ಕೃಷ್ಣ ಬೈರೇಗೌಡರನ್ನು ನೋಡಿದ್ರೆ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ: ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ

ಕೃಷ್ಣ ಬೈರೇಗೌಡರನ್ನು ನೋಡಿದ್ರೆ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ: ನಿಖಿಲ್ ವ್ಯಂಗ್ಯ

Untitled design 2026 06 17T125724.927

ಬೆಂಗಳೂರು, ಜೂನ್ 17: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಲು 12 ದಿನಗಳ ಕಾಲ ವಿಳಂಬ ಮಾಡಿದ ಕೃಷ್ಣ ಬೈರೇಗೌಡ (Krishna Byre Gowda) ಅವರನ್ನು ಜೆಡಿಎಸ್ (JDS) ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತೀವ್ರ ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಬೆಂಗಳೂರಿನ ಸಿಲ್ಕ್ ಬೋರ್ಡ್ ಸಿಗ್ನಲ್‌‌ನಲ್ಲಿ ಆಗಾಗ್ಗೆ ಸಂಭವಿಸುವ ಟ್ರಾಫಿಕ್ ಜಾಮ್‌ಗೆ (Silk Board Traffic Jam) ಹೋಲಿಕೆ ಮಾಡಿರುವ ನಿಖಿಲ್, ಸಚಿವರ ವಿಳಂಬವನ್ನು ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯಾಗಿ ಪ್ರಶ್ನಿಸಿದ್ದಾರೆ.

ಏನಿದು ವಿವಾದ?
ಕಳೆದ ಎರಡು ವಾರಗಳಿಂದ ಅಧಿಕಾರ ಸ್ವೀಕರಿಸದೇ ಸುಮ್ಮನಿದ್ದ ಕೃಷ್ಣ ಬೈರೇಗೌಡ ಅವರು ಮಂಗಳವಾರ ತಮ್ಮ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಬಿಡಿಎ (BDA) ಮತ್ತು ಬಿಎಂಆರ್ಸಿಎಲ್ (BMRCL) ಖಾತೆಗಳು ತಮಗೆ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಅವರು, ಸಚಿವ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದರೂ, ಇಲಾಖೆಯ ಅಧಿಕಾರವನ್ನು ಸ್ವೀಕರಿಸದೆ ವಿಳಂಬ ಮಾಡಿದ್ದರು. ಈ ವಿಳಂಬವನ್ನು ನಿಖಿಲ್ ಕುಮಾರಸ್ವಾಮಿ ಅವರು, “ನೋಡಿದ್ರೆ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ” ಎಂದು ವ್ಯಂಗ್ಯವಾಡಿದ್ದಾರೆ.

ನಿಖಿಲ್ ಅವರ ಎಕ್ಸ್ ಪೋಸ್ಟ್ ನ ಸಂಪೂರ್ಣ ವಿವರ
ನಿಖಿಲ್ ಕುಮಾರಸ್ವಾಮಿ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪೋಸ್ಟ್‌‌ನಲ್ಲಿ, “ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಕೃಷ್ಣ ಬೈರೇಗೌಡ ಅವರಿಗೆ ಅಭಿನಂದನೆಗಳು. ಆದ್ರೆ ಅಧಿಕಾರ ವಹಿಸಿಕೊಳ್ಳೋಕೆ 12 ದಿನ ಕಾಯಿಸಿದ್ದು ನೋಡಿದ್ರೆ, ನಮ್ಮ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ” ಎಂದು ಹಾಸ್ಯದ ಮೂಲಕ ಸಚಿವರನ್ನು ಅಣಕಿಸಿದ್ದಾರೆ. ನಿಮ್ಮ ಮುಂದೆ ಒಂದು ವಿಶಿಷ್ಟ ಸವಾಲಿದೆ. ನಿಮ್ಮ ಖಾತೆಗೆ ‘ನಗರಾಭಿವೃದ್ಧಿ’ ಅಂತ ಹೆಸರೇನೋ ಇದೆ, ಆದರೆ ಟೌನ್ ಪ್ಲಾನಿಂಗ್ ಸಂಸ್ಥೆಗಳಾದ BDA ಮತ್ತು BMRDA ಮಾತ್ರ ಮುಖ್ಯಮಂತ್ರಿಗಳ ಬಳಿಯೇ ಇವೆ. ಬ್ಲೂಪ್ರಿಂಟ್ ಇಲ್ಲದೆ ನಗರವನ್ನು ಅಭಿವೃದ್ಧಿ ಮಾಡುವುದು ನಿಜಕ್ಕೂ ದೊಡ್ಡ ಸವಾಲು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ತ್ರಿಮೂರ್ತಿ’ ಸಮಸ್ಯೆಗಳತ್ತ ಗಮನಸೆಳೆದ ನಿಖಿಲ್
ನಿಖಿಲ್ ಅವರು ತಮ್ಮ ಪೋಸ್ಟ್‌‌ನಲ್ಲಿ ಮತ್ತಷ್ಟು ವಿವರಿಸುತ್ತಾ, “ನಿಮ್ಮ ಹಳೇ ಟ್ರ್ಯಾಕ್ ರೆಕಾರ್ಡ್ ನಮಗೆ ಗೊತ್ತು. ಹಿಂದೆ ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಬಳಸಿ ನೀವು ತಂದ ವ್ಯವಸ್ಥಿತ ಸುಧಾರಣೆಗಳು ಜನರ ಮನಸ್ಸಿನಲ್ಲಿದೆ. ಎಷ್ಟೇ ಗೊಂದಲಮಯ ವ್ಯವಸ್ಥೆ ಇದ್ದರೂ ಅದನ್ನು ಸರಿಪಡಿಸುವ ಸಾಮರ್ಥ್ಯ ನಿಮಗಿದೆ. ಸದ್ಯಕ್ಕೆ ನಿಮ್ಮ ಮುಖ್ಯ ಜವಾಬ್ದಾರಿ ಬೆಂಗಳೂರಿನ ‘ತ್ರಿಮೂರ್ತಿ’ ಸಮಸ್ಯೆಗಳ ಮೇಲೆ ನಿಂತಿದೆ. ಕಸ (Garbage), ಒಳಚರಂಡಿ (Sewage) ಮತ್ತು ರಾಜಕಾಲುವೆ (Drainage)” ಎಂದು ಹೇಳಿದ್ದಾರೆ. ಈ ಮೂಲಕ ಬೆಂಗಳೂರಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವತ್ತ ಸಚಿವರು ಗಮನ ಹರಿಸಬೇಕು ಎಂಬ ಸಂದೇಶವನ್ನು ನಿಖಿಲ್ ನೀಡಿದ್ದಾರೆ.

