟಿನೊಂದಿಗೆ ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತುವ ಸಂದರ್ಭವಿದು ಎಂದು ಸಚಿವ ದಿನೇಶ್ ಗುಂಡೂರಾವ್ ಟೀಟ್ ಮಾಡಿದ್ದಾರೆ.

    Exit mobile version