ನಿಜವಾದ ಬದಲಾವಣೆಯ ನಿರೀಕ್ಷೆ
ನಿಖಿಲ್ ಕುಮಾರಸ್ವಾಮಿ ಮತ್ತಷ್ಟು ಹೇಳುತ್ತಾ, “ಈಗಷ್ಟೇ ಮುಂಗಾರು ಶುರುವಾಗಿರುವುದರಿಂದ ಬೆಂಗಳೂರಿಗರಿಗೆ ಈಗ ದೊಡ್ಡ ದೊಡ್ಡ ಸ್ಕೈವಾಕ್ ಗಳು ಬೇಡ, ಮಳೆ ನೀರು ಸರಾಗವಾಗಿ ಹರಿದು ಹೋಗುವ ಚರಂಡಿಗಳು, ಉಕ್ಕಿ ಹರಿಯದ ಒಳಚರಂಡಿ ಹಾಗೂ ಸ್ವಚ್ಛ ರಸ್ತೆಗಳು ಬೇಕು. ಈ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದರೆ ಸಾಕು, ಬೆಂಗಳೂರಿಗರು ನೆಮ್ಮದಿಯ ಜೀವನ ನಡೆಸಬಹುದು. ಹೊಣೆಗಾರಿಕೆ ನಿಮ್ಮದು, ಬದಲಾವಣೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಮಿನಿಸ್ಟರ್ ಸರ್” ಎಂದು ವಿನಮ್ರವಾಗಿ ಸಚಿವರಿಗೆ ಸಲಹೆ ನೀಡಿದ್ದಾರೆ.

ಕೃಷ್ಣ ಬೈರೇಗೌಡರ ಪ್ರತಿಕ್ರಿಯೆ
ಸಚಿವ ಕೃಷ್ಣ ಬೈರೇಗೌಡ ಅವರು ಇದುವರೆಗೆ ನಿಖಿಲ್ ಅವರ ವ್ಯಂಗ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತಮ್ಮ ಅನುಭವ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲು ತಾನು ಸಂಪೂರ್ಣ ಸಿದ್ಧ ಎಂದು ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಅವರು ನಗರದ ಕಸ ವಿಲೇವಾರಿ, ಮಳೆ ನೀರು ನಿರ್ವಹಣೆ ಮತ್ತು ರಸ್ತೆಗಳ ದುರಸ್ಥಿ ಸೇರಿದಂತೆ ಹಲವು ವಿಷಯಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಾರ್ವಜನಿಕರು ತಮ್ಮತ್ತ ನಿರೀಕ್ಷೆ ಇಟ್ಟಿದ್ದಾರೆ ಎಂಬುದು ಅವರಿಗೆ ತಿಳಿದಿದ್ದು, ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version